ರಾಷ್ಟ್ರೀಯ,ರಾಜ್ಯ ಶಿಕ್ಷಣ ನೀತಿ ವಿವೇಕ ರಹಿತ

| Published : Aug 02 2024, 12:55 AM IST

ಸಾರಾಂಶ

ರಾಷ್ಟ್ರೀಯ,ರಾಜ್ಯ ಶಿಕ್ಷಣ ನೀತಿ ವಿವೇಕ ರಹಿತ: ಬರಗೂರು ರಾಮಚಂದ್ರಪ್ಪ ಅಸಮಾಧಾನ

ಕನ್ನಡಪ್ರಭ ವಾರ್ತೆ ತುಮಕೂರು

ವಿವೇಕ ರಹಿತ ಶಿಕ್ಷಣ ಪ್ರಯೋಗಗಳಾದ ರಾಷ್ಟ್ರೀಯ ಶಿಕ್ಷಣ ನೀತಿ, ರಾಜ್ಯ ಶಿಕ್ಷಣ ನೀತಿಗಳು ವಿದ್ಯಾರ್ಥಿಗಳನ್ನು ಪ್ರಯೋಗದ ವಸ್ತುಗಳಾಗಿ ಬಳಸಿಕೊಳ್ಳುತ್ತಿವೆ. ಶೈಕ್ಷಣಿಕ ಅಸಮಾನತೆಯನ್ನು ನೀಗುವ ಶಿಕ್ಷಣ ನೀತಿ ತರಲು ಯಾವ ಸರ್ಕಾರದಿಂದಲೂ ಸಾಧ್ಯವಾಗಲಿಲ್ಲ ಎಂದು ರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ವಿಶ್ವವಿದ್ಯಾನಿಲಯ ಕಲಾ ಕಾಲೇಜು ಗುರುವಾರ ಆಯೋಜಿಸಿದ್ದ ‘ಕಲಾಸಿರಿ-2024’ ಕಾಲೇಜು ವಾರ್ಷಿಕೋತ್ಸವ ಹಾಗೂ ಜಾನಪದ ಕಲಾ ಮೇಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಾತಿ, ಧರ್ಮ, ಲಿಂಗ, ವರ್ಗ, ವರ್ಣಗಳ ತಾರತಮ್ಯವನ್ನು ಹೋಗಲಾಡಿಸಿ ಆತ್ಮಸ್ಥೈರ್ಯ ಕೊಡುವ, ಸೌಹಾರ್ದತೆಯನ್ನು ಸಾರುವ, ಶೈಕ್ಷಣಿಕ ಬಿಕ್ಕಟ್ಟುಗಳನ್ನು ಬಗೆಹರಿಸುವ ಶಿಕ್ಷಣ ವ್ಯವಸ್ಥೆ ನಮ್ಮದಾಗಬೇಕು. ವಿದ್ಯಾವಂತರು ಹೆಚ್ಚಾದಂತೆ ಜಾತಿವಾದಿಗಳು ಬೆಳೆಯುತ್ತಿದ್ದಾರೆ. ಸಮಾನತೆಯ ಮುಖವಾಡಗಳನ್ನು ಧರಿಸಿ ಅಸಮಾನತೆಯ ನೆರಳಡಿ ಬದುಕುತ್ತಿರುವ ಅವಿವೇಕಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಕಲಿಸಬೇಕೆಂಬ ನಿಯಮ ಮಾಡಿದರೆ ನ್ಯಾಯಾಲಯಗಳ ಮೆಟ್ಟಿಲೇರುವ ಶಾಲಾ ಕಾಲೇಜುಗಳಿಗೆ ಮನ್ನಣೆಕೊಡುವುದಷ್ಟ ಮನಸ್ಥಿತಿಯವರು ಸೃಷ್ಟಿಯಾಗಿದ್ದಾರೆ ಎಂದು ಬೇಸರ ವ್ಯಕ್ತ ಪಡಿಸಿದರು.

