ಸಾರಾಂಶ
ಶುಂಠಿ ಬೆಳೆಗೆ ನೀರು ಹರಿಸಲು ಹೊಲಕ್ಕೆ ಹೋಗಿದ್ದ ಇಬ್ಬರಲ್ಲಿ ರವಿ ಎಂಬಾತನಿಗೆ ಅಪರಿಚಿತ ಬೇಟೆಗಾರರು ರಾತ್ರಿ ಗುಂಡು ಹಾರಿಸಿ, ಗಾಯಗೊಳಿಸಿರುವ ಘಟನೆ ಸಾಗರ ತಾಲೂಕಿನ ಮಾಲ್ವೆಯಲ್ಲಿ ಬುಧವಾರ ರಾತ್ರಿ 8.40ರ ವೇಳೆಗೆ ನಡೆದಿದೆ.
ಸಾಗರ: ಶುಂಠಿ ಬೆಳೆಗೆ ನೀರು ಹರಿಸಲು ಹೊಲಕ್ಕೆ ಹೋಗಿದ್ದಾಗ ಪಕ್ಕದ ಗುಡಿಸಲಿನ ಎದುರು ನಿಂತಿದ್ದ ವ್ಯಕ್ತಿ ಮೇಲೆ ಬೇಟೆಗೆ ಬಂದಿದ್ದ ಅಪರಿಚಿತರು ತೊಡೆಗೆ ಗುಂಡು ಹೊಡೆದು ಗಾಯಗೊಳಿಸಿದ ಘಟನೆ ತಾಲೂಕಿನ ಮಾಲ್ವೆಯಲ್ಲಿ ಬುಧವಾರ ರಾತ್ರಿ 8.40ರ ವೇಳೆಗೆ ನಡೆದಿದೆ.
ರವಿ ಗುಂಡೇಟಿನಿಂದ ಗಾಯಗೊಂಡ ವ್ಯಕ್ತಿಯಾಗಿದ್ದು, ಸಾಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಾಲ್ವೆ ಗ್ರಾಮದ ಬಿಂದು ಅವರು ಸ್ನೇಹಿತ ರವಿ ಜೊತೆ ಹೊಲಕ್ಕೆ ಹೋಗಿದ್ದರು. ಬಿಂದು ಹೊಲದಲ್ಲಿ ನೀರಿನ ಪೈಪ್ ಸರಿ ಮಾಡುತ್ತಿದ್ದಾಗ ಗುಂಡಿನ ಸದ್ದು ಕೇಳಿಬಂದಿದೆ. ಅದೇ ಸಮಯಕ್ಕೆ ಗುಡಿಸಲಿನ ಪಕ್ಕ ನಿಂತಿದ್ದ ರವಿ ಗಾಯಗೊಂಡು ಕೂಗಿಕೊಂಡಿದ್ದಾರೆ. ತಕ್ಷಣ ಬಂದು ನೋಡಿದಾಗ ರವಿ ಅವರ ಕಾಲಿಗೆ ತೀವ್ರ ಗಾಯವಾಗಿತ್ತು.ಸ್ಥಳೀಯರಾದ ದೇವರಾಜ್ ಹಾಗೂ ರವಿ ಅವರ ಅಣ್ಣ ತೇಜು ಸಹಾಯದಿಂದ ಬಿಂದು ನಗರದ ಖಾಸಗಿ ಆಸ್ಪತ್ರೆಗೆ ರವಿ ಅವರನ್ನು ದಾಖಲಿಸಿ, ಚಿಕಿತ್ಸೆ ನೀಡಲಾಯಿತು. ರವಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಎಡತೊಡೆಗೆ ತೀವ್ರವಾದ ಗಾಯವಾಗಿದ್ದು, ಮೂಳೆ ಮುರಿದಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಕಾಡುಪ್ರಾಣಿಗಳ ಬೇಟೆಗೆ ಬಂದಿದ್ದ ಅಪರಿಚಿತರು ರವಿ ಅವರ ಕಾಲಿಗೆ ಗುಂಡು ಹೊಡೆದು ಕತ್ತಲಿನಲ್ಲಿ ಪರಾರಿಯಾಗಿದ್ದಾರೆ ಎಂದು ಘಟನಾ ಸ್ಥಳದಲ್ಲಿದ್ದ ಬಿಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗೆ ಹುಡುಕಾಟ ನಡೆದಿದೆ.- - - ಫೋಟೋ: ಗನ್.ಜೆಪಿಜಿ(ಸಾಂದರ್ಭಿಕ ಚಿತ್ರ)