ಸಾರಾಂಶ
ಹರಪನಹಳ್ಳಿ ಪಟ್ಟಣದ ಐ.ಬಿ. ವೃತ್ತದಲ್ಲಿ ನಿವೃತ್ತ ಸೈನಿಕರ ಸಂಘ ಆಯೋಜಿಸಿದ್ದ ಆಪರೇಷನ್ ಕಾರ್ಗಿಲ್ ಹಾಗೂ ಸಿಂದೂರ ವಿಜಯೋತ್ಸವ ಜಾಥಾಕ್ಕೆ ಪೊಲೀಸ್ ವೃತ್ತ ನಿರೀಕ್ಷಕ ಮಹಾಂತೇಶ ಜಿ. ಸಜ್ಜನ್ ಚಾಲನೆ ನೀಡಿದರು.
ಹರಪನಹಳ್ಳಿ: ಕಾರ್ಗಿಲ್ ವಿಜಯ ಭಾರತದ ಸಾರ್ವಭೌಮತ್ವ ರಕ್ಷಿಸಿತು ಎಂದು ಪೊಲೀಸ್ ವೃತ್ತ ನಿರೀಕ್ಷಕ ಮಹಾಂತೇಶ ಜಿ. ಸಜ್ಜನ್ ಹೇಳಿದರು.
ಅವರು ಪಟ್ಟಣದ ಐ.ಬಿ. ವೃತ್ತದಲ್ಲಿ ನಿವೃತ್ತ ಸೈನಿಕರ ಸಂಘ ಆಯೋಜಿಸಿದ್ದ ಆಪರೇಷನ್ ಕಾರ್ಗಿಲ್ ಹಾಗೂ ಸಿಂದೂರ ವಿಜಯೋತ್ಸವ ಜಾಥಾಕ್ಕೆ ಚಾಲನೆ ನೀಡಿ ಶುಕ್ರವಾರ ಮಾತನಾಡಿದರು. ಈ ಯುದ್ಧದಲ್ಲಿ ಅನೇಕ ಸೈನಿಕರು ಹುತಾತ್ಮರಾದರು. ಕಾರ್ಗಿಲ್ ಯುದ್ಧ ಭಾರತದ ಇತಿಹಾಸದಲ್ಲಿ ಒಂದು ಪ್ರಮುಖ ಘಟನೆಯಾಗಿದ್ದು, ಭಾರತೀಯ ಸೈನಿಕರ ಧೈರ್ಯ ಮತ್ತು ತ್ಯಾಗ ಎಂದಿಗೂ ಮರೆಯಲಾಗುವುದಿಲ್ಲ ಎಂದು ಹೇಳಿದರು.ಸೈನಿಕರು ಗಡಿಯಲ್ಲಿ ಕಾಯುತ್ತಿರುವುದರಿಂದ ನಾವು ಇಂದು ಸುರಕ್ಷಿತವಾಗಿ ಜೀವನ ಸಾಗಿಸುತ್ತಿದ್ದೇವೆ. ಇಲ್ಲಿರುವ ಮಾಜಿ ಸೈನಿಕರು ದೇಶಕ್ಕಾಗಿ ಸಾಕಷ್ಟು ದುಡಿದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಜಾಥಾ ಐ.ಬಿ. ವೃತ್ತದಿಂದ ಹಳೆಯ ಬಸ್ ನಿಲ್ದಾಣ, ಇಜಾರಿ ಶಿರಸಪ್ಪ ವೃತ್ತ, ತೆಗ್ಗಿನಮಠ ಮೂಲಕ ಕೊಟ್ಟೂರು ವೃತ್ತಕ್ಕೆ ಹೋಗಿ ಸಮಾಪ್ತಿಗೊಂಡಿತು.
ಬಿಜೆಪಿ ಮುಖಂಡರಾದ ಆರುಂಡಿ ನಾಗರಾಜ, ಡಾ. ರಮೇಶಕುಮಾರ, ಕಾಂಗ್ರೆಸ್ ಮುಖಂಡ ಶಶಿಧರ ಪೂಜಾರ, ಬಿಜೆಪಿಯ ಶಿವಾನಂದ, ಗ್ರೇಡ್ -2 ತಹಸೀಲ್ದಾರ್ ನಟರಾಜ, ಪ್ರಾಚಾರ್ಯ ಅರುಣಕುಮಾರ, ಗೃಹರಕ್ಷಕ ದಳದ ಕಮಾಂಡೆಂಟ್ ವಾಗೀಶ ಪೂಜಾರ, ಸುಭಾಸ್, ನಿವೃತ್ತ ಸೈನಿಕರ ಸಂಘದ ತಾಲೂಕು ಅಧ್ಯಕ್ಷ ದೇವೇಂದ್ರಪ್ಪ, ಉಪಾಧ್ಯಕ್ಷ ಮಂಜುನಾಥ, ಗೌರವಾದ್ಯಕ್ಷ ಶ್ರೀನಿವಾಸರಾವ್, ಕಾರ್ಯದರ್ಶಿ ಪಿ. ರೇಖಪ್ಪ, ಸದಸ್ಯರಾದ ಎಂ. ಕೊಟ್ರಪ್ಪ, ಅನಿಲ್ ಕುಮಾರ, ಚಂದ್ರಶೇಖರಪ್ಪ ಇತರರು ಹಾಜರಿದ್ದರು.