ಸಾರಾಂಶ
ಇಂತಹ ಕಾರ್ಯಕ್ರಮ ಆಯೋಜಿಸಿ ಜನರ ಮನ್ನಣೆಗಳಿಸುವುದು ಸುಲಭವಲ್ಲ. ಈ ರೀತಿ ಕಾರ್ಯಕ್ರಮಗಳಿಂದ ಎಲ್ಲರಿಗೂ ಉಪಯುಕ್ತವಾಗುತ್ತದೆ.
ಕನ್ನಡಪ್ರಭ ವಾರ್ತೆ ಮೈಸೂರು
ಕೇಂದ್ರ ಸಂಸ್ಕೃತಿ ಸಚಿವಾಲಯದ ಅಧೀನದ ಸಂಗೀತ ನಾಟಕ ಅಕಾಡೆಮಿಯು ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ ಸಹಯೋಗದಲ್ಲಿ ವಿಶ್ವ ನೃತ್ಯ ದಿನಾಚರಣೆ ಅಂಗವಾಗಿ ಆಯೋಜಿಸಿರುವ 5 ದಿನಗಳ ಎಸ್ಎನ್ಎ ಫೆಲೋಗಳು ಮತ್ತು ಪ್ರಶಸ್ತಿ ಪುರಸ್ಕೃತರ ಸಂಗೀತ ಮತ್ತು ನೃತ್ಯೋತ್ಸವವು ಮಂಗಳವಾರ ಆರಂಭವಾಯಿತು.ಈ ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ವೀಣಾ ವಾದಕ ಆರ್. ವಿಶ್ವೇಶ್ವರನ್ ಮಾತನಾಡಿ, ಭಾರತೀಯ ಸಾಂಸ್ಕೃತಿಕ ವಲಯದಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ಅತ್ಯುತ್ತಮ ಪ್ರಶಸ್ತಿ ಎಂದು ಗುರುತಿಸಲಾಗುತ್ತದೆ. ಇಂತಹ ಸಂಸ್ಥೆಯೂ ಮೈಸೂರಿನಲ್ಲಿ ಈ ರೀತಿ ಉತ್ಸವ ಆಯೋಜಿಸಿರುವುದು ಸಂತಸವಾಗುತ್ತಿದೆ ಎಂದರು.ಹಿರಿಯ ಭರತನಾಟ್ಯ ಗುರು ಡಾ. ಲಲಿತಾ ಶ್ರೀನಿವಾಸ್ ಮಾತನಾಡಿ, ಇಂತಹ ಕಾರ್ಯಕ್ರಮ ಆಯೋಜಿಸಿ ಜನರ ಮನ್ನಣೆಗಳಿಸುವುದು ಸುಲಭವಲ್ಲ. ಈ ರೀತಿ ಕಾರ್ಯಕ್ರಮಗಳಿಂದ ಎಲ್ಲರಿಗೂ ಉಪಯುಕ್ತವಾಗುತ್ತದೆ. ಮುಂದಿನ ದಿನಗಳಲ್ಲಿ ಇದೇ ರೀತಿ ಕಾರ್ಯಕ್ರಮ ಆಯೋಜಿಸಿ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ ಕುಲಪತಿ ಪ್ರೊ. ನಾಗೇಶ್ ವಿ. ಬೆಟ್ಟಕೋಟೆ ಮಾತನಾಡಿ, ಸಂಗೀತ ನಾಟಕ ಅಕಾಡೆಮಿ ನಮ್ಮ ಮೇಲೆ ನಂಬಿಕೆ ಇರಿಸಿ ಮೈಸೂರಿನಲ್ಲಿ ಉತ್ಸವಕ್ಕೆ ಅವಕಾಶ ನೀಡಲಾಗಿದೆ. ನಮ್ಮ ಕಲೆ ಉಳಿಯಬೇಕು ಎಂದರೆ ಶೈಕ್ಷಣಿಕವಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ವಿವಿ ಉತ್ತಮ ಕೆಲಸ ಮಾಡುತ್ತಿದೆ ಎಂದರು.