ಭಾವಗೀತೆಗಳ ಸರದಾರ ಸದಾ ಜೀವಂತ: ಡಾ.ಮೀರಾ ಶಿವಲಿಂಗಯ್ಯ

| Published : Jun 03 2025, 02:30 AM IST

ಸಾರಾಂಶ

ಎಚ್‌ಎಸ್‌ವಿ ವಿರಚಿತ ಕವನ, ಕವಿತೆ, ಭಾವಗೀತೆಗಳು ಜನಮಾನಸದಲ್ಲಿ ಶಾಶ್ವತ ಸ್ಥಾನ ಗಳಿಸಿವೆ. ಕವಿತೆಗಳೊಂದಿಗೆ ಸಿನಿಮಾ ಸಾಹಿತ್ಯವನ್ನೂ ರಚಿಸಿದ್ದಾರೆ, ನಾವೂ ಅವರೊಂದಿಗೆ ಹಲವು ಸಾಹಿತ್ಯ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದು ಅವಿಸ್ಮರಣೀಯ.

ಕನ್ನಡಪ್ರಭ ವಾರ್ತೆ ಮಂಡ್ಯ

ಭಾವಗೀತೆಗಳ ಸರದಾರ ಎಂದೇ ಖ್ಯಾತರಾಗಿದ್ದ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರು ತಮ್ಮ ಸಾಹಿತ್ಯದ ಮೂಲಕ ಸದಾ ಜೀವಂತವಾಗಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಹೇಳಿದರು.

ನಗರದ ಬಂದಿಗೌಡ ಬಡಾವಣೆಯಲ್ಲಿರುವ ಕಸಾಪ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ತಾಲೂಕು ಕಸಾಪ ಘಟಕ ಆಯೋಜಿಸಿದ್ದ ಸಾಹಿತಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರ ಭಾವಪೂರ್ಣ ಶ್ರದ್ಧಾಂಜಲಿ ಮತ್ತು ನುಡಿ-ಗೀತನಮನ ಕಾರ್ಯಕ್ರಮದಲ್ಲಿ ಪುಷ್ಪನಮನ ಸಮರ್ಪಿಸಿ ಅವರು ಮಾತನಾಡಿದರು.

ಎಚ್‌ಎಸ್‌ವಿ ವಿರಚಿತ ಕವನ, ಕವಿತೆ, ಭಾವಗೀತೆಗಳು ಜನಮಾನಸದಲ್ಲಿ ಶಾಶ್ವತ ಸ್ಥಾನ ಗಳಿಸಿವೆ. ಕವಿತೆಗಳೊಂದಿಗೆ ಸಿನಿಮಾ ಸಾಹಿತ್ಯವನ್ನೂ ರಚಿಸಿದ್ದಾರೆ, ನಾವೂ ಅವರೊಂದಿಗೆ ಹಲವು ಸಾಹಿತ್ಯ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದು ಅವಿಸ್ಮರಣೀಯ ಎಂದು ನುಡಿದರು.

ಕವಿಯಾಗಿ, ನಾಟಕಕಾರನಾಗಿಯೂ ಗುರುತಿಸಿಕೊಂಡಿದ್ದ ಎಚ್‌ಎಸ್‌ವಿ ಮೊದಲ ಕವನ ಸಂಕಲನ ‘ಪರಿವೃತ್ತ’ವನ್ನು ನರಸಿಂಹ ಶಾಸ್ತ್ರಿಗಳಿಗೆ ಅರ್ಪಿಸಿದ್ದಾರೆ. ‘ಪರಿವೃತ್ತ’, ‘ಬಾಗಿಲು ಬಡಿವ ಜನಗಳು’ ಸೇರಿದಂತೆ ೧೫ಕ್ಕೂ ಹೆಚ್ಚು ಕವನ ಸಂಕಲಗಳನ್ನು ಅವರು ರಚಿಸಿದ್ದಾರೆ. ‘ಬಾನಸವಾಡಿಯ ಬೆಂಕಿ’, ‘ಪುಟ್ಟಾರಿಯ ಮತಾಂತರ’ ಕಥಾ ಸಂಕಲನ ಇವರಿಂದ ರಚಿತವಾಗಿದೆ. ‘ತಾಪಿ’, ‘ಅಮಾನುಷರು’, ‘ಕದಿರಿನ ಕೋಟೆ’, ‘ಅಗ್ನಿಮುಖಿ’ ಇವರಿಂದ ರಚಿತವಾದ ಕಾದಂಬರಿಗಳಾಗಿವೆ ಎಂದರು.

ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ ‘ಚಿನ್ನಾರಿ ಮುತ್ತ’ಗೆ ಇವರೇ ಕಥೆ, ಸಂಭಾಷಣೆ ಹಾಗೂ ಎಲ್ಲಾ ಹಾಡುಗಳನ್ನು ಬರೆದಿದ್ದರು. ‘ಅಮೆರಿಕ ಅಮೆರಿಕ’ ಚಿತ್ರದ ‘ಬಾನಲ್ಲಿ ಓಡೋ ಮೋಡ., ಪುನೀತ್ ನಟನೆಯ ‘ಮೈತ್ರಿ’ ಚಿತ್ರಕ್ಕೆ ಹಾಡು ಬರೆದಿದ್ದರು. ‘ಕಿರಿಕ್ ಪಾರ್ಟಿ’ ಚಿತ್ರದ ‘ತೂಗು ಮಂಚದಲ್ಲಿ ಕೂತು..’ ಹಾಡುಗಳು ಜನಪ್ರಿಯಗೊಂಡಿವೆ ಎಂದರು.

ಕಸಾಪ ಜಿಲ್ಲಾ ಮಾಜಿ ಅಧ್ಯಕ್ಷ ಪ್ರೊ.ಜಿ.ಟಿ.ವೀರಪ್ಪ, ಹೊಸಗನ್ನಡ ಸಾಹಿತ್ಯ ಲೋಕದ ಎರಡನೇ ತಲೆಮಾರಿನ ಕವಿಗಳಾಗಿ ಎಚ್.ಎಸ್. ವೆಂಕಟೇಶಮೂರ್ತಿ ಅವರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ, ಕನ್ನಡ ಸಾಹಿತ್ಯಕ್ಕೆ ಹಲವಾರು ಕವಿಗಳು ಸೇವೆ ಸಲ್ಲಿಸಿದ್ದಾರೆ, ಅವರಲ್ಲಿ ಇವರು ಪ್ರಮುಖರು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಮಾಜಿ ಅಧ್ಯಕ್ಷ ಎಂ.ವಿ.ಧರಣೇಂದ್ರಯ್ಯ, ತಾಲೂಕು ಕಸಾಪ ಅಧ್ಯಕ್ಷ ಚಂದ್ರುಲಿಂಗು, ಹರ್ಷ, ಗಾಯಕ ಮಹದೇವಸ್ವಾಮಿ, ರಂಗಸ್ವಾಮಿ, ಪುರುಷೋತ್ತಮ, ಕೊತ್ತತ್ತಿ ರಾಜು, ವೈ.ಎಂ.ಶಿವರಾಮು, ಪ್ರೊ.ಮಂಜು, ಚಿಕ್ಕತಿಮ್ಮಯ್ಯ, ಕಚೇರಿ ವ್ಯವಸ್ಥಾಪಕ ನಾಗರಾಜು ಮತ್ತಿತರರಿದ್ದರು.