ಶಿಸ್ತು, ಸ್ವ- ನಿಯಂತ್ರಣವಿದ್ದರೆ ಯಶಸ್ಸಿನ ಹಾದಿ ಸುಲಭ: ಡಾ.ಸತೀಶ್ ಎಂ. ಭಾವನ್ಕರ್

| Published : Nov 14 2025, 01:15 AM IST

ಶಿಸ್ತು, ಸ್ವ- ನಿಯಂತ್ರಣವಿದ್ದರೆ ಯಶಸ್ಸಿನ ಹಾದಿ ಸುಲಭ: ಡಾ.ಸತೀಶ್ ಎಂ. ಭಾವನ್ಕರ್
Share this Article
  • FB
  • TW
  • Linkdin
  • Email

ಸಾರಾಂಶ

ಸಂಸ್ಥೆಯಲ್ಲಿರುವ ಆಧುನಿಕ ಮೂಲ ಸೌಕರ್ಯ, ತರಬೇತಿ ಕೋರ್ಸ್‌ಗಳು ಮತ್ತು ಇಂಕ್ಯೂಬೇಶನ್ ಲ್ಯಾಬ್‌ಗಳ ಕುರಿತು ತಿಳಿಸಿ, ಇಂದಿನ ತಂತ್ರಜ್ಞಾನಾಧಾರಿತ ಶಿಕ್ಷಣದ ಅಗತ್ಯತೆಗಳನ್ನು ಪೂರೈಸಲು ಸಂಸ್ಥೆ ನಿರಂತರವಾಗಿ ಮುಂದುವರಿಯುತ್ತಿದೆ .

ಕನ್ನಡಪ್ರಭ ವಾರ್ತೆ ತಿಪಟೂರು

ಶಿಕ್ಷಣ ಸಂಸ್ಥೆಗಳು ಪ್ರೇರಣೆ ಹಾಗೂ ಮಾರ್ಗದರ್ಶನ ನೀಡಬಹುದು. ಆದರೆ ಶಿಸ್ತು ಮತ್ತು ಸ್ವ- ನಿಯಂತ್ರಣವನ್ನು ವಿದ್ಯಾರ್ಥಿಗಳು ಸ್ವತಃ ಬೆಳೆಸಿಕೊಂಡರೆ ಮಾತ್ರ ಯಶಸ್ಸಿನ ಹಾದಿ ಸುಲಭವಾಗಲಿದೆ ಎಂದು ತುಮಕೂರು ಇನೋವೇಷನ್, ಇಂಕ್ಯೂಬೇಶನ್ ಹಾಗೂ ಎಂಟರ್ ಫ್ರನರ್ ಶಿಪ್ ಕೌನ್ಸಿಲ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸತೀಶ್ ಎಂ.ಭಾವನ್ಕರ್ ತಿಳಿಸಿದರು.

ನಗರದ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎಂಬಿಎ ವಿಭಾಗದ ವತಿಯಿಂದ 2025- 27ನೇ ಸಾಲಿನ ಪ್ರಥಮ ವರ್ಷದ ಎಂಬಿಎ ವಿದ್ಯಾರ್ಥಿಗಳಿಗೆ ನಡೆದ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇದು ತಾಂತ್ರಿಕ ಯುಗವಾಗಿದ್ದು, ವಿದ್ಯಾರ್ಥಿಗಳಲ್ಲಿ ಸ್ವ- ಪ್ರಯತ್ನಶೀಲತೆ ಇದ್ದರೆ ಮಾತ್ರ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು. ನಿನ್ನ ಏಳ್ಗೆಯ ಶಿಲ್ಪಿ ನೀನೆ ಎಂದುಕೊಂಡು ನಿಮ್ಮನ್ನು ನೀವು ಅರ್ಥಮಾಡಿಕೊಂಡು ಸರಿಯಾದ ದಾರಿಯಲ್ಲಿ ಸಾಗಿದರೆ ಬದುಕು ಹಸನಾಗಲಿದೆ. ಪ್ರಜ್ಞಾವಂತಿಕೆಯ ಶಿಕ್ಷಣ ಪಡೆದು, ಪ್ರಾಮಾಣಿಕತೆಯಿಂದ ಬದುಕಬೇಕು. ತಂದೆ- ತಾಯಿಗಳ ಕಷ್ಟ ಅರ್ಥಮಾಡಿಕೊಂಡು ಸನ್ಮಾರ್ಗದಲ್ಲಿ ನಡೆದರೆ ಮುಂದಿನ ದಿನಗಳಲ್ಲಿ ಯೋಗ್ಯವಾದ ಕಾಲ ಬರುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಾಲೇಜಿನಲ್ಲಿರುವ ಸೌಲಭ್ಯಗಳನ್ನು ಬಳಸಿಕೊಂಡು ನಿರ್ದಿಷ್ಟ ದಾರಿಯಲ್ಲಿ ಸಾಗಿ, ಸ್ವಾಭಿಮಾನಿ ಮತ್ತು ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಬೇಕೆಂದರು.

