ಸರ್ಕಾರಿ ಯೋಜನೆಗಳ ಉದ್ದೇಶ ಜೀವನಮಟ್ಟ ಸುಧಾರಣೆ: ವಿಜಯೇಂದ್ರ

| Published : Jan 15 2024, 01:45 AM IST

ಸರ್ಕಾರಿ ಯೋಜನೆಗಳ ಉದ್ದೇಶ ಜೀವನಮಟ್ಟ ಸುಧಾರಣೆ: ವಿಜಯೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

2047 ಆಗಸ್ಟ್ 15ಕ್ಕೆ ಭಾರತಕ್ಕೆ ಸ್ವಾತಂತ್ರ್ಯ ದೊರೆತು 100 ವರ್ಷವಾಗಲಿದೆ. ಈ ಸಂಭ್ರಮಾಚರಣೆ ಸಂದರ್ಭ ಭಾರತ ಸಮಗ್ರ ಅಭಿವೃದ್ಧಿ ಹೊಂದಿದ ದೇಶ ಆಗಿರಬೇಕು ಎಂಬುದು ಪ್ರಧಾನಿ ಕನಸು. ಕೇಂದ್ರ ಸರ್ಕಾರದ ಯೋಜನೆಗಳು ದೇಶದ ಕಟ್ಟಕಡೆಯ ವ್ಯಕ್ತಿಗೂ ಜಾತ್ಯತೀತ, ಪಕ್ಷಾತೀತ ಹಾಗೂ ಧರ್ಮಾತೀತವಾಗಿ ತಲುಪಬೇಕು ಎಂಬುದು ಅವರ ಕಾಳಜಿಯಾಗಿದೆ ಎಂದು ಶಿಕಾರಿಪುರ ಶಾಸಕ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ಶಿಕಾರಿಪುರ

ಕೇಂದ್ರ ಸರ್ಕಾರದ ಯೋಜನೆಗಳು ದೇಶದ ಕಟ್ಟಕಡೆಯ ವ್ಯಕ್ತಿಗೂ ಜಾತ್ಯತೀತ, ಪಕ್ಷಾತೀತ ಹಾಗೂ ಧರ್ಮಾತೀತವಾಗಿ ತಲುಪಬೇಕು ಎಂಬುದು ಮೋದಿಜಿ ಅವರ ಕನಸಾಗಿದೆ ಎಂದು ಶಾಸಕ ಬಿ.ವೈ. ವಿಜಯೇಂದ್ರ ಹೇಳಿದರು.

ಶನಿವಾರ ತಾಲೂಕಿನ ಹೊಸಗೊದ್ಧನಕೊಪ್ಪ ಗ್ರಾಮ ಪಂಚಾಯಿತಿ ಆವರಣದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, 2047 ಆಗಸ್ಟ್ 15ಕ್ಕೆ ಭಾರತಕ್ಕೆ ಸ್ವಾತಂತ್ರ್ಯ ದೊರೆತು 100 ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ದೇಶವು ಸಮಗ್ರ ಅಭಿವೃದ್ಧಿ ಹೊಂದಿದ ದೇಶವಾಗಿರಬೇಕು ಎಂಬುದು ಪ್ರಧಾನಿ ಕನಸಾಗಿದೆ ಎಂದರು.

ದೇಶದ ಬೆನ್ನೆಲುಬಾಗಿರುವ ರೈತರ ತಲಾ ಆದಾಯ ದ್ವಿಗುಣ ಆಗಬೇಕು, ಶ್ರಮಿಕ ವರ್ಗದ ಆದಾಯ ಹೆಚ್ಚಾಗಬೇಕು, ಜೀವನಮಟ್ಟ ಸುಧಾರಿಸಬೇಕು ಎಂಬ ಸದುದ್ದೇಶದಿಂದ ವಿಶ್ವಕರ್ಮ ಸೇರಿದಂತೆ ಇನ್ನಿತರೆ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ₹500 ತರಬೇತಿ ಭತ್ಯೆ ನೀಡಿ, ₹15 ಸಾವಿರದ ಕಿಟ್‌ ನೀಡಿ ₹1 ಲಕ್ಷದ ವರೆಗೂ ಸಾಲವನ್ನು ಗ್ಯಾರಂಟಿರಹಿತವಾಗಿ ನೀಡಲಾಗುವುದು. ಇದರ ಪ್ರಯೋಜನವನ್ನು ಎಲ್ಲ ಅರ್ಹ ಫಲಾನುಭವಿಗಳು ಪಡೆದುಕೊಳ್ಳಬೇಕು ಎಂದು ಹೇಳಿದರು.

