ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಜಗಜ್ಯೋತಿ ಬಸವಣ್ಣ ಜಡತ್ವದಿಂದ ಕೂಡಿದ ಸಮಾಜದಲ್ಲಿ ಶರಣಾದಿ ಪ್ರಮಥರು ಅನುಭವ ಮಂಟಪ ಸ್ಥಾಪನೆ ಮಾಡಿ ಸರ್ವ ಸಮಾಜಗಳನ್ನು ಸಮಾನವಾಗಿ ಕಾಣುವ ಮೂಲಕ ಸಮಾಜಕ್ಕೆ ಹೊಸ ಬೆಳಕು ನೀಡಿದರು ಎಂದು ತರಳಬಾಳು ಜಗದ್ಗುರು ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.ತಾಲೂಕಿನ ಹಾಲ್ಕುರಿಕೆಯ ತರಳಬಾಳು ಇಂಟರ್ನ್ಯಾಷನಲ್ ಶಾಲೆ ಆವರಣದಲ್ಲಿ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ವತಿಯಿಂದ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಬಸವಣ್ಣನವರು ಜಗತ್ತಿನ ಶ್ರೇಷ್ಠ ದಾರ್ಶನಿಕರಾಗಿದ್ದು ಕರ್ನಾಟಕದಲ್ಲಿ ನಡೆದ ಕಲ್ಯಾಣ ಕ್ರಾಂತಿ ಜಗತ್ತಿನ ಸಮಗ್ರ ಕ್ರಾಂತಿ ಎಂದರೆ ತಪ್ಪಾಗಲಾರದು. ಸಮಾನತೆ ಸಮಾಜವಾದದ ತತ್ವ ಸಾರಿ ಅಕ್ಷರ, ಅನ್ನ, ಸ್ತ್ರೀ ರಾಜಕೀಯ ಬದಲಾವಣೆ ಸೇರಿದಂತೆ ಜಗತ್ತಿನ ಮೊದಲ ಸಮಗ್ರ ಕ್ರಾಂತಿಪುರುಷ ಎನಿಸಿಕೊಂಡರು. ಶ್ರೀಸಾಮಾನ್ಯನಿಗೆ ಅರ್ಥವಾಗುವ ಸಾಮಾನ್ಯ ಭಾಷೆಯಲ್ಲಿ ವಚನಗಳನ್ನ ರಚಿಸಿ ಸಮಾಜದಲ್ಲಿ ಹಾಸುಹೊಕ್ಕಾಗಿದ್ದ ಜಾತಿಯತೆ, ಅಸಮಾನತೆಯನ್ನ ಹೋಗಲಾಡಿಸಲು ಶ್ರಮಿಸಿದರು. ದೇಶದಲ್ಲಿ ನಡೆಯುತ್ತಿರುವ ಜಾತಿ ಧರ್ಮಗಳ ಮೇಲಾಟ ಹಾಗೂ ರಾಜಕೀಯ ಬೆಳವಣಿಗೆಗಳಿಗೆ ಬಸವಣ್ಣನವರ ಚಿಂತನೆಗಳು ಔಷಧಿಯಾಗಲಿವೆ. ಇಂದಿನ ದಿನಮಾನಗಳಲ್ಲಿ ಬಸವಣ್ಣನವರ ವಚನಗಳು ಜನರಿಗೆ ತಲುಪಲು ಶ್ರೀಮಠ ಶ್ರಮಿಸುತ್ತಿದೆ. ಸುಮಾರು ೨೫ಸಾವಿರ ವಚನಗಳನ್ನ ಜಗತ್ತಿನ ವಿವಿಧ ಭಾಷೆಗಳಿಗೆ ತರ್ಜಿಮೆ ಮಾಡಿ ಸಾಮಾನ್ಯ ಜನರಿಗೆ ತಲುಪುವಂತೆ ಮಾಡಿದ್ದೇವೆ. ತಂತ್ರಜ್ಞಾನದ ಸ್ಪರ್ಶ ನೀಡಿ ಜಗತ್ತಿನ ಯಾವುದೇ ಮೂಲೆಯಲ್ಲಿ ಕುಳಿತು ಮೊಬೈಲ್ಗಳಲ್ಲೇ ನೋಡುವಂತೆ ಮಾಡಿದ್ದೇವೆ ಎಂದರು. ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಶರಣರ ಚಿಂತನೆಗಳು ಸರ್ವಕಾಲಕ್ಕೂ ಪ್ರಸ್ತುತ. ದುಡಿದು ತಿನ್ನುವ ಸಂಸ್ಕೃತಿಯ ಬದಲಾಗಿ ಹೊಡೆದು ತಿನ್ನುವ ಸಂಸ್ಕೃತಿಯಾಗುತ್ತಿದೆ. ಮೋಸದಿಂದ ಗಳಿಸಿದ ಸಂಪತ್ತನೇ ತಮ್ಮ ಹೆಗ್ಗಳಿಕೆಯೆಂಬತೆ ತೋರಿಕೆ ಮಾಡಲಾಗುತ್ತಿರುವುದು ವಿಷಾದನೀಯ. ಬಸವ ತತ್ವದ ಆಚರಣೆ ಹಾಗೂ ಶರಣರ ವಚನಗಳು ಹೆಚ್ಚು ಪ್ರಭುದ್ದ ಮಾನಕ್ಕೆ ಬರಲು ತರಳಬಾಳು ಮಠ, ಹಿರಿಯ ಶ್ರೀಗಳು ಹಾಗೂ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳ ಕಾರ್ಯ ಶ್ಲಾಘನೀಯ ಎಂದರು. ಖ್ಯಾತ ಕವಯತ್ರಿ ಡಾ. ಗೀತಾ ವಸಂತ ಹಾಗೂ ಸಾಹಿತಿ ಕೃಷ್ಣಮೂರ್ತಿ ಬಿಳಿಗೆರೆ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ಸಿ ನಾಗೇಶ್, ಕರ್ನಾಟಕ ರಾಜ್ಯ ರೈತಸಂಘದ ರಾಜ್ಯಧ್ಯಕ್ಷ ಬಸವರಾಜಪ್ಪ, ಹಾಲ್ಕುರಿಕೆ ಗ್ರಾ.ಪಂ. ಅಧ್ಯಕ್ಷ ಸೋಮಶೇಖರ್, ಸಾಧು ವೀರಶೈವ ಸಮಾಜದ ತಾ. ಅಧ್ಯಕ್ಷ ನಂಜುಂಡಪ್ಪ, ಚಿಕ್ಕನಾಯ್ಕನಹಳ್ಳಿ ತಾ. ಅಧ್ಯಕ್ಷ ಮರುಳಪ್ಪ, ತುರುವೇಕೆರೆ ತಾ. ಅಧ್ಯಕ್ಷ ಷಡಕ್ಷರಿ ಮತ್ತಿತರರಿದ್ದರು. ಬಸವ ಜಯಂತಿ ಅಂಗವಾಗಿ ಹಾಲ್ಕುರಿಕೆ ಪ್ರಮುಖ ಬೀದಿಗಳಲ್ಲಿ ವಿವಿಧ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಯಿತು. ಮಠದ ಆವರಣದಲ್ಲಿ ಶ್ರೀಗಳಿಂದ ಶಿವಧ್ವಜಾರೋಹಣ ನೆರವೇರಿಸಲಾಯಿತು. ಅಣ್ಣ ಬಸವಣ್ಣ ಪುಸ್ತಕ ಬಿಡುಗಡೆ ಮಾಡಲಾಯಿತು. ತರಳಬಾಳು ಕಲಾ ಸಂಘದ ವಿದ್ಯಾರ್ಥಿಗಳಿಂದ ವಚನಗಾಯನ ಹಾಗೂ ವಚನ ನೃತ್ಯ ಪ್ರದರ್ಶನ ಮತ್ತು ಗೋವಿನ ಹಾಡು ನೃತ್ಯರೂಪಕ ನೆರವೇರಿತು.