ಕದಂಬ ಕನ್ನಡ ಜಿಲ್ಲೆಯಾಗಿಸುವ ಧ್ಯೇಯ ನಿರಂತರ

| Published : Nov 17 2024, 01:15 AM IST

ಸಾರಾಂಶ

ಇಲ್ಲಿ ನಾಯಕತ್ವ ಕೇವಲ ಸಾಂಕೇತಿಕವಾಗಿದ್ದು, ಜಿಲ್ಲೆಯನ್ನಾಗಿಸುವ ಧ್ಯೇಯ ಮಾತ್ರ ನಿರಂತರವಾಗಿರುತ್ತದೆ ಎಂದು ಕದಂಬ ಕನ್ನಡ ಜಿಲ್ಲೆಗಾಗಿ ಶನಿವಾರ ಶಿರಸಿಯಲ್ಲಿ ನಡೆದ ಜನಜಾಗೃತಿ ಸಭೆಯಲ್ಲಿ ನಿರ್ಣಯಿಸಲಾಯಿತು.

ಶಿರಸಿ: ಘಟ್ಟದ ಮೇಲಿನ ಪ್ರತಿ ತಾಲೂಕಿನಲ್ಲಿ ಎಲ್ಲರನ್ನು ಒಳಗೊಂಡು ಕದಂಬ ಕನ್ನಡ ಜಿಲ್ಲೆಯ ಸಮಿತಿ ರಚನೆಯಾಗಬೇಕು. ಈ ಹೋರಾಟ ಜಿಲ್ಲೆಯಾಗುವ ವರೆಗೂ ನಿರಂತರವಾಗಿರಬೇಕು. ಜಿಲ್ಲಾ ಹೋರಾಟವನ್ನು ಮುಂದುವರಿಸುವವರು ಕದಂಬ ಕನ್ನಡ ಸೇನಾನಿಗಳೇ ಅಗಿರುತ್ತಾರೆ ಹೊರತು ಯಾವ ನಾಯಕರಲ್ಲ. ಇಲ್ಲಿ ನಾಯಕತ್ವ ಕೇವಲ ಸಾಂಕೇತಿಕವಾಗಿದ್ದು, ಜಿಲ್ಲೆಯನ್ನಾಗಿಸುವ ಧ್ಯೇಯ ಮಾತ್ರ ನಿರಂತರವಾಗಿರುತ್ತದೆ ಎಂದು ಕದಂಬ ಕನ್ನಡ ಜಿಲ್ಲೆಗಾಗಿ ಶನಿವಾರ ಶಿರಸಿಯಲ್ಲಿ ನಡೆದ ಜನಜಾಗೃತಿ ಸಭೆಯಲ್ಲಿ ನಿರ್ಣಯಿಸಲಾಯಿತು.

ನಗರದ ರಂಗಧಾಮದಲ್ಲಿ ನಡೆದ ಕದಂಬ ಕನ್ನಡ ಜಿಲ್ಲೆಗಾಗಿ ಜನಜಾಗೃತಿ ಸಭೆಯಲ್ಲಿ ಘಟ್ಟದ ಮೇಲಿನ ತಾಲೂಕುಗಳ ವಿವಿಧ ಸಂಘಟನೆಗಳ ಪ್ರಮುಖರು ಭಾಗಿಯಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.