ತರಗತಿಗಳಲ್ಲಿ ತಂತ್ರಜ್ಞಾನದ ಮೇಲಿನ ಅವಲಂಬನೆ ಪುಸ್ತಕಕ್ಕಿಂತಲೂ ಹೆಚ್ಚಾಗಿರುವುದು ವಿಪರ್ಯಾಸ. ವಿದ್ಯಾರ್ಥಿಗಳಲ್ಲಿ ಚರ್ಚಾ ವಲಯವನ್ನು ವೃದ್ಧಿಸಿ, ಶಿಕ್ಷಣ ಸಮಾನತೆಯನ್ನು ಕಲಿಸಬೇಕಾದ ತರಗತಿಗಳು ಮನುಷ್ಯತ್ವವಿಲ್ಲದ ಮಾನವರನ್ನು ಸೃಷ್ಟಿಸುತ್ತಿರುವುದು ಈ ಯುಗದ ದುರಂತ. ತಂತ್ರಜ್ಞಾನದ ಬಳಕೆ ಹೆಚ್ಚಾದಂತೆ ಮನುಷ್ಯ ಸಂಬಂಧ ಕುಸಿಯುತ್ತಿದೆ. ಮುಖ್ಯವಾಗಿ ಶಿಕ್ಷಕರು-ವಿದ್ಯಾರ್ಥಿಗಳ ನಡುವಿನ ಸಂಬಂಧ ಕುಸಿದಿದೆ. ಶಿಕ್ಷಣದ ಮಹತ್ವ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳಿಗೆ ತಿಳಿಯಬೇಕಾದ ಪರಿಸ್ಥಿತಿಯುಂಟಾಗಿದೆ. ಮಾನವಿಕ ಮುಖಗಳನ್ನು ತಿಳಿಯಬೇಕಾದ ಯುವಪೀಳಿಗೆ ಲಾಭಕೋರ ಮನಸ್ಥಿತಿಯಿಂದ ಮೌಲ್ಯಗಳನ್ನು ಪಲ್ಲಟಗೊಳಿಸಿ ವಿಕೃತಿ ಮೆರೆಯುತ್ತಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಶಿಸ್ತುಬದ್ಧ ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಗಳಿಂದ ಹೊರಬರಬೇಕು. ಸ್ಥಾನದಿಂದ ಬರುವ ಗೌರವ ಅಲ್ಪಾವಧಿ. ವ್ಯಕ್ತಿತ್ವದಿಂದ ಬರುವ ಗೌರವ, ಸಿಗುವ ಮನ್ನಣೆ ಶಾಶ್ವತ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವಿವಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಕರಿಯಣ್ಣ, ಪಠ್ಯಕ್ಕೆ ಪೂರಕವಾಗಿರುವ ಪಠ್ಯೇತರ ಚಟುವಟಿಕೆಗಳನ್ನು ವಿದ್ಯಾರ್ಥಿಗಳ ಎದೆಯಲ್ಲಿ ತುಂಬುವ ಶಿಕ್ಷಣ ನಮ್ಮದಾಗಿದೆ. ಪಾಶ್ಚಿಮಾತ್ಯ ಸಂಸ್ಕೃತಿಯ ಹೊಡೆತದ ನಡುವೆ ಭಾರತದ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತಿರುವ ಕಲಾ ಕಾಲೇಜು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿದೆ ಎಂದರು.

ಸಾಮಾಜಿಕ ಚಿಂತಕ ಹಾಗೂ ಜನಪರ ಹೋರಾಟಗಾರ ಕೆ.ದೊರೈರಾಜು ಹಾಗೂ ಕೈಗಾರಿಕೋದ್ಯಮಿ ಎಚ್. ಜಿ.ಚಂದ್ರಶೇಖರ್‌ ಅವರಿಗೆ ವಿವಿ ಕಲಾ ಕಾಲೇಜಿನ ವಾರ್ಷಿಕ ‘ಕಲಾಸಿರಿ-2024’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಚಲನಚಿತ್ರ ನಟ ಕುಮಾರ್‌ ಗೋವಿಂದ್ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ವಿವಿ ಕುಲಸಚಿವೆ ನಾಹಿದಾಜಮ್‌ಜಮ್ ವಾರ್ಷಿಕ ಸಂಚಿಕೆ ಬಿಡುಗಡೆಮಾಡಿದರು. ಪರೀಕ್ಷಾಂಗ ಕುಲಸಚಿವ ಪ್ರೊ.ಪ್ರಸನ್ನಕುಮಾರ್.ಕೆ.ಕಲಾಸಿರಿ ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.

