ನೇಜಾರು ತಾಯಿ ಮಕ್ಕಳ ಕೊಲೆಗೆ ಬಳಸಿದ್ದ ಚೂರಿ ವಶ

| Published : Nov 20 2023, 12:45 AM IST

ಸಾರಾಂಶ

ನ.12ರಂದು ನಡೆದ ಈ ಕೊಲೆಯ ಆರೋಪಿ ಪ್ರವೀಣ ಚೌಗುಲೆಯನ್ನು 15ರಂದು ಬಂಧಿಸಲಾಗಿತ್ತು. ತನಿಖೆ ಸಂದರ್ಭದಲ್ಲಿ ಆರೋಪಿ ಪೊಲೀಸರನ್ನು ಮಾತಿನಿಂದಲೇ ಯಾಮಾರಿಸುವ ಬಹಳ ಪ್ರಯತ್ನಗಳನ್ನು ಮಾಡಿದ್ದ. ಒಮ್ಮೆ ಕೊಲೆಗೆ ಬಳಸಿದ್ದ ಚೂರಿಯನ್ನು ಉಡುಪಿಯಿಂಗ ಮಂಗಳೂರು ಮಧ್ಯೆ ನದಿಗೆ ಎಸೆದಿದ್ದೇನೆ ಎಂದಿದ್ದ, ಇನ್ನೊಮ್ಮೆ ಅದನ್ನು ಮಂಗಳೂರಿನಲ್ಲಿರುವ ಪ್ಲಾಟಲ್ಲಿ ಇಟ್ಟಿದ್ದೇನೆ ಎಂದಿದ್ದ.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ನೇಜಾರಿನಲ್ಲಿ ಒಂದೇ ಕುಟುಂಬದ ಅಮಾಯಕ ತಾಯಿ ಮತ್ತು 3 ಮಂದಿ ಮಕ್ಕಳನ್ನು ಅಮಾನುಷವಾಗಿ ಕೊಲ್ಲಲು ಆರೋಪಿ ಬಳಸಿದ್ದ ಚೂರಿಯನ್ನು ಮತ್ತು ಇತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಈ ಮೂಲಕ ಘಟನೆಯ ಪ್ರಮುಖ ಸಾಕ್ಷ್ಯಗಳನ್ನು ಸಂಗ್ರಹಿಸಿದಂತಾಗಿದೆ.

ನ.12ರಂದು ನಡೆದ ಈ ಕೊಲೆಯ ಆರೋಪಿ ಪ್ರವೀಣ ಚೌಗುಲೆಯನ್ನು 15ರಂದು ಬಂಧಿಸಲಾಗಿತ್ತು. ತನಿಖೆ ಸಂದರ್ಭದಲ್ಲಿ ಆರೋಪಿ ಪೊಲೀಸರನ್ನು ಮಾತಿನಿಂದಲೇ ಯಾಮಾರಿಸುವ ಬಹಳ ಪ್ರಯತ್ನಗಳನ್ನು ಮಾಡಿದ್ದ. ಒಮ್ಮೆ ಕೊಲೆಗೆ ಬಳಸಿದ್ದ ಚೂರಿಯನ್ನು ಉಡುಪಿಯಿಂಗ ಮಂಗಳೂರು ಮಧ್ಯೆ ನದಿಗೆ ಎಸೆದಿದ್ದೇನೆ ಎಂದಿದ್ದ, ಇನ್ನೊಮ್ಮೆ ಅದನ್ನು ಮಂಗಳೂರಿನಲ್ಲಿರುವ ಪ್ಲಾಟಲ್ಲಿ ಇಟ್ಟಿದ್ದೇನೆ ಎಂದಿದ್ದ.

ಇದೀಗ ಆತನನ್ನು ಬಿಜೈಯಲ್ಲಿರುವ ಪ್ಲಾಟಿಗೆ ಕರೆದುಕೊಂಡು ಹೋಗಿ ಮಹಜರು ನಡೆಸಿದಾಗ ಕೊಲೆಗೆ ಬಳಸಿದ್ದ ಚೂರಿ ಪತ್ತೆಯಾಗಿದೆ. ಜೊತೆಗೆ ಕೊಲೆ ಮಾಡಲು ಬಂದಾಗ ಗುರುತು ಸಿಗದಂತೆ ಧರಿಸಿದ್ದ ಮಾಸ್ಕ್, ಕೊಲೆಯ ಸಂದರ್ಭದಲ್ಲಿ ರಕ್ತಸಿಕ್ತವಾದ ಬಟ್ಟೆ, ಕೊಲೆಗೆ ಮಂಗಳೂರಿನಿಂದ ಹೆಜಮಾಡಿವರೆಗೆ ಬಂದಿದ್ದ ಸ್ವಂತ ಕಾರುಗಳನ್ನು ಕೂಡ ಪೊಲೀಸರು ಪತ್ತೆ ಮಾಡಿದ್ದು ಜಫ್ತು ಮಾಡಿಕೊಂಡಿದ್ದಾರೆ.

ಇದರೊಂದಿಗೆ ಆರೋಪಿಯ ವಿರುದ್ಧ ಪೊಲೀಸರಿಗೆ ಬಲವಾದ ಸಾಕ್ಷ್ಯಾಧಾರಗಳು ಪತ್ತೆಯಾಗಿವೆ. ಆರೋಪಿಯ ವಿರುದ್ದ ಆರೋಪದ ಉರುಳು ಬಲವಾಗುತ್ತಿದೆ.