ಪ್ರಸ್ತುತ ಸಾಮಾಜಿಕ ಮಾಧ್ಯಮಗಳು ಚಳವಳಿ, ಹೋರಾಟ ಅಥವಾ ಪ್ರತಿಭಟನೆ ಬಿಂಬಿಸುವಲ್ಲಿ ಪ್ರಬಲವಾದ ಪಾತ್ರ ವಹಿಸಿವೆ.
ಧಾರವಾಡ:
ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಾಗೂ ಚಳವಳಿಗಳ ಸ್ವರೂಪ ಬದಲಾಗುತ್ತಿದೆ ಎಂದು ದೆಹಲಿ ವಿವಿ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಸಂಜೀವಕುಮಾರ ಎಚ್.ಎಂ ಹೇಳಿದರು.ಕರ್ನಾಟಕ ಕಲಾ ಕಾಲೇಜಿನಲ್ಲಿ ಕಾಲೇಜಿ ಸಭಾಂಗಣದಲ್ಲಿ ''''''''ಭಾರತದ ರಾಜಕಾರಣದಲ್ಲಿ ಇತ್ತೀಚಿನ ಬೆಳವಣಿಗೆಗಳು'''''''' ವಿಷಯದ ಕುರಿತು ಆಯೋಜಿಸಿದ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಅವರು, ಪ್ರಸ್ತುತ ಸಾಮಾಜಿಕ ಮಾಧ್ಯಮಗಳು ಚಳವಳಿ, ಹೋರಾಟ ಅಥವಾ ಪ್ರತಿಭಟನೆ ಬಿಂಬಿಸುವಲ್ಲಿ ಪ್ರಬಲವಾದ ಪಾತ್ರ ವಹಿಸಿವೆ. ಮಹಾತ್ಮ ಗಾಂಧೀಜಿ ಅವರು ಅಹಿಂಸಾತ್ಮಕ ಚಳವಳಿ ಮೂಲಕ ಹೋರಾಟ ಪ್ರತಿಪಾದಿಸಿದ್ದರು, ಜಯಪ್ರಕಾಶ್ ನಾರಾಯಣ್ ಅವರು ಜನರಲ್ಲಿ ಅರಿವು, ಜಾಗೃತಿ ಮತ್ತು ಮೌಖಿಕ ಸಂವಹನದ ಮೂಲಕ ಜನರನ್ನು ಚಳವಳಿಗೆ ಸಂಘಟಿಸುತಿದ್ದರು. ಆದರೆ, ಭಗತ್ ಸಿಂಗ್ ಚಳವಳಿ ಬಲಪ್ರಯೋಗದಿಂದ ಕೂಡಿತ್ತು ಎಂದರು.
ದೆಹಲಿಯ ಜಂತರ ಮಂತರನಲ್ಲಿ ಝೆನ್-ಜಿಗಳು ನಡೆಸಿದ ಪ್ರತಿಭಟನೆಯನ್ನು ಇಡೀ ಜಗತ್ತಿಗೆ ಕೊಂಡೊಯ್ಯಲು ತಂತ್ರಜ್ಞಾನ ಮತ್ತು ಸಾಮಾಜಿಕ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರು ಎಂದ ಅವರು, ಗಾಂಧಿ ಚಳವಳಿ ಮಾದರಿ ಜಗತ್ತಿನಲ್ಲಿ ಅತ್ಯಂತ ಜನಪ್ರಿಯ ಮಾದರಿ. ಆದರೆ, ಯುವ ಸಮುದಾಯವು ಪ್ರತಿಭಟನೆ ಚಳವಳಿ ಸ್ವರೂಪ ಬದಲಾಯಿಸಿದರು. ಪ್ರಸ್ತುತ ಸಿಜೆಪಿ ನಡೆಸಿದ ಪ್ರತಿಭಟನೆ ಸಾಮಾಜಿಕ ಮಾಧ್ಯಮ ಪ್ರಭಾವದಿಂದ ಜಗತ್ತನ್ನು ಸೆಳೆಯಿತು ಎಂದು ಹೇಳಿದರು.ಸಂವಿಧಾನ ಭಾರತದ ಒಂದು ಶಕ್ತಿಯಾಗಿದೆ ಎಂದ ಅವರು, ಮೀಸಲಾತಿಯನ್ನು ಯುವಜನತೆಯು ತಪ್ಪಾಗಿ ಅರ್ಥೈಸಿದ್ದಾರೆ. ಮೀಸಲಾತಿ ಕುರಿತು ಆಳವಾಗಿ ಅರಿಯುವುದು ಬಹಳ ಅಗತ್ಯವಿದೆ. ಅನೇಕ ಗೊಂದಲಗಳಿಂದ ಮೀಸಲಾತಿ ಕುರಿತು ಚರ್ಚೆ ಮುನ್ನಲೆಗೆ ಬರುತ್ತಿದೆ. ಇಂದಿಗೂ ಸಮಾಜದಲ್ಲಿ ಸಾಮಾಜಿಕ ಅಸಮಾನತೆ, ಅಸ್ಪೃಶ್ಯತೆ ಜಾರಿಯಲ್ಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಐ.ಸಿ. ಮುಳಗುಂದ, ಕೆನೆಪದರು ಮೀಸಲಾತಿಗೆ ಮಹತ್ವ ನೀಡುವುದು ಅಗತ್ಯವಿದ್ದು, ಅರ್ಹರಿಗೆ ಮೀಸಲಾತಿ ನೀಡುವುದು ಸೂಕ್ತ ಎಂದು ಹೇಳಿದರು.ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಸುರೇಶ ಹುಲ್ಲಣ್ಣವರ ಪ್ರಾಸ್ತಾವಿಕ ಮಾತನಾಡಿದರು. ಡಾ. ಎಂ.ಬಿ. ದಳಪತಿ, ಡಾ. ಎಸ್.ಎಸ್. ಶ್ರೀಗಿರಿ, ಡಾ. ವಿ.ಪಿ. ಸುಣಗಾರ, ಡಾ. ಹನುಮಂತ ಬಂಟನೂರ, ಡಾ. ಎಸ್.ಜಿ. ಜಾಧವ್, ಡಾ. ಎಸ್.ಆರ್. ಗಣಿ, ಡಾ. ಝಾಕೀರ ಗುಳಗುಂಡಿ, ಡಾ. ಸಿ.ಬಿ. ಐನಳ್ಳಿ, ಡಾ. ಸಂತೋಷ ಧರನಾಯಕ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.