ಕಲ್ಪತರು ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾದ ಎಂ.ಆರ್.ಸಂಗಮೇಶ್ ಹಾಗೂ ಎಚ್.ಜಿ.ಸುಧಾಕರ್ ಮಾತನಾಡಿ, ನಮ್ಮ ಕಾಲೇಜಿನ ಎಂ.ಬಿ.ಎ. ವಿಭಾಗವು ಅತ್ಯುತ್ತಮ ವಿಭಾಗಗಳಲ್ಲಿ ಒಂದಾಗಿದ್ದು, ಶೈಕ್ಷಣಿಕ ಸಾಧನೆ, ತರಬೇತಿ ಕಾರ್ಯಕ್ರಮಗಳು ಹಾಗೂ ವ್ಯಕ್ತಿತ್ವ ವಿಕಸನ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿದೆ. ವಿದ್ಯಾರ್ಥಿಗಳು ಸಂಸ್ಥೆಯ ಆಧುನಿಕ ಸೌಲಭ್ಯಗಳು, ತರಬೇತಿ ಹಾಗೂ ಉದ್ಯಮಶೀಲತಾ ಅವಕಾಶಗಳನ್ನು ಪೂರ್ಣವಾಗಿ ಉಪಯೋಗಿಸಿಕೊಳ್ಳಬೇಕು. ಈ ಕಾರ್ಯಕ್ರಮ ನೂತನ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವ ಜೊತೆಗೆ ನಮ್ಮ ಸಂಸ್ಥೆಯ ಶ್ರೇಷ್ಠ ಪರಂಪರೆಯೊಂದಿಗೆ ಅವರ ಗುರುತಿನ ಭಾಗವಾಗುವ ಅವಕಾಶವನ್ನು ಒದಗಿಸಿಕೊಡಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಪಿ.ಕೆ.ತಿಪ್ಪೇರುದ್ರಪ್ಪ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕೋರಿ, ನಮ್ಮ ಕಾಲೇಜನ್ನು ಸ್ನಾತಕೋತ್ತರ ಅಧ್ಯಯನಕ್ಕಾಗಿ ಆಯ್ಕೆ ಮಾಡಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿ, ನಮ್ಮ ಸಂಸ್ಥೆ ಗುಣಮಟ್ಟದ ಶಿಕ್ಷಣ ಹಾಗೂ ಮಾನವೀಯ ಮೌಲ್ಯಗಳಿಗೆ ಸಮನ್ವಯ ಸಾಧಿಸುತ್ತಿದೆ. ನಿಮ್ಮೆಲ್ಲರ ಯಶಸ್ಸೇ ನಮ್ಮ ಸಂಸ್ಥೆಯ ಸಾಧನೆ. ನೂತನ ವಿದ್ಯಾರ್ಥಿಗಳಿಗೆ ಇದು ಹೊಸ ಹಾದಿಯ ಮೊದಲ ಹೆಜ್ಜೆಯಾಗಿದ್ದು, ಸಂಸ್ಥೆ ಅವರಿಗೆ ಶೈಕ್ಷಣಿಕ ಮತ್ತು ಉದ್ಯಮಶೀಲ ಸಾಧನೆಯ ಹೊಸ ಗುರಿಗಳನ್ನು ತಲುಪಲು ಸಹಾಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೆವಿಎಸ್ ಉಪಾಧ್ಯಕ್ಷರಾದ ಬಿ.ಎಸ್.ಉಮೇಶ್ ಹಾಗೂ ಬಾಗೇಪಲ್ಲಿ ನಟರಾಜ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಉದ್ಯಮಶೀಲ ಮನೋಭಾವ ಬೆಳೆಯಬೇಕು. ಭವಿಷ್ಯದಲ್ಲಿ ಉದ್ಯೋಗ ಹುಡುಕುವವರಾಗದೆ, ಉದ್ಯೋಗ ಸೃಷ್ಟಿಸುವವರಾಗುವಂತೆ ಪ್ರೇರೇಪಿಸಿದರು.

ಖಜಾಂಚಿ ಟಿ.ಎಸ್.ಶಿವಪ್ರಸಾದ್ ಮಾತನಾಡಿ, ಸಂಸ್ಥೆಯಲ್ಲಿರುವ ಆಧುನಿಕ ಮೂಲ ಸೌಕರ್ಯ, ತರಬೇತಿ ಕೋರ್ಸ್‌ಗಳು ಮತ್ತು ಇಂಕ್ಯೂಬೇಶನ್ ಲ್ಯಾಬ್‌ಗಳ ಕುರಿತು ತಿಳಿಸಿ, ಇಂದಿನ ತಂತ್ರಜ್ಞಾನಾಧಾರಿತ ಶಿಕ್ಷಣದ ಅಗತ್ಯತೆಗಳನ್ನು ಪೂರೈಸಲು ಸಂಸ್ಥೆ ನಿರಂತರವಾಗಿ ಮುಂದುವರಿಯುತ್ತಿದೆ ಎಂದರು.

ಕಾರ್ಯಕ್ರಮದ ಕಾರ್ಯದರ್ಶಿಗಳಾದ ಜಿ.ಎಸ್. ಉಮಾಶಂಕರ್, ಟಿ.ಯು.ಜಗದೀಶಮೂರ್ತಿ, ಉಪಾಧ್ಯಕ್ಷರಾದ ಬಿ.ಎಸ್. ಉಮೇಶ್, ಟಿ.ಎಸ್. ಬಸವರಾಜು, ಜಿ.ಪಿ.ದೀಪಕ್, ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಸಿ.ಸತೀಶ್‌ಕುಮಾರ್, ವಿಭಾಗದ ಮುಖ್ಯಸ್ಥೆ ಡಾ.ದೀಪ್ತಿ ಅಮಿತ್, ಇನೋವೇಷನ್ ಮತ್ತು ಇಂಕ್ಯೂಬೇಶನ್ ಸೆಲ್‌ನ ಮುಖ್ಯಸ್ಥ ಡಾ.ಮಿಟ್ಟಾ ಶೇಖರ್‌ಗೌಡ ಸೇರಿದಂತೆ ಅಧ್ಯಾಪಕರು, ಬೋಧಕೇತರ ವರ್ಗದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

---------