ಕದಂಬ ಕನ್ನಡ ಜಿಲ್ಲೆ ರಚನೆ ಮತ್ತು ಹಿತರಕ್ಷಣಾ ಟ್ರಸ್ಟ್‌ನ ಎಂ.ಎಂ. ಭಟ್ಟ ಪ್ರಾಸ್ತಾವಿಕ ಮಾತನಾಡಿ, ಕಳೆದ 24 ವರ್ಷದ ಹಿಂದೆಯೇ ಶಿರಸಿ ಪ್ರತ್ಯೇಕ ಜಿಲ್ಲೆಯ ಹೋರಾಟ ಪ್ರಾರಂಭವಾಗಿತ್ತು. ನಂತರದಲ್ಲಿ ಉಪೇಂದ್ರ ಪೈ ಅವರ ನೇತೃತ್ವದಲ್ಲಿ ಪ್ರತ್ಯೇಕ ಜಿಲ್ಲಾ ಹೋರಾಟ ಮತ್ತೆ ಬಿರುಸಾಯಿತು. ಅಂತಿಮ ಹಂತದಲ್ಲಿ ಆ ಪ್ರಯತ್ನ ಕೈಗೂಡಲಿಲ್ಲ. ಆದರೆ, ಇದೀಗ ಮತ್ತೆ ಪ್ರತ್ಯೇಕ ಜಿಲ್ಲಾ ಹೋರಾಟ ಕೈಗೆತ್ತಿಕೊಳ್ಳಲಾಗಿದೆ. ಎಲ್ಲರ ಸಹಕಾರದಿಂದ ಜಿಲ್ಲೆ ರಚನೆ ಸಾಧ್ಯ. ಜನಸಾಮಾನ್ಯರ ಮನೆಬಾಗಿಲಿಗೆ ಆಡಳಿತ ಮತ್ತು ಅನುಕೂಲತೆ ದೃಷ್ಟಿಯಿಂದ ಪ್ರತ್ಯೇಕ ಜಿಲ್ಲೆಯ ರಚನೆ ಆಗಲೇಬೇಕು. ಈಗಿನ ಜಿಲ್ಲಾ ಕೇಂದ್ರ ಕಾರವಾರ ಇಂದಲ್ಲ, ನಾಳೆ ಡಿಫೆನ್ಸ್ ಹಬ್ ಆಗಲಿದೆ ಎಂದು 2021ರ ದಿ ಹಿಂದೂ ಎಡಿಟೋರಿಯಲ್ ಬರೆದಿದ್ದು ಇಲ್ಲಿ ಉಲ್ಲೇಖನೀಯ. ಹೀಗಾದಲ್ಲಿ ಜನಸಾಮಾನ್ಯರು ಸ್ವತಂತ್ರವಾಗಿ ಅವರವರ ಕೆಲಸ ನಿರ್ವಹಿಸುವುದು ಕಷ್ಟಸಾಧ್ಯ. ಎಲ್ಲ ಕಾರಣಕ್ಕೆ ಕದಂಬ ಕನ್ನಡ ಜಿಲ್ಲೆಯಾಗುವುದು ಅನಿವಾರ್ಯ ಎಂದರು.

ಕದಂಬ ಕನ್ನಡ ಜಿಲ್ಲಾ ರಚನೆ ಮತ್ತು ಹಿತರಕ್ಷಣಾ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಮಾತನಾಡಿ, ಕದಂಬ ಎಂಬ ಹೆಸರು ನಮ್ಮೆಲ್ಲರಿಗೂ ಶಕ್ತಿ ಕೊಡುವಂತದ್ದಾಗಿದೆ. ಅದೇ ರೀತಿ ತಾಯಿ ಭುವನೇಶ್ವರಿ ದೇವಿಯ ಆರಾಧ್ಯ ಸ್ಥಳ. ಆ ಹಿನ್ನೆಲೆಯಲ್ಲಿ ಕದಂಬ ಕನ್ನಡ ಜಿಲ್ಲೆ ರಚನೆ ನಮ್ಮ ಆಗ್ರಹವಾಗಿದೆ. ಎಲ್ಲರ ಮನಸ್ಸು ಗೆಲ್ಲುವ ಪ್ರಯತ್ನ ನಮ್ಮಿಂದಾಗಬೇಕು. ಜನರ ಅಭಿಪ್ರಾಯ ರೂಪಿಸುವ ಕೆಲಸ ಮಾಡಬೇಕಿದೆ. ಈ ಮುಂಚೆ ಶಿರಸಿ ಪ್ರತ್ಯೇಕ ಜಿಲ್ಲೆಗಾಗಿ ಹಿರಿಯರಾದ ಉಪೇಂದ್ರ ಪೈ ಅವರು ಬಹಳ ಒಳ್ಳೆಯ ರೀತಿಯಲ್ಲಿ ಸಂಘಟನೆ ಮಾಡಿ, ಹೋರಾಟ ನಡೆಸಿದ್ದಾರೆ. ಅವರ ಹೋರಾಟದ ಪ್ರತಿಫಲವೇ ಇಂದು ಇಷ್ಟೊಂದು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗಿಯಾಗಿದ್ದಾರೆ. ಅವರನ್ನೂ ಒಳಗೊಂಡು ನಾವೆಲ್ಲರೂ ಜತೆಯಾಗಿ ಕದಂಬ ಕನ್ನಡ ಜಿಲ್ಲೆಯ ಹೋರಾಟ ನಡೆಸೋಣ. ಜಿಲ್ಲೆಯ ರಚನೆ ಆಗುವರೆಗೂ ವಿರಮಿಸದಿರೋಣ ಎಂದರು.

ಕದಂಬ ಕನ್ನಡ ಜಿಲ್ಲೆಗಾಗಿ ನಡೆದ ಜನಜಾಗೃತಿ ಸಭೆಯಲ್ಲಿ ವಿವಿಧ ತಾಲೂಕುಗಳ ಪ್ರಮುಖ ಸಮಿತಿಯ ಪದಾಧಿಕಾರಿಗಳು, ಸಾರ್ವಜನಿಕರು ಭಾಗಿಯಾಗಿದ್ದರು.

