ಸಾರಾಂಶ
ಸಮಾಜ ತಿದ್ದುವಂತಹ ವಚನಗಳನ್ನು ರಚಿಸುವ ಮೂಲಕ ಸಮಸಮಾಜ ನಿರ್ಮಾಣಕ್ಕೆ ಮುಂದಾದ ಬಸವಣ್ಣನವರಂತಹ ಪುಣ್ಯ ಪುರುಷರ ಸ್ಮರಣೆ ಸರ್ವಕಾಲಕ್ಕೂ ಅವಶ್ಯವಾಗಿದೆ ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಚಾಮರಾಜನಗರಸಮಾಜ ತಿದ್ದುವಂತಹ ವಚನಗಳನ್ನು ರಚಿಸುವ ಮೂಲಕ ಸಮಸಮಾಜ ನಿರ್ಮಾಣಕ್ಕೆ ಮುಂದಾದ ಬಸವಣ್ಣನವರಂತಹ ಪುಣ್ಯ ಪುರುಷರ ಸ್ಮರಣೆ ಸರ್ವಕಾಲಕ್ಕೂ ಅವಶ್ಯವಾಗಿದೆ ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ಅಭಿಪ್ರಾಯಪಟ್ಟರು.
ನಗರದ ವರನಟ ಡಾ. ರಾಜ್ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಸರ್ಕಾರವು ಜಗಜ್ಯೋತಿ ಬಸವೇಶ್ವರರನ್ನು ’ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ’ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕರೆಂಬ ಬರಹ ಉಳ್ಳ ಬಸವಣ್ಣನವರ ಭಾವಚಿತ್ರ ಅನಾವರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್ಕಾರವು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕರನ್ನಾಗಿ ಘೋಷಣೆ ಮಾಡಿರುವುದು ಸ್ವಾಗತಾರ್ಹವಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಇಂದು ಸರ್ಕಾರದ ವತಿಯಿಂದ ಬಸವಣ್ಣನವರ ಭಾವಚಿತ್ರ ಅನಾವರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇವನಾರವ, ಇವನಾರವ ಎನ್ನದೇ ಇವ ನಮ್ಮವ ಎನ್ನುವ ಸಂದೇಶ ಸಾರಿದ ಬಸವಣ್ಣನವರ ನೆನೆಯುವ ಕಾರ್ಯವಾಗಬೇಕು ಎಂದರು. ಸಮಾಜದಲ್ಲಿದ್ದ ಮೂಢನಂಬಿಕೆ, ತಾರತಮ್ಯ, ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿ ಕಾಯಕದ ಮಹತ್ವವನ್ನು ತಿಳಿಸಿದ ಬಸವಣ್ಣನ ಸ್ಮರಣೆ ಎಲ್ಲೆಡೆ ಆಗಬೇಕು. ಎಲ್ಲಾ ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ ಬಸವಣ್ಣನವರ ಭಾವಚಿತ್ರ ಅಳವಡಿಸಬೇಕು. ತಪ್ಪಿದಲ್ಲಿ ಕ್ರಮವಹಿಸಬೇಕು. ಜಿಲ್ಲಾಡಳಿತದ ಆವರಣದಲ್ಲಿ ಬಸವಣ್ಣನವರ ಪ್ರತಿಮೆ ನಿರ್ಮಾಣಕ್ಕಾಗಿ ಅನುದಾನ ಬಿಡುಗಡೆಯಾಗಿದೆ. ಆದಷ್ಟು ಬೇಗ ಕೆಲಸ ಪ್ರಾರಂಭವಾಗಬೇಕು ಎಂದು ತಿಳಿಸಿದರು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾನಾಗ್ ಬಸವಣ್ಣನವರು ರಚಿಸಿದ ವಚನಗಳ ಸಾರ್ವತ್ರಿಕ ಮೌಲ್ಯಗಳು ಸರ್ವಕಾಲಕ್ಕೂ ದಾರಿದೀಪವಾಗಿದೆ. ವಿಶ್ವಸಂಸ್ಕೃತಿ, ಉದಾರ ತತ್ವಗಳನ್ನು ಪ್ರತಿಪಾದಿಸಿದ ಬಸವಣ್ಣನವರು ವಿಶ್ವಗುರು ಸಾಂಸ್ಕೃತಿಕ ನಾಯಕರಾಗಿದ್ದಾರೆ. ಮಹಿಳಾ ಅಸಮಾನತೆ, ಮೂಢನಂಬಿಕೆ ವಿರೋಧಿಸಿ, ನಡೆ-ನುಡಿ ಒಂದೇ ಆಗಿರಬೇಕೆಂದ ಬಸವಣ್ಣ ನುಡಿದಂತೆ ನಡೆದರು ಕೂಡ ಇಂದಿನ ಯುವಪೀಳಿಗೆ ಹಾಗೂ ಅಧಿಕಾರಿಗಳು ಕಾಯಕವೇ ಕೈಲಾಸ ಎಂಬ ಬಸವಣ್ಣನವರ ತತ್ವವನ್ನು ಪಾಲಿಸಬೇಕು ಎಂದರು.ಬಸವಣ್ಣನವರ ಭಾವಚಿತ್ರ ಅನಾವರಣಗೊಳಿಸಿ ಮಾತನಾಡಿದ ಹರವೆ ವಿರಕ್ತಮಠದ ಸರ್ಪಭೂಷಣಸ್ವಾಮೀಜಿ ಸರ್ಕಾರವು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕರನ್ನಾಗಿ ಘೋಷಿಸಿರುವುದು ಸಂತಸದ ವಿಚಾರ. ಅನುಭವ ಮಂಟಪ ನಿರ್ಮಿಸಿ ಸಮಾನತೆ ಹಂಚಿದ ಬಸವಣ್ಣನವರು ಎಲ್ಲಾ ವರ್ಗಗಳಿಗೂ ಸಮಾನ ಗೌರವ ದೊರೆಯುವಂತೆ ಮಾಡಿದರು. ವಚನಗಳಲ್ಲಿನ ಸಾರವನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡರೆ ಸಾಮಾಜಿಕ ಸಮಸ್ಯೆಗಳು ದೂರವಾಗಲಿವೆ ಎಂದರು.ನಗರದ ವಿರಕ್ತ ಮಠದ ಚೆನ್ನಬಸವಸ್ವಾಮೀಜಿ ಮಾತನಾಡಿ ಬಸವಣ್ಣನವರು ಇಡೀ ಸಮಾಜಕ್ಕೆ ಸಮಾನತೆಯ ತತ್ವ ಭೋದಿಸಿದರು. ಅವರ ವಚನಗಳು. ಸಪ್ತಸೂತ್ರಗಳು ಎಲ್ಲರ ಜೀವನಕ್ಕೆ ದಾರಿ ದೀಪವಾಗಿವೆ. ಬಸವಣ್ಣನವರ ವಚನಗಳ ಅನುಸರಣೆಯಿಂದ ಜೀವನವನ್ನು ಸಾರ್ಥಕಪಡಿಸಿಕೊಳ್ಳಬಹುದು ಎಂದು ತಿಳಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಪಿ.ಲಕ್ಷಿ, ಭೂ ದಾಖಲೆ ಇಲಾಖೆಯ ವಿದ್ಯಾಯಿನಿ, ಮುಖಂಡರಾದ ಮೂಡ್ಲುಪುರ ನಂದೀಶ್, ಡಿ. ನಾಗೇಂದ್ರ, ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.