ಸೋಲಿಗರ ಬಸವರಾಜು ಮತ್ತು ಸಂಗಡಿಗರಿಂದ ಸೋಲಿಗರ ಪುಷ್ಪಮಾಲೆ ಕಲಾ ತಂಡ-ಕಲಾ ಪ್ರದರ್ಶನ, ಪ್ರದೀಪ್‌ಎಸ್ ಮತ್ತು ಸಂಗಡಿಗರಿಂದ ಜಾನಪದ ಮೇಳ, ತಿಪ್ಪೇಸ್ವಾಮಿ ಮತ್ತು ಸಂಗಡಿಗರಿಂದ ಬೇಡರ ಪಡೆ ನೃತ್ಯ, ನಿಸರ್ಗಗೋವಿಂದರಾಜ್‌ ಅವರಿಂದ ಬಯಲು ಸೀಮೆಯ ಛಾಯಾಚಿತ್ರ ಪ್ರದರ್ಶನ, ದಿಬ್ಬೂರು ಮಂಜಣ್ಣ ಮತ್ತು ಸಂಗಡಿಗರಿಂದ ಡಾ.ರಾಜ್‌ಕುಮಾರ್‌ ಗೀತಗಾಯನ, ವಿದ್ವಾನ್ ನಾಗರಾಜ್.ಕೆ ಅವರಿಂದ ಭರಟನಾಟ್ಯ, ರುದ್ರೇಶ್ ಮತ್ತು ಸಂಗಡಿಗರಿಂದ ವೀರಗಾಸೆ, ಶಶಿಕುಮಾರ್ ಮತ್ತು ಸಂಗಡಿಗರಿಂದ ಕಂಸಾಳೆ ಪ್ರದರ್ಶನ ಹಬ್ಬದ ವಾತಾವರಣ ಸೃಷ್ಟಿಮಾಡಿದವು.

ವಿವಿ ಕಲಾ ಕಾಲೇಜಿನ ಸಾಂಸ್ಕೃತಿಕ ಸಮಿತಿಯ ಸಂಯೋಜಕ ಡಾ.ರವಿ.ಸಿ.ಎಂ, ಕಲಾಸಿರಿ ವಾರ್ಷಿಕೋತ್ಸವದ ಸಮಿತಿಯ ಡಾ.ಗುಂಡೇಗೌಡ, ಡಾ.ಶಿವಣ್ಣ ಬೆಳವಾಡಿ, ಡಾ.ಆರ್.ಸುದೀಪ್‌ಕುಮಾರ್ ಉಪಸ್ಥಿತರಿದ್ದರು.ಕೋಟ್‌ ...

ಯಂತ್ರಕ್ಕೆ ಮನುಷ್ಯತ್ವವನ್ನು ಕೊಡುವ ಶಿಕ್ಷಣ ನಮ್ಮದಾಗಬೇಕು. ಮಾನವನನ್ನು ಯಂತ್ರವಾಗಿ ಮಾಡುವ ಶಿಕ್ಷಣದಲ್ಲಿ ವಿದ್ಯಾರ್ಥಿಗಳ ಭವಿಷ್ಯ ನಾಶವಾಗುತ್ತಿದೆ. ಭಾರತದಲ್ಲಿ ಮಾನವಿಕ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವವರ ಸಂಖ್ಯೆ ಕೇವಲ ಶೇ.5 ರಷ್ಟಿದೆ. ನಮ್ಮ ಶಿಕ್ಷಣ ಎಲ್ಲಿಯವರೆಗೆ ಜ್ಞಾನಮುಖಿ, ಉದ್ಯೋಗಮುಖಿ ಎಂಬುದನ್ನು ತಿಳಿಯಬೇಕು. ಶೈಕ್ಷಣಿಕ ವಿಭಾಗೀಕರಣವನ್ನು ವಿದ್ಯಾರ್ಥಿಗಳಲ್ಲಿ ಕಲಿಸಬೇಕು - ಬರಗೂರು ರಾಮಚಂದ್ರಪ್ಪ, ಸಾಹಿತಿ.