ನಾಯಕತ್ವ ಮುಖ್ಯವಲ್ಲ

ಉಪೇಂದ್ರ ಪೈ ನಮ್ಮೊಡನೆ ಬಂದಲ್ಲಿ, ಕದಂಬ ಕನ್ನಡ ಜಿಲ್ಲೆಯ ಗೌರವಾಧ್ಯಕ್ಷರನ್ನಾಗಿಸಿ, ಅವರ ಮಾರ್ಗದರ್ಶನದಲ್ಲಿಯೇ ಹೋರಾಟ ಮಾಡೋಣ. ನಮಗೆ ನಾಯಕತ್ವ ಮುಖ್ಯವಲ್ಲ, ಬದಲಾಗಿ ಕದಂಬ ಕನ್ನಡ ಜಿಲ್ಲೆಯಾಗುವುದೇ ಧ್ಯೇಯ. ಅನಂತಮೂರ್ತಿ ಹೆಗಡೆ ಎನ್ನುವ ಹೆಸರು ಇಲ್ಲಿ ಸಾಂಕೇತಿಕ. ನಮ್ಮ ನಿಜವಾದ ನಾಯಕ ಕದಂಬ ಕನ್ನಡವಾಗಿದೆ. ಜಿಲ್ಲೆ ರಚನೆ ನಮ್ಮ ಧ್ಯೇಯವಾಗಿದ್ದು, ಆ ಹಾದಿಯಲ್ಲಿ ನಾವೆಲ್ಲ ನಡೆಯಬೇಕಿದೆ.

ವಿ.ಎಂ. ಭಟ್ಟ, ನಿವೃತ್ತ ಎಂಜಿನಿಯರ್ಸಹಕಾರ

ನಮ್ಮ ಜಿಲ್ಲೆ ಭಾಗೋಳಿಕವಾಗಿ ದೊಡ್ಡದಾಗಿದ್ದು, ಬಹುತೇಕರಿಗೆ ಜಿಲ್ಲಾ ಕೇಂದ್ರಕ್ಕೆ ಹೋಗುವ ಅನಿವಾರ್ಯತೆ ಇದ್ದೆ ಇರುತ್ತದೆ. ಜಿಲ್ಲಾ ಕೇಂದ್ರ ನಮಗೆಲ್ಲರಿಗೂ ಬಹುದೂರವಾಗಿದ್ದು, ಶಿರಸಿ ಜಿಲ್ಲಾಕೇಂದ್ರವಾದರೆ ನಮ್ಮೆಲ್ಲರ ಸಹಕಾರವಿದೆ.

ರಾಘವೇಂದ್ರ ಹಾಸಣಗಿ, ಜಿ.ಪಂ. ಮಾಜಿ ಸದಸ್ಯ

ಬಲ ಬರಲಿ

ಶಿರಸಿ ಶೈಕ್ಷಣಿಕ ಜಿಲ್ಲೆಯ ರಚನೆಯನ್ನು ಮಾಡಿರುವಂತೆಯೇ ಕದಂಬ ಕನ್ನಡ ಜಿಲ್ಲೆ ರಚನೆಯಾಗಲಿ. ಆ ಮೂಲಕ ಎಲ್ಲರ ಧ್ವನಿಗೆ ಬಲ ಬರಲಿ.

ಸುಭಾಷ್ ಕಾನಡೆ, ಕೈಗಾ ಮಾಜಿ ಅಧಿಕಾರಿ

ಶಿರಸಿ ಕೇಂದ್ರಿತ ಜಿಲ್ಲೆ

ಸಮಗ್ರ ನಾಯಕತ್ವದ ಹೋರಾಟಕ್ಕೆ ನಮ್ಮ ಸಹಕಾರವಿದೆ. ಶಿರಸಿ ಕೇಂದ್ರಿತ ಜಿಲ್ಲೆಯಾಗಲೇಬೇಕು.

ಸುಭಾಷ್ ನಾಯ್ಕ, ಅಧ್ಯಕ್ಷರು, ಭಗತ್ ಸಿಂಗ್ ಬ್ರಿಗೇಡ್

ಯೋಗ್ಯತೆ

ಕದಂಬ ಕನ್ನಡ ಜಿಲ್ಲೆಯಾಗುವ ಯೋಗ್ಯತೆ, ಅರ್ಹತೆ ಎರಡೂ ಈ ಪ್ರದೇಶಕ್ಕಿದೆ.

