ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ತಲೆಮಾರಿನಿಂದ ತಲೆಮಾರಿಗೆ ಶಿಕ್ಷಣ ಪದ್ಧತಿ ಬದಲಾಗುತ್ತಿದ್ದರೂ ಗುರುವಿನ ಸ್ಥಾನ ಬದಲಾಗಲು ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಎಸ್.ಎನ್.ನಾಗರಾಜ ಹೇಳಿದರು.ಇಲ್ಲಿಯ ಕಮಲಾ ನೆಹರು ಮಹಿಳಾ ಕಾಲೇಜಿನಲ್ಲಿ ನಿರಂತರ ಕಾಲೇಜು ಹಿರಿಯ ವಿದ್ಯಾರ್ಥಿಗಳ ಸಂಘ ಆಯೋಜಿಸಿದ್ದ ಸ್ನೇಹ ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗುರುವು ವಿದ್ಯಾರ್ಥಿಗಳಿಗೆ ನೀಡುವ ಜ್ಞಾನ ಮತ್ತು ವಿವೇಕ ಹಾಗೇ ಇರುತ್ತದೆ. ಅವುಗಳನ್ನು ಯಾರಿಂದಲೂ ಕಸಿದುಕೊಳ್ಳಲಾಗಲ್ಲ. ಭವಿಷ್ಯದಲ್ಲಿ ವಿದ್ಯಾರ್ಥಿಗಳನ್ನು ಕಾಪಾಡುವುದೇ ಇವು ಎಂದ ಅವರು ಭಾವನಾತ್ಮಕ ಹೃದಯವನ್ನು ಬೆಸೆಯುವುದೇ ಗುರುವಂದನೆ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು.ಗುರಿವಿಗೆ ದೊಡ್ಡ ಸ್ಥಾನ:
ಭಾರತೀಯ ಪರಂಪರೆಯಲ್ಲಿ ಗುರುವಿಗೆ ದೊಡ್ಡ ಸ್ಥಾನವಿದೆ. ಭಾರತೀಯ ಶಿಕ್ಷಣ ಪದ್ಧತಿ ವಿದೇಶಿಯರ ದಾಳಿಯಿಂದಾಗಿ ಬದಲಾವಣೆ ಕಂಡಿದೆ. ಪ್ರಾಚೀನ ಕಾಲದ ಉತ್ಕೃಷ್ಟ ವಿಶ್ವವಿದ್ಯಾಲಯಗಳಾಗಿದ್ದ ನಳಂದಾ, ತಕ್ಷಶಿಲಾ, ಉಜ್ಜಯಿನಿ ಮೊದಲಾದವುಗಳು ಪರಕೀಯರ ದಾಳಿಯಿಂದ ಅವನತಿ ಹೊಂದಿದರೆ, ಬ್ರಿಟಿಷರು ಮೆಕಾಲೆ ಶಿಕ್ಷಣ ಪದ್ಧತಿಯನ್ನು ನಮ್ಮ ಮೇಲೆ ಹೇರಿದರು. ಇಂದಿಗೂ ಅದನ್ನೇ ಮುಂದುವರಿಸುತ್ತ ಹೋಗುತ್ತಿದ್ದೇವೆ ಎಂಬ ವಿಷಾದ ವ್ಯಕ್ತಪಡಿಸಿದರು.ಗುರು ಮತ್ತು ಟೀಚರ್ ಶಬ್ದದ ನಡುವೆ ವ್ಯತ್ಯಾಸವಿದೆ. ಗುರು ಮಾರ್ಗದರ್ಶಕನಾಗಿದ್ದರೆ ಟೀಚರ್ ದಾರಿ ತೋರಿಸುವನಾಗಿರುತ್ತಾನೆ. ಗುರು ವಿದ್ಯಾರ್ಥಿಯು ಉತ್ತರಿಸುವ ಉತ್ತರಗಳ ಮೇಲೆ ಪ್ರಶ್ನೆಗಳ ಕೇಳುವವನಾಗಿರುತ್ತಾನೆ. ವಾಸ್ತವದಲ್ಲಿ ಪ್ರಶ್ನೋತ್ತರ ಪದ್ಧತಿಯು ವಿದ್ಯಾಭ್ಯಾಸದ ಕ್ರಮವಾಗಿರುತ್ತದೆ ಎಂದು ವಿಶ್ಲೇಷಿಸಿದರು. ಹಿರಿಯ ವಿದ್ಯಾರ್ಥಿಗಳು ತಾವು ಕಲಿತ ವಿದ್ಯಾ ಗುರುಗಳ ಬಗ್ಗೆ ಗೌರವ, ಸಂಸ್ಥೆಯ ಬಗ್ಗೆ ಸದಾ ಕಾಲ ಉತ್ತಮ ಸಂಬಂಧ, ಪ್ರೀತಿಗಳನ್ನು ಇಟ್ಟುಕೊಳ್ಳಬೇಕು ಎಂದು ಆಶಿಸಿದರು.
ಎನ್ಎಸ್ಎಸ್ ಅತ್ಯುತ್ತಮ ಕಾರ್ಯಕ್ರಮಾಧಿಕಾರಿ ಪ್ರಶಸ್ತಿ ಪುರಸ್ಕೃತ ಡಾ.ಬಾಲಕೃಷ್ಣ ಹೆಗಡೆ ಸನ್ಮಾನ ಸ್ವೀಕರಿಸಿ ಮಾತನಾಡಿ, ನೌಕರ ತನಗೆ ಅನ್ನ ಕೊಟ್ಟ ಸಂಸ್ಥೆಯ ಮರೆಯಬಾರದು. ವಿದ್ಯಾರ್ಥಿಯು ತನಗೆ ವಿದ್ಯೆ ನೀಡಿದ ಗುರುಗಳ ಮರೆಯಬಾರದು. ವಿದ್ಯೆ ಕಲಿಸಿದ ಗುರುವನ್ನು ಮರೆಯುವ ಅಥವಾ ನಿರ್ಲಕ್ಷಿಸುವ ವಿದ್ಯಾರ್ಥಿಯು ತನ್ನ ಜೀವನದಲ್ಲಿ ಉತ್ತಮ ಭವಿಷ್ಯ ಕಾಣಲಾರ ಎಂದು ಕಿವಿಮಾತು ಹೇಳಿದರು.ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಎಸ್.ನಾಗಭೂಷಣ ಅಧ್ಯಕ್ಷತೆ ವಹಿಸಿದ್ದರು. ನಿರಂತರ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಡಾ.ಅಶ್ವಿನಿ ಬಿದರಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಎಟಿಎನ್ ಸಿ ಕಾಲೇಜು ಪ್ರಾಚಾರ್ಯರಾದ ಪ್ರೊ. ಪಿ.ಆರ್.ಮಮತಾ, ಶಾಂತಮ್ಮ, ಸರೋಜಾ ಚಂಗೊಳ್ಳಿ, ಎಸ್.ಬಿ.ಉಷಾ, ರೇಖಾ ಬಸವರಾಜ್, ಸವಿತಾ ಮತ್ತಿತರರಿದ್ದರು.
----------------------------