ರೇಣುಕಾಚಾರ್ಯ ಜಯಂತಿಯಲ್ಲಿ ತಿಪ್ಪೇಸ್ವಾಮಿ ಅಭಿಮತಕನ್ನಡಪ್ರಭ ವಾರ್ತೆ ಹಿರಿಯೂರು

ಎಲ್ಲಾ ಧರ್ಮಗಳ ಅರ್ಥ ಮತ್ತು ಸಾರ ಒಂದೇ ಆಗಿದ್ದು ಅದು ಲೋಕ ಕಲ್ಯಾಣ ಹಾಗೂ ಮಾನವ ಕಲ್ಯಾಣವಾಗಿದೆ ಎಂದು ಉಪ ತಹಸೀಲ್ದಾರ್ ತಿಪ್ಪೇಸ್ವಾಮಿ ಹೇಳಿದರು.

ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಆಚರಿಸಿದ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ರೇಣುಕಾ ಚಾರ್ಯರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ವಿಶೇಷ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ಪರಸ್ಪರ ಪ್ರೀತಿ, ಸಹಬಾಳ್ವೆ, ಸಮನ್ವಯತೆ, ಐಕ್ಯತೆಯಿಂದ ಬಾಳುವುದನ್ನು ಎಲ್ಲಾ ಧರ್ಮಗಳು ತಿಳಿಸುತ್ತವೆ. ದಾರ್ಶನಿಕರು, ಸಾಧುಸಂತರು ಗುರುಗಳು ಸೇರಿದಂತೆ ಎಲ್ಲಾ ಮಹಾನ್ ನಾಯಕರ ತತ್ವ ಸಂದೇಶ ಒಂದೇ ಆಗಿದ್ದು ಅವುಗಳನ್ನು ಅರಿತು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಡೆದರೆ ಜೀವನ ಸಾರ್ಥಕವಾಗುತ್ತದೆ ಎಂದರು.

ಉಪನ್ಯಾಸ ನೀಡಿದ ಚಂದ್ರಶೇಖರಯ್ಯ ಮಾತನಾಡಿ, ರೇಣುಕರು ಲಿಂಗೋದ್ಭರಾಗಿ ಲೋಕ ಕಲ್ಯಾಣಕ್ಕಾಗಿ ಭೂಮಿಗೆ ಬಂದವರು. ಅದರಲ್ಲೂ ವಿಶೇಷವಾಗಿ ವೀರಶೈವ ಧರ್ಮದ ಆಚಾರ ವಿಚಾರ, ತತ್ವ ಸಿದ್ಧಾಂತಗಳನ್ನು ಜಾಗೃತಿಗೊಳಿಸುವ ಕೆಲಸ ಮಾಡಿದ್ದಾರೆ. ಅವರ ಸಿದ್ಧಾಂತಗಳನ್ನು ನಾವು ಓದಿ ಅದರ ಅರ್ಥವನ್ನು ಅರಿತುಕೊಂಡು ಸಾಮಾನ್ಯರಿಗೆ ತಿಳಿಸುವಂತಹ ಕೆಲಸ ಜಂಗಮರಿಂದ ಆಗಬೇಕು ಎಂದರು.


ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಉಮೇಶ್ ಗುಡಾಣಮಠ್ ಮಾತನಾಡಿ, ಶ್ರೀ ರೇಣುಕರು ಯುಗಪುರುಷರು. ಶೈವ ಧರ್ಮದಿಂದ ವೀರಶೈವ ಧರ್ಮಕ್ಕೆ ಬಂದವರು. ಎಲ್ಲಾ ಜಾತಿಗಳು ಉತ್ತಮವಾದವುಗಳು ಆಗಿದ್ದು ಮೇಲು ಕೀಳು ಸಲ್ಲದು. ಮನುಷ್ಯ ಉತ್ತಮ ಚಾರಿತ್ರವನ್ನು ಅನುಸರಿಸಬೇಕು ಎಂದರು.

ಈ ಸಂದರ್ಭದಲ್ಲಿ ಜಂಗಮ ಸಮಾಜದ ಅಧ್ಯಕ್ಷ ಸಿಎಂ ಸ್ವಾಮಿ, ತಾಲೂಕು ವೀರಶೈವ ಸಮಾಜದ ಪ್ರಧಾನ ಕಾರ್ಯದರ್ಶಿ ಮಹಂತೇಶ್, ಕೆ.ಆರ್.ವೀರಭದ್ರಯ್ಯ, ವಿ.ಅರುಣ್ ಕುಮಾರ್, ಮಮತಾ ಭುವನೇಶ್, ಎಂ.ಪ್ರಕಾಶ್ ಕುಮಾರ್, ಶಿವಶಂಕರ ಮಠದ್, ಸಹನಾ ಸ್ವಾಮಿ, ಸುಮಂಗಲ ಪ್ರಕಾಶ್, ಜ್ಞಾನಮೂರ್ತಿ, ಚನ್ನಬಸವರಾಜು,ಶ್ರೀನಿವಾಸ್ ರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.