ಕೇಶವ ಡೊಂಬೆ, ಅಧ್ಯಕ್ಷರು ಸುಭಾಶ್ಚಂದ್ರ ಬೋಸ್ ಕಾರ್ಯಪಡೆ

ಅನುಕೂಲಕ್ಕಾಗಿ ಜಿಲ್ಲೆ

ಪ್ರತಿಯೊಬ್ಬ ಜಿಲ್ಲಾಮಟ್ಟದ ಅಧಿಕಾರಿ, ಜನಪ್ರತಿನಿಧಿಗಳಿಗೆ ಕಾರವಾರ ಜಿಲ್ಲಾ ಕೇಂದ್ರಕ್ಕೆ ತೆರಳುವ ಸಮಸ್ಯೆಯ ಅನುಭವ ಗೊತ್ತಿದೆ. ವಿಕಲಚೇತನರಿಗೆ, ಬುದ್ಧಿಮಾಂದ್ಯರು ಪ್ರಮಾಣಪತ್ರ ಜಿಲ್ಲಾ ಕೇಂದ್ರದಿಂದಲೇ ಪಡೆಯಬೇಕು. ಎಲ್ಲ ಸಾರ್ವಜನಿಕರ ಅನುಕೂಲಕ್ಕಾಗಿ ಕದಂಬ ಕನ್ನಡ ಜಿಲ್ಲೆಯಾಗಲೇಬೇಕು.

ಶೋಭಾ ನಾಯ್ಕ, ಜಿಪಂ ಮಾಜಿ ಸದಸ್ಯೆ

ರಾಜಕೀಯ ಬೇಡ

ಕದಂಬ ಕನ್ನಡ ಜಿಲ್ಲೆ ಹೋರಾಟಕ್ಕೆ ನಮ್ಮ ಕೆನರಾ ಬಾರ್ ಬೆಂಡಿಂಗ್ ಅಸೋಸಿಯೇಷನ್ ಪೂರ್ಣ ಸಹಕಾರವಿದೆ. ಆದರೆ, ಯಾರ ವೈಯಕ್ತಿಕ ರಾಜಕೀಯ ಕಾರಣಕ್ಕಾಗಿ ಯಾವುದೇ ಹೋರಾಟವನ್ನು ಬಳಸಿಕೊಳ್ಳಬೇಡಿ. ಕದಂಬ ಕನ್ನಡ ಜಿಲ್ಲೆ ರಚನೆಗಾಗಿ ಎಲ್ಲರೂ ಒಗ್ಗೂಡಿ ಜೊತೆಯಾಗಿ ಹೋರಾಡೋಣ.

ಆನಂದ ಸಾಲೇರ ಕೆನರಾ ಬಾರ್ ಬೆಂಡಿಂಗ್ ಅಸೋಸಿಯೇಷನ್ ಪ್ರಮುಖರು

ಜಿಲ್ಲಾ ರಚನೆ

ಶಿರಸಿ ಕೇಂದ್ರಿತ ಪ್ರತ್ಯೇಕ ಜಿಲ್ಲಾ ರಚನೆಗೆ ನಮ್ಮೆಲ್ಲರ ಪೂರ್ಣ ಸಹಕಾರವಿದೆ. ಹೆಚ್ಚಿನ ಸಾರ್ವಜನಿಕರು ಈ ಹೋರಾಟದಲ್ಲಿ ಭಾಗಿಯಾಗೋಣ.

ಪ್ರದೀಪ ಶೆಟ್ಟಿ, ನಗರಸಭೆ ಮಾಜಿ ಅಧ್ಯಕ್ಷ

ಒಗ್ಗೂಡಿ ಹೋರಾಟ

ಶಿರಸಿ ಜಿಲ್ಲೆಯಾಗುವುದಕ್ಕೆ ನಮ್ಮ ಹಾಲು ಸಂಘಗಳಿಂದಲೂ ಬೇಡಿಕೆಯಿದೆ. ನಾವೂ ಈ ಜಿಲ್ಲೆಗೆ ಪ್ರತ್ಯೇಕ ಒಕ್ಕೂಟಕ್ಕಾಗಿ ಆಗ್ರಹ ಮಾಡಿದ್ದೆವು. ಎಲ್ಲರೂ ಒಗ್ಗೂಡಿ ಹೋರಾಟದಲ್ಲಿ ಪಾಲ್ಗೊಳ್ಳೋಣ.

ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಉಪಾಧ್ಯಕ್ಷರು, ಧಾರವಾಡ ಹಾಲು ಒಕ್ಕೂಟ