ಕನ್ನಡಪ್ರಭ ವಾರ್ತೆ ಬೇಲೂರು

ದೃಶ್ಯ ಮಾಧ್ಯಮಗಳು ವೈಭವೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿವೆ. ಅತ್ಯಾಚಾರದ ಸುದ್ದಿಗಳ ಪ್ರಚೋದನೆಗೆ ಮಹತ್ವ ಕೊಡುತ್ತಿವೆ. ಇದು ಅತ್ಯಂತ ಅಘಾತಕಾರಿ ಬೆಳವಣಿಗೆ ಎಂದು ಕಾಂಗ್ರೆಸ್‌ ಮುಖಂಡ ಗ್ರಾನೈಟ್‌ ರಾಜಶೇಖರ್‌ ಆತಂಕ ವ್ಯಕ್ತಪಡಿಸಿದರು.

ಪಟ್ಟಣದ ಆರ್‌ ವಿ ಕನ್ವೆನ್ಷನ್ ಹಾಲ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಾಧ್ಯಮ ದಿನಾಚರಣೆಯಲ್ಲಿ ಮಾತನಾಡಿ, ಸತ್ಯ ಹುಡುಕುವ ಪತ್ರಕರ್ತರ ಸಂಖ್ಯೆ ಕ್ಷೀಣವಾಗುತ್ತಿದೆ. ತಾಲೂಕು ಪತ್ರಕರ್ತರ ಸಂಘದಲ್ಲಿ ₹10 ಲಕ್ಷ ಹಣವಿದೆ ಎಂದು ಅಧ್ಯಕ್ಷ ಬಿ.ಬಿ ಶಿವರಾಜ್ ಹೇಳಿದ್ದಾರೆ. ಆದರೆ ಅದು ಯಾವುದಕ್ಕೂ ಸಾಲುವುದಿಲ್ಲ, ₹25 ಲಕ್ಷ ದಾಟಬೇಕು ಎಂಬುದು ನಮ್ಮ ಆಸೆ. ಪತ್ರಕರ್ತರ ಆರೋಗ್ಯ ಏರುಪೇರಾದಾಗ ಆ ಹಣವನ್ನು ಬಳಸಬೇಕು. ತಾವು ₹1 ಲಕ್ಷದ 11 ಸಾವಿರ ದೇಣಿಗೆ ನೀಡುವುದಾಗಿ ಹೇಳಿದರು. ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಮದನ್ ಗೌಡ ಮಾತನಾಡಿ, ಡಿಜಿಟಲ್ ಕ್ರಾಂತಿ ಮತ್ತು ಕೃತಕ ಬುದ್ಧಿಮತ್ತೆಯ ( ಎ.ಐ ) ಈ ಯುಗದಲ್ಲಿ ಪತ್ರಿಕೋದ್ಯಮವು ತೀವ್ರ ಬದಲಾವಣೆ ಹಾಗೂ ಸವಾಲುಗಳನ್ನು ಎದುರಿಸುತ್ತಿದೆ. ಸುಳ್ಳು ಸುದ್ದಿಗಳ ಹಾವಳಿ, ವೇಗವಾಗಿ ಸುದ್ದಿ ತಲುಪಿಸುವ ಧಾವಂತ , ತತ್ವವಾದ ವಸ್ತುನಿಷ್ಠತೆ ಮತ್ತು ವಿಶ್ವಾಸಾರ್ಹತೆ ಮರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಪತ್ರಕರ್ತನೂ ಆತ್ಮಾವಲೋಕನ ಮಾಡಿ ಸುದ್ದಿ ಸಿದ್ಧ ಪಡಿಸುವುದು ಅತ್ಯಗತ್ಯವಾಗಿದೆ ಎಂದರು.

ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆಂಚೇಗೌಡ ಮಾತನಾಡಿ, ಯಾವುದೇ ವ್ಯಕ್ತಿ, ಪಕ್ಷ ಅಥವಾ ವಿಚಾರದ ಪರ ವಾಲದೆ, ಘಟನೆಯನ್ನು ಇದ್ದದ್ದು ಇದ್ದಂತೆ ಜನರಿಗೆ ತಲುಪಿಸಬೇಕು. ಸಮಾಜದ ಶಾಂತಿ, ಸೌಹಾರ್ದತೆ ಮತ್ತು ಪ್ರಗತಿಗೆ ಪೂರಕವಾಗುವಂತಹ ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಜಾತಿ , ಜನಾಂಗ ಎಂದು ಪಕ್ಷಪಾತ ಮಾಡದೇ ಸಾರ್ವಜನಿಕ ಆರೋಗ್ಯ, ಶಿಕ್ಷಣ, ಪರಿಸರ, ರೈತರ ಸಮಸ್ಯೆಗಳು ಹಾಗೂ ಮೂಲಭೂತ ಸೌಕರ್ಯಗಳ ಕುರಿತು ಧ್ವನಿ ಎತ್ತುವ ಸುದ್ದಿಗಳ ಬಗ್ಗೆ ಪತ್ರಕರ್ತರು ಗಮನ ಹರಿಸಬೇಕು ಎಂದು ಹೇಳಿದರು.

ಸಂಪಾದಕ ರವಿ ನಾಕಲಗೂಡು ಮಾತನಾಡಿ, ರಾಜ್ಯ ಸೇರಿದಂತೆ ಪತ್ರಕರ್ತರ ಸಂಘ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಗಟ್ಟಿ ಮತ್ತು ಬಲಿಷ್ಠ ವಾಗಿ ಬೆಳೆಯುತ್ತಿದೆ. ನಮ್ಮಲ್ಲಿರುವ ಸಣ್ಣ ಪುಟ್ಟ ಲೋಪದೋಷಗಳನ್ನು ತಿದ್ದಿಕೊಂಡು ಬೆಳೆಯಬೇಕು. ಪತ್ರಕರ್ತರು ಬರವಣಿಗೆ ಮೂಲಕ ನಿರಂತರವಾದ ಸೇವೆಯನ್ನು ಸಮಾಜಕ್ಕೆ ನೀಡಬೇಕು ಎಂದು ಹೇಳಿದರು.


ಈ ವೇಳೆ ಸಾಧಕರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು. ಶಾಸಕ ಎಚ್. ಕೆ ಸುರೇಶ್, ಮಾಜಿ ಸಚಿವ ಬಿ. ಶಿವರಾಂ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಶಿವರಾಜ್, ಶ್ರೀನಿಧಿ, ತಾಲೂಕು ಪತ್ರಕರ್ತರ ಸಂಘದ ದೀಪು, ಸಂತೋಷ, ಮಹೇಶ್‌, ಕಾರ್ಯದರ್ಶಿ ಬಿ.ಎಲ್. ಲಕ್ಷ್ಮಣ, ಖಜಾಂಚಿ ಲೋಹಿತ್, ಪುರಸಭೆ ಅಧ್ಯಕ್ಷ ಅಕ್ರಂ ಶರೀಫ್‌, ತಹಸೀಲ್ದಾರ್‌ ಶ್ರೀಧರ ಕಂಕಣವಾಡಿ, ಪುರಸಭೆ ಮುಖ್ಯಾಧಿಕಾರಿ ಬಸವರಾಜ ಶಿಗ್ಗಾಂವಿ, ಪಿಎಸ್ಐ ರೇವಣ್ಣ, ಆರ್ವಿ ಇತರರು ಇದ್ದರು.