ಹಲವು ಶತಮಾನದ ಕನಸಾಗಿದ್ದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆಗೆ ಕ್ಷಣಗಣನೆ ಆರಂಭವಾಗಿದೆ. ದೇಶ- ವಿದೇಶದ ಕೋಟ್ಯಂತರ ಶ್ರೀರಾಮನ ಭಕ್ತರ ಜನ್ಮಸ್ಥಳದಲ್ಲಿಯೇ ಮಂದಿರ ನಿರ್ಮಾಣದ ಕನಸು ನನಸಾಗುತ್ತಿದೆ. ಇದೇ ಜ.22ರಂದು ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಅಂದು ಸಂಜೆ 5 ದೀಪಗಳನ್ನು ಪ್ರತಿ ಮನೆಯಲ್ಲಿ ಹಚ್ಚುವ ಮೂಲಕ ಪ್ರಭು ಶ್ರೀ ರಾಮಚಂದ್ರನ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕು ಎಂದು ಕೋರಿದರು.

ವೇದಿಕೆಯಲ್ಲಿ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕೆ.ಎಸ್ ಗುರುಮೂರ್ತಿ, ಗ್ರಾಪಂ ಅಧ್ಯಕ್ಷೆ ರೇಖಾ ಡಿ. ಉಪಾಧ್ಯಕ್ಷ ದಿನೇಶ್, ಪಂಚಾಯಿತಿಯ ಆರ್ಥಿಕ ಸಮಾಲೋಚಕ ಗುಡ್ಡಯ್ಯ, ಗ್ರಾಪಂ ಸದಸ್ಯರಾದ ಕೆ.ಎಸ್. ರೇವಣಸಿದ್ದಪ್ಪ, ಜೆ.ಯು. ಮಂಜುನಾಥ್, ಗೀತಾ ಎಚ್.ಬಸಮ್ಮ, ನೀಲಮ್ಮ, ಗೀತಮ್ಮ, ಪಿಡಿಒ ಶರಣಪ್ಪ ಮತ್ತಿತರರು ಉಪಸ್ಥಿತರಿದ್ದರು.

- - -

ಕೋಟ್‌ ಕೋವಿಡ್ ಸಮಯದಲ್ಲಿ ಆರಂಭಿಸಿದ ಪ್ರಧಾನಮಂತ್ರಿಗಳ ಗರೀಬ್ ಕಲ್ಯಾಣ್ ಯೋಜನೆಯಡಿ ಬಡವರಿಗೆ ಅಕ್ಕಿ ಕೊಡುವ ಯೋಜನೆಯು ಇಂದಿಗೂ ಇದೆ ಮುಂದೆಯೂ ಇರುತ್ತದೆ ಇದು ಬಡವರಿಗಾಗಿ ನರೇಂದ್ರ ಮೋದಿಯವರು ಜಾರಿಗೆ ತಂದ ಅತ್ಯುತ್ತಮ ಯೋಜನೆಯಾಗಿದೆ

- ಬಿ.ವೈ.ವಿಜಯೇಂದ್ರ, ಶಾಸಕ, ಶಿಕಾರಿಪುರ ಕ್ಷೇತ್ರ

- - - -13ಕೆಎಸ್‌ಕೆಪಿ2.ಜೆಪಿಜಿ:

ಶಿಕಾರಿಪುರದ ಹೊಸಗೊದ್ದನಕೊಪ್ಪದಲ್ಲಿ ಶನಿವಾರ ಶಾಸಕ ಬಿ.ವೈ. ವಿಜಯೇಂದ್ರ ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿದರು.