ಕಂಬಳದಲ್ಲಿ ತೀರ್ಪುಗಾರರ ತೀರ್ಮಾನವೇ ಅಂತಿಮ

| Published : Nov 28 2024, 12:35 AM IST

ಸಾರಾಂಶ

ತೀರ್ಪುಗಾರರು ನೀಡುವ ತೀರ್ಪಿನ ಬಗ್ಗೆ ಕಂಬಳ ಆಯೋಜಕರು, ಕೋಣಗಳ ಯಜಮಾನರುಗಳು ಯಾರೂ ಪ್ರಶ್ನಿಸುವಂತಿಲ್ಲ. ನೀಡಿರುವ ತೀರ್ಪಿನ ಬಗ್ಗೆ ಅಸಮಧಾನವಿದ್ದರೆ ಅದನ್ನು ಕಂಬಳ ಸಮಿತಿಯ ಗಮನಕ್ಕೆ ತರಬೇಕು ಎಂದು ದೇವಿಪ್ರಸಾದ್‌ ಶೆಟ್ಟಿ ಬೆಳಪು ತಿಳಿಸಿದರು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ ಜಾನಪದ ಕ್ರೀಡೆ ಕಂಬಳ ನಮ್ಮ ಹೆಮ್ಮೆಯ ಕ್ರೀಡೆ. ಇಲ್ಲಿ ತೀರ್ಪುಗಾರರು ಪಾರದರ್ಶಕವಾಗಿ ಕೆಲಸ ಮಾಡಬೇಕು ಈ ನಿಟ್ಟಿನಲ್ಲಿ ಅವರು ನೀಡುವ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಜಿಲ್ಲಾ ಕಂಬಳ ಸಮಿತಿಯ ಸಭೆಯಲ್ಲಿ ನಿರ್ಣಯಿಸಲಾಗಿದೆ. ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಒಂಟಿಕಟ್ಟೆಯ ಸೃಷ್ಟಿ ಗಾರ್ಡನ್‌ನಲ್ಲಿ ಜಿಲ್ಲಾ ಕಂಬಳ ಸಮಿತಿ ಸಭೆ ನಡೆಯಿತು.

ಈ ಬಗ್ಗೆ ಮಾತನಾಡಿದ ದೇವಿ ಪ್ರಸಾದ್ ಶೆಟ್ಟಿ, ತೀರ್ಪುಗಾರರು ನೀಡುವ ತೀರ್ಪಿನ ಬಗ್ಗೆ ಕಂಬಳ ಆಯೋಜಕರು, ಕೋಣಗಳ ಯಜಮಾನರುಗಳು ಯಾರೂ ಪ್ರಶ್ನಿಸುವಂತಿಲ್ಲ. ನೀಡಿರುವ ತೀರ್ಪಿನ ಬಗ್ಗೆ ಅಸಮಧಾನವಿದ್ದರೆ ಅದನ್ನು ಕಂಬಳ ಸಮಿತಿಯ ಗಮನಕ್ಕೆ ತರಬೇಕು ಎಂದು ತಿಳಿಸಿದರು.

ಕಂಬಳಕ್ಕೆ ರಾಜ್ಯ ಸರಕಾರವು ಮಾನ್ಯತೆ ನೀಡಿದೆ ಅದರಂತೆ ಕೇಂದ್ರ ಸರಕಾರದಲ್ಲೂ ಮಾನ್ಯತೆ ಸಿಗಬೇಕಾಗಿದ್ದು ಕಂಬಳ ಸಮಿತಿಯಿಂದ ಅರ್ಜಿ ಸಲ್ಲಿಸಲಾಗಿದೆ. ಕಳೆದ ಕಂಬಳ ಋತುವಿನಲ್ಲಿ ರಾಜ್ಯ ಸರಕಾರ ಕಂಬಳಕ್ಕೆ ಅನುದಾನ ನೀಡಿಲ್ಲ ಆದ್ದರಿಂದ ಈ ಬಾರಿ ನಡೆಯುವ ಬಜೆಟ್ ಮಂಡನೆ ಸಂದರ್ಭದಲ್ಲಿ ಅನುದಾನ ಮೀಸಲಿಡುವಂತೆ ಜಿಲ್ಲೆಯ ಶಾಸಕರು ಆಗ್ರಹಿಸಬೇಕೆಂದು ಮಂಜುನಾಥ ಭಂಡಾರಿ, ಸುನಿಲ್ ಕುಮಾರ್ ಸಹಿತ ಇತರರ ಬಳಿ ಪ್ರತ್ಯೇಕವಾಗಿ ಮನವಿ ಸಲ್ಲಿಸಲಾಗಿದೆ ಎಂದು ದೇವಿ ಪ್ರಸಾದ್‌ ಶೆಟ್ಟಿ ತಿಳಿಸಿದರು.

ಪಿಲಿಕುಳದಲ್ಲಿ ಸರ್ಕಾರಿ ಕಂಬಳಕ್ಕೆ ದಿನಾಂಕವೂ ನಿಗದಿಯಾಗಿತ್ತು. ಆಧರೆ ಪ್ರಾಣಿದಯಾ ಸಂಘದವರಿಂದಾಗಿ ತಡೆಯಾಗಿದೆ. ಈ ಬಗ್ಗೆ ಸಮಸ್ಯೆ ನೀಗಿಸಲು ಜಯಪ್ರಕಾಶ್ ಭಂಡಾರಿ ಮತ್ತು ಸಮಿತಿಯವರು ಶ್ರಮಿಸುತ್ತಿದ್ದಾರೆ. ಜಿಲ್ಲಾಧಿಕಾರಿ ಮತ್ತು ಪ್ರಾಧಿಕಾರದವರೂ ನಮ್ಮ ಜತೆಗಿದ್ದಾರೆ. ಇಲ್ಲಿ ನಾವು ಯಾವುದೇ ರೀತಿಯಲ್ಲಿ ಸಮಸ್ಯೆಯಾಗದಂತೆ ಕಂಬಳವನ್ನು ಆಯೋಜಿಸಬೇಕಾಗಿದೆ ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದೊಂದಿಗೆ ಕಂಬಳವನ್ನು ಮಾಡುವ ಯೋಚನೆಯಲ್ಲಿದ್ದೇವೆ ಎಂದರು.

ಸಮಿತಿಯ ಕಾರ್ಯದರ್ಶಿ ಲೋಕೇಶ್ ಶೆಟ್ಟಿ ಮುಚ್ಚೂರು, ಗೌರವಾಧ್ಯಕ್ಷ ರೋಹಿತ್ ಹೆಗ್ಡೆ ಎರ್ಮಾಳ್, ಕಾರ್ಯಧ್ಯಕ್ಷ ಕೆ. ಗುಣಪಾಲ ಕಡಂಬ, ಉಪಾಧ್ಯಕ್ಷರಾದ ರಶ್ಮಿತ್ ಶೆಟ್ಟಿ, ಉದಯಕೋಟ್ಯಾನ್, ಕೋಶಾಧಿಕಾರಿ ಏರಿಮಾರ್ ಚಂದ್ರಹಾಸ ಸನಿಲ್, ತೀರ್ಪುಗಾರರ ಸಂಚಾಲಕ ವಿಜಯ ಕುಮಾರ್ ಕಂಗಿನ ಮನೆ, ಪ್ರಧಾನ ತೀರ್ಪುಗಾರ ರಾಜೀವ ಶೆಟ್ಟಿ ಎಡ್ತೂರು, ಕೋಣಗಳ ಯಜಮಾನರುಗಳಾದ ನಂದಳಿಕೆ ಶ್ರೀಕಾಂತ್ ಭಟ್, ದಿವಾಕರ ಶೆಟ್ಟಿ ಮಾಳ, ಏರಿಮಾರ್ ಗೋಪಾಲಕೃಷ್ಣ ಭಟ್ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.