ಭಾರತೀಯ ಸಂಗೀತ ಎಂದ ತಕ್ಷಣ ಹಿಂದೂಸ್ಥಾನಿ ಸಂಗೀತ ಎಂಬುದು ಮಾತ್ರ ಇದೆ. ಕರ್ನಾಟಕ ಸಂಗೀತ ಕೂಡ ತನ್ನದೇ ಆದ ಛಾಪು ಹೊಂದಿದೆ. ಎಲ್ಲಾ ಪ್ರಕಾರದ ಕಲೆ, ಸಂಗೀತಕ್ಕೂ ಸಂಗೀತ ನಾಟಕ ಅಕಾಡೆಮಿ ಯಾವುದೇ ಬೇಧ ಭಾವ ಮಾಡದೇ ಸಹಕಾರ ನೀಡಬೇಕು ಎಂದು ಅವರು ತಿಳಿಸಿದರು. ಕಲಾ ಪ್ರದರ್ಶನಜಾರ್ಖಂಡ್ ಮೂಲದ ಚೌಹು ನೃತ್ಯದ ಮೂಲಕ ಮಹಿಷಾಸುರಾ ಮರ್ದಿನಿ ನೃತ್ಯ ರೂಪಕದಿಂದ ನೃತ್ಯೋತ್ಸವದಲ್ಲಿ ಪ್ರೇಕ್ಷಕರ ಗಮನ ಸೆಳೆಯಿತು. ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರಾದ ಜಾರ್ಖಂಡಿನ ಪರೀಕ್ಷಿತ್ ಮಹತೋ ತಂಡವು ಮಹಿಷಾಸುರನನ್ನು ಚಾಮುಂಡೇಶ್ವರಿ ಮರ್ದಿಸಿದ ಸಂದರ್ಭವನ್ನು ವಿಶೇಷ ಉಡುಗೆ ತೊಡುಗೆಗಳ ಮೂಲಕ ಪ್ರಸ್ತುತಪಡಿಸಿದರು.ನಂತರ ಮೈಸೂರಿನ ಆರ್. ವಿಶ್ವೇಶ್ವರನ್, ಚೆನ್ನೈ ಮಹರಾಜಪುರಂ ಎಸ್. ರಾಮಚಂದ್ರನ್ ಕರ್ನಾಟಕ ಸಂಗೀತ ಗಾಯನ, ಜೋಧಪುರದ ಬಸಂತ್ ಕಬ್ರ- ಹಿಂದುಸ್ತಾನಿ ವಾದ್ಯವಾದ ಸರೋದ, ಸಾಸ್ ನಗರದ ಹರ್ವಿಂದರ್ ಸಿಂಗ್ ಅವರು ಹಿಂದುಸ್ತಾನಿ ಮತ್ತು ಧರ್ಮನಾಥ್ ಮಿಶ್ರಿ ಲಕನೌ, ಹಾರ್ಮೋನಿಯಂ ವಾದನ ಗಮನ ಸೆಳೆಯಿತು.ನಿರಂಜನ್ ರೌಟ್ ಅವರಿಂದ ಒಡಿಸ್ಸಿ ನೃತ್ಯ, ಸಿಜಗುರುಮಯುಮ್ ನೋಯೊಂಶಾಖಿ ಅವರಿಂದ ಮಣಿಪುರಿ ನೃತ್ಯ, ಕಲಾ ವಿಜಯನ್ ಅವರಿಂದ ಮೋಹಿನಿ ಆಟ್ಟಂ, ರಾಜಾರೆಡ್ಡಿ ಮತ್ತು ರಾಧಾ ರೆಡ್ಡಿ ಅವರಿಂದ ಕೂಚುಪುಡಿ ನೃತ್ಯವು ರಂಜಿಸಿತು.ಸಂಗೀತ ನಾಟಕ ಅಕಾಡೆಮಿ ಜಂಟಿ ನಿರ್ದೇಶಕ ರಘು, ಸಂಗೀತ ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಎಂ.ಜಿ. ಮಂಜುನಾಥ್, ಹಣಕಾಸು ಅಧಿಕಾರಿ ಕೆ.ಎಸ್. ರೇಖಾ, ಕಾರ್ಯಕ್ರಮದ ಅಧಿಕಾರಿ ಶಿಲ್ಪಾ ನಾಗರಾಜು ಮೊದಲಾದವರು ಇದ್ದರು.