ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಪ್ರಸ್ತುತ ಕಾಲಘಟ್ಟದಲ್ಲಿ ಸುಶಿಕ್ಷಿತರ ಸಂಖ್ಯೆ ಹೆಚ್ಚಾಗಿದ್ದು ಸುಸಂಸ್ಕೃತರ ಸಂಖ್ಯೆ ಕ್ಷೀಣವಾಗುತ್ತಿರುವುದು ವಿಷಾದನೀಯ ಎಂದು ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಹೇಳಿದರು.ಅವರು ಬುಧವಾರ ಕಂಬಿಬಾಣೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆರಂಭಗೊಂಡ ಎಲ್ಕೆಜಿ ಮತ್ತು ಯುಕೆಜಿ ಆಂಗ್ಲ ಮಾಧ್ಯಮ ತರಗತಿಗಳನ್ನು ಉದ್ಘಾಟಿಸಿ ಮಾತನಾಡಿದರು.ಪ್ರತಿಯೊಬ್ಬರಿಗೂ ನನ್ನ ಶಾಲೆ ನಮ್ಮೂರ ಶಾಲೆ ಎಂಬ ಅಭಿಮಾನವಿರಬೇಕು. ಹಳೆಯ ವಿದ್ಯಾರ್ಥಿಗಳ ಸಂಘ ಅತ್ಯಂತ ಸಂಘಟಿತವಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನಮ್ಮ ಬದುಕಿನ ಭಾಗ ಮತ್ತು ಜೀವನಕ್ಕೆ ಅನಿವಾರ್ಯ ಎಂದು ಅವರು ಹೇಳಿದರು. ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ದುರಸ್ತಿ ಮತ್ತು ಇತರ ಬೇಡಿಕೆಗಳನ್ನು ಶಾಸಕರ ಗಮನಕ್ಕೆ ತಂದು ಆದ್ಯತೆಯ ಮೇರೆಗೆ ಪರಿಹರಿಸಲು ಕ್ರಮ ಕೈಗೊಳ್ಳಲು ಭರವಸೆ ನೀಡಿದರು. ಕಂಬಿಬಾಣೆ ರಾಮ ಸೇವಾ ಸಮಿತಿಯ ಅಧ್ಯಕ್ಷ ಡಾ.ಶಶಿಕಾಂತರೈ ಮಾತನಾಡಿ, ಮಕ್ಕಳು ಅತ್ಯುತ್ತಮ ಶಿಕ್ಷಣ ಪಡೆದು ದೇಶದ ಆಸ್ತಿ ಎನ್ನಿಸಬೇಕಾದರೆ ಶಿಕ್ಷಕರ ಪಾತ್ರ ಅತೀಮುಖ್ಯ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಆಂಗ್ಲ ಭಾಷಾ ಮಾಧ್ಯಮ ಅನಿವಾರ್ಯ ಎಂದು ಹೇಳಿದರು.ಎಲ್ಕೆಜಿ ಮತ್ತು ಯುಕೆಜಿ ಪ್ರಾರಂಭಕ್ಕೆ ಶ್ರಮಹಾಕಿದ ಕಾಫಿಬೆಳೆಗಾರರು ಸಮಾಜ ಸೇವಕರಾದ ಟಿ.ಕೆ.ಸಾಯಿಕುಮಾರ್ ಮಾತನಾಡಿ , ನಮ್ಮ ತಂಡದ 3 ವರ್ಷದ ಕನಸು ಈಡೇರಿದೆ. 10 ಮಕ್ಕಳು ಎಲ್ಕೆಜಿ ತರಗತಿಗೆ ಪ್ರವೇಶ ಪಡೆದಿದ್ದಾರೆ. ಸರ್ಕಾರದ ಅನುದಾನ ಇತರೆ ವ್ಯವಸ್ಥೆಗಳನ್ನು ಪಡೆಯಲು 20 ಮಕ್ಕಳು ದಾಖಲಾಗಿರಬೇಕು. ಈ ಹಿನ್ನಲೆಯಲ್ಲಿ ಪ್ರಸ್ತುತ ಎಲ್ಕೆಜಿಗೆ ನಮ್ಮ ಸಮಾನಮನಸ್ಕರ ಎಲ್ಲಾ ಖರ್ಚುವೆಚ್ಚಗಳನ್ನು ನಿಭಾಯಿಸಿಕೊಂಡು ಹೋಗಬೇಕಾಗಿದೆ. ಶಿಕ್ಷಣಾಭಿಮಾನಿಗಳು ದಾನಿಗಳು ಹಳೆಯ ವಿದ್ಯಾರ್ಥಿಗಳು ನಮ್ಮ ಶಾಲೆಯನ್ನು ಹೆಮ್ಮರವಾಗಿ ಬೆಳೆಸಲು ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.ಶಾಲಾಭಿವೃದ್ಧಿ ಸಮಿತಿಯ ಕಬ್ಬಿರ್ ಅಧ್ಯಕ್ಷತೆ ವಹಿಸಿದ್ದರು. ಎಲ್ಕೆಜಿ ಯುಕೆಜಿ ನಿರ್ವಹಣಾ ಗೌರವಾಧ್ಯಕ್ಷ ಚಂದ್ರಹಾಸ ರೈ, ಮಾಜಿ ತಾ.ಪಂ.ಸದಸ್ಯ ಕೆ.ಎಸ್.ಮಂಜುನಾಥ್, ದಾನಿಗಳಾದ ಟಿ.ಆರ್.ಅನಿಲ್, ಸುಭಾಷ್ ಯುವಕ ಸಂಘದ ಅಧ್ಯಕ್ಷ ಮಣಿ, ಕಂಬಿಬಾಣೆ ಮಸೀದಿಯ ಅಧ್ಯಕ್ಷ ಮೊಯಿದ್ದೀನ್, ಕಂಬಿಬಾಣೆ ಗ್ರಾ.ಪಂ.ಮಾಜಿ ಅಧ್ಯಕ್ಷ ಕೆ.ಬಿ.ಕೃಷ್ಣ, 7ನೇ ಹೊಸಕೋಟೆ ಗ್ರಾ.ಪಂ.ಮಾಜಿ ಸದಸ್ಯ ಅಬ್ದುಲ್ ರಜಾಕ್, ಕಂಬಿಬಾಣೆ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಶಂಕರನಾರಾಯಣ್, ಶ್ರೀರಾಮ ಚಾಮುಂಡೇಶ್ವರಿ ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಗಣೇಶ್, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯ ಜಯಂತ್, ಮುನಿರ್, ಕೊಡಗು ಪತ್ರಕರ್ತರ ಸಂಘದ ಕುಶಾಲನಗರ ತಾಲೂಕು ಘಟಕದ ಅಧ್ಯಕ್ಷ ಬಿ.ಸಿ.ದಿನೇಶ್, ನಿರ್ವಹಣಾ ಸಮಿತಿಯ ಕಾರ್ಯದರ್ಶಿ ಮೊಯ್ದು, ಶಾಲಾ ಮುಖ್ಯಶಿಕ್ಷಕಿ ನಯನ ವೇದಿಕೆಯಲ್ಲಿದ್ದರು. ಪ್ರೀತಾ, ಪ್ರತಿಮ ಸೇರಿದಂತೆ ಸಿಬ್ಬಂದಿ, ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು. ಗಣ್ಯರು ಆಲದ ಸಸಿಯನ್ನು ನೆಟ್ಟರು.