ಸಾರಾಂಶ
ಶಿಗ್ಗಾಂವಿ: ಜಾನಪದ ಕ್ಷೇತ್ರಕ್ಕೆ ಹೊಸ ಆಲೋಚನೆ ತಂದ ಕವಿ, ಇನ್ನೂ ಹಲವಾರು ಕೃತಿಗಳನ್ನು ರಚಿಸಬೇಕಾಗಿದ್ದ ಸಾಹಿತಿಯ ಅಗಲಿಕೆ ಬಹಳಷ್ಟು ನೋವಿನ ಸಂಗತಿಯಾಗಿದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಎಂ. ಭಾಸ್ಕರ್ ಹೇಳಿದರು.ತಾಲೂಕಿನ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಲ್ಲಿಗೆ ದಂಡೆ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾದ ಸಾಹಿತಿ, ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರು ಹಾಗೂ ಪ್ರಸ್ತುತ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿದ್ದ ಡಾ.ಮೊಗಳ್ಳಿ ಗಣೇಶ ಅವರ ಸಂತಾಪ ಸೂಚಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಡಾ.ಮೊಗಳ್ಳಿ ಗಣೇಶ ಅವರ ಕವಿ ಮನಸ್ಸು ಕಥಾ ಲೋಕಕ್ಕೆ ಪ್ರವೇಶ ಮಾಡಿತ್ತು. ಕಥಾ ಲೋಕದಿಂದ ಕಾದಂಬರಿ ಲೋಕಕ್ಕೆ ಪ್ರವೇಶ ಮಾಡಿತ್ತು, ಕನ್ನಡದ ಶ್ರೇಷ್ಠ ಕಥೆಗಾರ ಶ್ರೇಷ್ಠ ಕಾದಂಬರಿಕಾರ ಗದ್ಯ ಪದ್ಯವನ್ನು ಮೈಗೂಡಿಸಿಕೊಂಡವರಾಗಿದ್ದರು. ಪ್ರಸ್ತುತ ಅವರ ಬರಹಗಳ ಓದು ನಮಗೆಲ್ಲ ಮಾದರಿಯಾಗಲಿವೆ ಎಂದರು.ಕುಲಸಚಿವರಾದ ಪ್ರೊ.ಸಿ.ಟಿ. ಗುರುಪ್ರಸಾದ್ ಅವರು ಮಾತನಾಡಿ, ಓದುವ, ಬರೆಯುವ ಲೋಕವನ್ನು ಸೃಷ್ಟಿಸಿದ್ದ ಬದುಕಿನ ಅನುಭವಗಳನ್ನು ಬರವಣಿಗೆಯ ಮೂಲಕ ಅನಾವರಣಗೊಳಿಸುತ್ತಿದ್ದ, ನೇರ ನಿಷ್ಠುರರಾಗಿದ್ದ ಸೃಜನಶೀಲ ಸಾಹಿತಿ ಜಾನಪದ ವಿದ್ವಾಂಸ ಪ್ರೊ.ಮೊಗಳ್ಳಿ ಗಣೇಶ ಅವರು ನಮ್ಮನ್ನೆಲ್ಲ ಅಗಲಿರುವುದು ತುಂಬಾ ನೋವಿನ ಸಂಗತಿಯಾಗಿದೆ. ಅವರು ನಮ್ಮಿಂದ ದೂರವಾದರೂ ಅವರ ಚಿಂತನೆಗಳು, ಬರವಣಿಗೆಗಳು ನಮ್ಮಲ್ಲಿ ಶಾಶ್ವತವಾಗಿ ಉಳಿದು ಅವರ ಹೆಸರನ್ನು ನೆನಪು ಮೂಡಿಸುತ್ತದೆ. ತುಂಬಾ ಆತ್ಮೀಯತೆಯಿಂದ ಕಳೆದ ೨೫ ವರ್ಷ ಗಳಿಂದ ನನ್ನೊಂದಿಗೆ ಜೊತೆಗೂಡಿ ಕಷ್ಟ ಸುಖದಲ್ಲಿ ಭಾಗಿಯಾಗಿ ಶೈಕ್ಷಣಿಕವಾಗಿ ಕೆಲಸ ಮಾಡಿದ ಗೆಳೆಯನನ್ನು ಕಳೆದುಕೊಂಡಿದ್ದು ತುಂಬಾ ನೋವು ಹಾಗೂ ಬೇಸರವಾಗಿದೆ ಎಂದರು.ಹಿರಿಯ ಸಂಶೋಧನಾಧಿಕಾರಿ ಡಾ.ಕೆ. ಪ್ರೇಮಕುಮಾರ್ ಅವರು ಮಾತನಾಡಿ, ಪ್ರೊ.ಮೊಗಳ್ಳಿ ಗಣೇಶ ಅವರು ಸಾಹಿತ್ಯದಲ್ಲಿ ಕೃಷಿ ಮಾಡಿದವರು. ಸಾಹಿತ್ಯದಲ್ಲಿ ಇನ್ನಷ್ಟು ತೊಡಗಿಸಿಕೊಳ್ಳಲು ಅವಕಾಶವಿತ್ತು, ಆರೋಗ್ಯ ಸಮಸ್ಯೆಯಿಂದ ಅಕಾಲಿಕ ಮರಣಹೊಂದಿರುವುದು ಸಾಹಿತ್ಯ ಕ್ಷೇತ್ರಕ್ಕೆ ನಷ್ಟ್ಟವಾಗಿದೆ. ಬರವಣಿಗೆಯೇ ಅವರ ಸಾಧನೆಯಾಗಿತ್ತು. ಓದುಗರನ್ನ ಸೆಳೆಯುವ ಅವರ ಸಾಹಿತ್ಯ ಕ್ರಿಯಾಶೀಲವಾಗಿತ್ತು. ಸಾಹಿತ್ಯ ಕ್ಷೇತ್ರಕ್ಕೆ ಅವರ ಕೊಡುಗೆ ದೊಡ್ಡದಿದೆ ಎಂದರು.ಸಹಾಯಕ ಪ್ರಾಧ್ಯಾಪಕರಾದ ಡಾ. ಚಂದ್ರಪ್ಪ ಸೊಬಟಿ ಅವರು ಮಾತನಾಡಿ, ಪಾಠ ಮಾಡುವಾಗ ವಿದ್ಯಾರ್ಥಿಗಳನ್ನು ಬೇರೆ ಲೋಕಕ್ಕೆ ಕೊಂಡೊಯುತ್ತಿದ್ದ ಮೇಷ್ಟ್ರನ್ನು ಕಳೆದುಕೊಂಡಿದ್ದು ದುಃಖದ ಸಂಗತಿಯಾಗಿದೆ ಎಂದರು.ಈ ಸಂದರ್ಭದಲ್ಲಿ ಬೋಧಕ ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು ಪಾಲ್ಗೊಂಡಿದ್ದರು.