ವಿಜೃಂಭಣೆಯ ಲಕ್ಷ್ಮೀ ನರಸಿಂಹಸ್ವಾಮಿ ಬ್ರಹ್ಮರಥೋತ್ಸವ

| Published : May 13 2025, 01:33 AM IST

ಸಾರಾಂಶ

ಅರಸೀಕೆರೆ ನಗರದ ಮೈಸೂರು ರಸ್ತೆ ಶ್ರೀವಿದ್ಯಾನಗರದ ಶ್ರೀಮಾರುತಿ ಸಚ್ಚಿದಾನಂದ ಆಶ್ರಮದಲ್ಲಿ ಶ್ರೀವಿಷ್ಣು ಪಂಚಾಯತನ ವೈಶಿಷ್ಟತೆಯಲ್ಲಿ ನೂತನವಾಗಿ ನಿರ್ಮಿಸಿರುವ ಸುಕ್ಷೇತ್ರದ ಶ್ರೀಲಕ್ಷ್ಮೀನರಸಿಂಹ ಸ್ವಾಮಿ ಹಾಗೂ ಪರಿವಾರ ದೇವತೆಗಳ ಪ್ರತಿಷ್ಠಾಪನಾ ವರ್ಧಂತಿ, ಶ್ರೀನರಸಿಂಹ ಜಯಂತಿ ಹಾಗೂ ಬ್ರಹ್ಮೋತ್ಸವ ಧಾರ್ಮಿಕ ಸಮಾರಂಭವು ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ಸಂಪನ್ನಗೊಂಡಿತು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ನಗರದ ಮೈಸೂರು ರಸ್ತೆ ಶ್ರೀವಿದ್ಯಾನಗರದ ಶ್ರೀಮಾರುತಿ ಸಚ್ಚಿದಾನಂದ ಆಶ್ರಮದಲ್ಲಿ ಶ್ರೀವಿಷ್ಣು ಪಂಚಾಯತನ ವೈಶಿಷ್ಟತೆಯಲ್ಲಿ ನೂತನವಾಗಿ ನಿರ್ಮಿಸಿರುವ ಸುಕ್ಷೇತ್ರದ ಶ್ರೀಲಕ್ಷ್ಮೀನರಸಿಂಹ ಸ್ವಾಮಿ ಹಾಗೂ ಪರಿವಾರ ದೇವತೆಗಳ ಪ್ರತಿಷ್ಠಾಪನಾ ವರ್ಧಂತಿ, ಶ್ರೀನರಸಿಂಹ ಜಯಂತಿ ಹಾಗೂ ಬ್ರಹ್ಮೋತ್ಸವ ಧಾರ್ಮಿಕ ಸಮಾರಂಭವು ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ಸಂಪನ್ನಗೊಂಡಿತು.

ನಗರದ ಶ್ರೀಮಾರುತಿ ಸಚ್ಚಿದಾನಂದ ಆಶ್ರಮದಲ್ಲಿ ನಿರ್ಮಿಸಿರುವ ಸುಕ್ಷೇತ್ರದ ಅಧಿದೇವತೆ ಶ್ರೀಲಕ್ಷ್ಮೀನರಸಿಂಹ ಸ್ವಾಮಿ, ಕ್ಷೇತ್ರಪಾಲಕ ಶ್ರೀಪಂಚಮುಖಿ ಆಂಜನೇಯಸ್ವಾಮಿ, ಶ್ರೀಪಂಚಮುಖಿ ಗಣಪತಿ, ಶ್ರೀಕಂಠೇಶ್ವರ,ಶ್ರೀಅಂಬಿಕಾ ಪರಮೇಶ್ವರಿ, ಸೂರ್ಯದೇವರ ಪ್ರತಿಷ್ಠಾಪನ ವರ್ಧಂತಿ, ಶ್ರೀನರಸಿಂಹ ಜಯಂತಿ ಹಾಗೂ ಬ್ರಹ್ಮೋತ್ಸವ ಧಾರ್ಮಿಕ ಸಮಾರಂಭವು ಮೇ ೯ರಿಂದ ೧೨ವರೆಗೂ ನಡೆಯಿತು. ಆಗಮಿಕರಾದ ಮುರುಳೀಧರ್ ಕೇದ್ಲಾಯ ನೇತೃತ್ವದಲ್ಲಿ ಪೌರೋಹಿತ್ಯರಾದ ಆದಿತ್ಯ ಶರ್ಮ ನೇತೃತ್ವದ ವಿಪೃತಂಡ ಪ್ರತಿನಿತ್ಯ ಪ್ರಾತಃ ಕಾಲ ಪಂಚಾಮೃತ ಅಭಿಷೇಕ, ಸೂಪ್ತಾಭಿಷೇಕ, ಮಂಗಳದ್ರವ್ಯ, ಸಹಸ್ರನಾಮ ಅರ್ಚನೆ ಪೂಜಾ ಕೈಂಕರ್ಯವನ್ನು ಅತ್ಯಂತ ಶ್ರದ್ದಾಭಕ್ತಿಯಿಂದ ಭಕ್ತಾದಿಗಳ ಸಮ್ಮುಖದಲ್ಲಿ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ಅರ್ಚಕರಾದ ಮುರುಳೀ ಶ್ರೀವತ್ಸ ಪೌರೋಹಿತ್ಯದಲ್ಲಿ ಗಿರಿಜಾ ಕಲ್ಯಾಣೋತ್ಸವ ಮತ್ತು ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಕಲ್ಯಾಣೋತ್ಸವವನ್ನು ಭಕ್ತಾದಿಗಳು ಆಶಯದಂತೆ ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು.

ಮೇ ೧೨ರಂದು ಬ್ರಹ್ಮೋತ್ಸವದ ಪ್ರಯುಕ್ತ ಶ್ರೀಕ್ಷೇತ್ರದ ಅಧಿದೇವತೆ ಶ್ರೀಲಕ್ಷ್ಮೀ ನರಸಿಂಹಸ್ವಾಮಿ ಹಾಗೂ ಪರಿವಾರ ದೇವತೆಗಳಿಗೆ ವಿಶೇಷ ಅಭಿಷೇಕ ಹಾಗೂ ಅಲಂಕಾರವನ್ನು ಮಾಡಲಾಗಿದ್ದು, ಗುಂಡ್ಕಾನಹಳ್ಳಿ ಗ್ರಾಮದೇವತೆ ಶ್ರೀಕರಿಯಮ್ಮದೇವಿ ಸಮ್ಮುಖದಲ್ಲಿ ವೀರಭದ್ರ ದೇವರ ಕುಣಿತದೊಂದಿಗೆ ಶುಭಮಹೂರ್ತದಲ್ಲಿ ಶ್ರೀಲಕ್ಷ್ಮೀನರಸಿಂಹಸ್ವಾಮಿ ಉತ್ಸವಮೂರ್ತಿಯನ್ನು ಮಹಾರಥದ ಮೇಲೆ ಕುಳ್ಳಿರಿಸಿದ ನಂತರ ರಥದ ಗಾಲಿಗೆ ತೆಂಗಿನ ಕಾಯಿ ಒಡೆಯುವ ಮೂಲಕ ಬ್ರಹ್ಮೋತ್ಸವಕ್ಕೆ ಚಾಲನೆ ನೀಡಲಾಯಿತು.

ಅಪಾರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರ ಸಮೂ ಶ್ರೀಲಕ್ಷ್ಮೀನರಸಿಂಹಸ್ವಮಿ ದೇವರ ನಾಮಸ್ಮರಣೆಯೊಂದಿಗೆ ರಥವನ್ನು ಸಂಭ್ರಮದಿಂದ ಎಳೆಯುವ ಮೂಲಕ ತಮ್ಮ ಭಕ್ತಿಭಾವನೆಗಳನ್ನು ಸಮರ್ಪಿಸಿದರು. ಶ್ರೀವಿದ್ಯಾನಗರದ ನಿವಾಸಿಗಳು ಮನೆ ಮುಂದೆ ರಂಗೋಲಿ ಬಿಡಿಸಿ ಶ್ರೀಲಕ್ಷ್ಮೀನರಸಿಂಹ ಸ್ವಾಮಿಯನ್ನು ರಥವನ್ನು ಸ್ವಾಗತಿಸಿ ಪೂಜೆ ಸಲ್ಲಿಸುವ ಮೂಲಕ ತಮ್ಮ ಭಕ್ತಿಭಾವನೆಗಳನ್ನು ಸಮರ್ಪಿಸಿದರು. ಈ ಧಾರ್ಮಿಕ ಸಮಾರಂಭದ ಸಾನಿಧ್ಯವನ್ನು ಪರಂಪರಾ ಅವಧೂತರಾದ ಶ್ರೀಸತೀಶ್ ಶರ್ಮ ಗುರೂಜೀ ವಹಿಸಿದ್ದರು.

ಪೂಜಾ ಕಾರ್ಯಕ್ರಮದಲ್ಲಿ ಆಗಮಿಕರಾದ ಮುರುಳೀ ಕೇದ್ಲಾಯ ಮತ್ತು ಪೌರೋಹಿತ್ಯರಾದ ಆದಿತ್ಯ ಶರ್ಮ ಮತ್ತು ವಿಪೃರ ತಂಡದವರು ಭಾಗವಹಿಸಿದ್ದರು. ಉತ್ಸವ ಸಮಿತಿ ಪದಾಧಿಕಾರಿಗಳು, ಅವಧೂತ ಬಳಗದ ಶಿಷ್ಯವೃಂದ, ಶ್ರೀವಿದ್ಯಾನಗರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಸೇರಿದಂತೆ ಬೆಂಗಳೂರು ಹಾಗೂ ಮೈಸೂರು ಸೇರಿದಂತೆ ರಾಜ್ಯದ ವಿವಿಧ ಕಡೆಗಳಿಂದ ಆಗಮಿಸಿದ ಭಕ್ತಾದಿಗಳು ಪಾಲ್ಗೊಂಡಿದ್ದರು. ನಂತರ ಭಕ್ತರಿಗೆ ಸಾಮೂಹಿಕ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.

ಪೋಟೋ-೧

ಅರಸೀಕೆರೆ ನಗರದ ಶ್ರೀಮಾರುತಿ ಸಚ್ಚಿದಾನಂದಾಶ್ರಮದಲ್ಲಿನ ಶ್ರೀವಿಷ್ಣು ಪಂಚಾಯತನ ವೈಶಿಷ್ಟತೆಯಲ್ಲಿ ನೂತನವಾಗಿ ನಿರ್ಮಿಸಿರುವ ಸುಕ್ಷೇತ್ರದ ಅಧಿದೇವತೆ ಶ್ರೀಲಕ್ಷ್ಮೀನರಸಿಂಹ ಸ್ವಾಮಿ ಹಾಗೂ ಪರಿವಾರ ದೇವತೆಗಳ ಪ್ರತಿಷ್ಠಾಪನ ವರ್ದಂತಿ ಶ್ರೀನರಸಿಂಹ ಜಯಂತಿ ಹಾಗೂ ಬ್ರಹ್ಮೋತ್ಸವ ಧಾರ್ಮಿಕ ಸಮಾರಂಭವು ಅಪಾರ ಭಕ್ತಾದಿಗಳ ಸಮ್ಮುಖದಲ್ಲಿ ಸಂಪನ್ನಗೊಂಡಿತು.