ಶಿರಹಟ್ಟಿ: ದೀಪವು ಜ್ಞಾನದ ಸಂಕೇತ. ನಮ್ಮ ಮನದಲ್ಲಿನ ಕತ್ತಲೆ ಕಳೆದು ಶಾಂತಿ ನೀಡುತ್ತದೆ. ಆದ್ದರಿಂದ ದೀಪೋತ್ಸವದ ಕಲ್ಪನೆಯನ್ನು ಹಿರಿಯರು ನೀಡಿದ್ದಾರೆ ಎಂದು ಕಾಂಗ್ರೆಸ್ ಯುವ ಮುಖಂಡ ಆನಂದ ಗಡ್ಡದೇವರಮಠ ತಿಳಿಸಿದರು.ಬೀರೇಶ್ವರ ಸೇವಾ ಸಮಿತಿ ವತಿಯಿಂದ ಬುಧವಾರ ಸಂಜೆ ಬೀರೇಶ್ವರ ಕಾರ್ತಿಕೋತ್ಸವ ಹಾಗೂ ೨೦ನೇ ವರ್ಷದ ಜನಪದ ಮತ್ತು ಡೊಳ್ಳಿನ ಪದಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಮ್ಮ ಹಿರಿಯರು ಹಬ್ಬ ಹರಿದಿನಗಳನ್ನು ಮಾಡಿರುವುದೇ ವೈಜ್ಞಾನಿಕ ತಳಹದಿಯ ಮೇಲೆ. ಪ್ರತಿ ಹಬ್ಬಕ್ಕೂ ತನ್ನದೇ ಆದ ವಿಶಿಷ್ಟ ಅರ್ಥವಿದೆ. ಅದನ್ನು ತಿಳಿದುಕೊಂಡು ಹಬ್ಬಗಳನ್ನು ಆಚರಿಸಿದರೆ ನಮಗೆ ಸಿಗುವ ಆನಂದ ಅವರ್ಣನೀಯ ಎಂದರು.ದೀಪದ ಬೆಳಕು ಜ್ಞಾನದ ಸಂಕೇತವಾಗಿದ್ದು, ಧಾರ್ಮಿಕ ಮತ್ತು ವೈಜ್ಞಾನಿಕ ಮಹತ್ವ ಹೊಂದಿದೆ. ದೀಪದ ಬೆಳಕು ಮನಸ್ಸಿಗೆ ಶಾಂತಿ ನೀಡಿ ನಕಾರಾತ್ಮಕ ಶಕ್ತಿ ದೂರ ಮಾಡುತ್ತದೆ. ಸಕಾರಾತ್ಮಕತೆಯನ್ನು ಸ್ವಾಗತಿಸುತ್ತದೆ. ಅಜ್ಞಾನವೆಂಬ ಅಂಧಕಾರವನ್ನು ಅಳಿಸಿ ಸುಜ್ಞಾನವೆಂಬ ಬೆಳಕನ್ನು ನೀಡುವುದೇ ದೀಪೋತ್ಸವವಾಗಿದೆ. ಜ್ಯೋತಿ ಬೆಳಗುವುದರಿಂದ ಬೆಳಕಿನ ಜತೆಗೆ ಜ್ಞಾನ ಪಸರಿಸುವ ಕಾರ್ಯ ಮಾಡುತ್ತದೆ ಎಂದರು.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಜಾತಾ ದೊಡ್ಡಮನಿ ಮಾತನಾಡಿ, ಬೆಳಕು ಇದು ಬರೀ ಬೆಳಕಲ್ಲ. ಜ್ಞಾನವನ್ನು ಬೆಳಗಿಸುವ ದಿವ್ಯ ಬೆಳಕು ಎಂದ ಅವರು, ಧರ್ಮ, ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಪ್ರತಿಯೊಬ್ಬರ ಕರ್ತವ್ಯ. ಇದನ್ನು ಅರಿತು ನಡೆದರೆ ಜೀವನ ಪಾವನವಾಗಲಿದೆ ಎಂದರು.
ಮಂಜುನಾಥ ಘಂಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹೇಶ ಹಾರುಗೇರಿ ಉಪನ್ಯಾಸ ನೀಡಿದರು. ಸಮಾಜದ ತಾಲೂಕು ಅಧ್ಯಕ್ಷ ಹೊನ್ನೇಶ ಪೋಟಿ, ಮುಖಂಡರಾದ ವಿರುಪಾಕ್ಷ ಪಡಗೇರಿ, ಪರಮೇಶ ಪರಬ, ನಾಗರಾಜ ಲಕ್ಕುಂಡಿ, ದೇವಪ್ಪ ಲಮಾಣಿ, ಭಾಗ್ಯಶ್ರೀ ಬಾಬಣ್ಣ, ಆನಂದ ಮಾಳೆಕೊಪ್ಪ, ಹೊನ್ನಪ್ಪ ಶಿರಹಟ್ಟಿ, ಎಂ.ಕೆ. ಲಮಾಣಿ, ಆನಂದ ಕೋಳಿ, ಹೇಮಂತ ಕೆಂಗೊಂಡ, ಮಂಜುನಾಥ ಹಮಿಗಿ, ಶಿವಣ್ಣ ಕರಿಗಾರ ಇತರರು ಇದ್ದರು. ನಂತರ ಜಾನಪದ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮ ನೆರವೇರಿತು.ದೀಪದ ಬೆಳಕು ಜ್ಞಾನದ ಸಂಕೇತ: ಆನಂದ ಗಡ್ಡದೇವರಮಠ
ದೀಪದ ಬೆಳಕು ಜ್ಞಾನದ ಸಂಕೇತವಾಗಿದ್ದು, ಧಾರ್ಮಿಕ ಮತ್ತು ವೈಜ್ಞಾನಿಕ ಮಹತ್ವ ಹೊಂದಿದೆ. ದೀಪದ ಬೆಳಕು ಮನಸ್ಸಿಗೆ ಶಾಂತಿ ನೀಡಿ ನಕಾರಾತ್ಮಕ ಶಕ್ತಿ ದೂರ ಮಾಡುತ್ತದೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.