ಕನ್ನಡಪ್ರಭ ವಾರ್ತೆ ಭಾಲ್ಕಿ
ಕುಂಬಾರ ಗುಂಡಯ್ಯ ಮತ್ತು ಕುರುಬ ಗೊಲ್ಲಾಳ ಉಭಯ ಶರಣರು ಕಾಯಕದ ಮೂಲಕ ಕೈಲಾಸವೇ ಧರೆಗೆ ತಂದ ಮಹಾನ್ ಶರಣರು. ಉಭಯ ಶರಣರ ಚಿಂತನೆಗಳು ಇಂದಿನ ಆಧುನಿಕ ಸಮಾಜಕ್ಕೆ ದಾರಿದೀಪವಾಗಿವೆ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು.ಇಲ್ಲಿನ ಚನ್ನಬಸವಾಶ್ರಮ ಪರಿಸರದ ಕುಂಬಾರ ಗುಂಡಯ್ಯ ಕಲ್ಯಾಣ ಮಂಟಪದಲ್ಲಿ ಹಿರೇಮಠ ಸಂಸ್ಥಾನದಿಂದ ಬುಧವಾರ ಸಂಜೆ ಆಯೋಜಿಸಿದ್ದ ಕುಂಬಾರ ಗುಂಡಯ್ಯ, ಕುರುಬ ಗೊಲ್ಲಾಳ ಶರಣರ ಜಯಂತಿ ಮತ್ತು 324ನೆಯ ಶರಣ ಸಂಗಮ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಶರಣರು ಅಂತರಂಗ ಮತ್ತು ಬಹಿರಂಗ ಶುದ್ಧಿಯ ಮಾರ್ಗ ತೋರಿಸಿದರು. ಹಣ, ಅಧಿಕಾರ, ಸಂಪತ್ತು ಇವುಗಳಿಂದ ನಿಜವಾದ ಸಮಾಧಾನ ದೊರೆಯಲು ಸಾಧ್ಯವಿಲ್ಲ. ಆದರೆ ಶರಣರ ಸಂಗದಿಂದ ವಚನಗಳ ಅಧ್ಯಯನದಿಂದ ಸಮಾಧಾನ ದೊರೆಯಲು ಸಾಧ್ಯ ಎಂದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಶಂಭುಲಿಂಗ ಕಾಮಣ್ಣ ಅನುಭಾವ ನೀಡಿ, ಕುಂಬಾರ ಗುಂಡಯ್ಯ ಹಾಗೂ ಕುರುಬ ಗೊಲ್ಲಾಳೇಶ್ವರ 12ನೆಯ ಶತಮಾನದ ಮಹಾನ್ ಶರಣರು. ಅವರ ಜೀವನ ಸಂದೇಶ ಬೆಳಕಿನ ಕಿರಣಗಳು. ಶರೀರದ ಗಾಯಕ್ಕೆ ಔಷಧ ಇದ್ದಂತೆ. ಮನಸ್ಸಿನ ಗಾಯಕ್ಕೆ ಶರಣರ ವಚನಗಳೇ ದಿವ್ಯ ಔಷಧಿ. ಗುಂಡಯ್ಯ ಜನಿಸಿದ್ದು ಭಾಲ್ಕಿಯಲ್ಲಿ ಗುಂಡಯ್ಯ ಹಾಗೂ ಧರ್ಮಪತ್ನಿ ಕೇತಲದೇವಿ ಗಡುಗೆ ತಯಾರಿಸುವ ಕಾಯಕ ಮಾಡುತ್ತಿದ್ದರು.ತಮ್ಮ ಕಾಯಕದಿಂದ ಶಿವನ ಒಲುಮೆ ಪಡೆದ ಮಹಾನುಭಾವರು. ಕಾಯಕ ಆದಾಯಕ್ಕೆ ಸೀಮಿತವಾಗಿರದೇ ಆನಂದಕ್ಕಾಗಿ ಮಾಡುತ್ತಿದ್ದರು. ಕುರುಬ ಗೊಲ್ಲಾಳ ಅವರು ವಿಜಯಪುರ ಜಿಲ್ಲೆಯಲ್ಲಿ ಜನಿಸಿ, ಕಲ್ಯಾಣಕ್ಕೆ ಆಗಮಿಸಿ, ಶರಣ ಸಂಕುಲದಲ್ಲಿ ಭಾಗಿಯಾದರು. ಅವರು 10 ವಚನಗಳು ಬರೆಯುವ ಮೂಲಕ ಕನ್ನಡ ಸಾಹಿತ್ಯ ಶ್ರೀಮತಗೊಳಿಸಿದ್ದಾರೆ ಎಂದು ತಿಳಿಸಿದರು.
ತಾಲೂಕು ರೋಟರಿ ಸಂಸ್ಥೆಯ ಅಧ್ಯಕ್ಷೆ ಡಾ.ಶೈಲಜಾ ತಳವಾಡೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶಿವರಾಜ ಮಲ್ಲೇಶಿ, ಜೈಪ್ರಕಾಶ ಕುಂಬಾರ ಸೇರಿದಂತೆ ಹಲವರು ಇದ್ದರು. ರಾಜು ಜುಬರೆ ವಚನ ಪ್ರಾರ್ಥನೆ ಮತ್ತು ಶಾಂತಯ್ಯ ಸ್ವಾಮಿ ವಚನ ಗಾಯನ ನಡೆಸಿಕೊಟ್ಟರು. ದೀಪಕ ಠಮಕೆ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ತಾಲೂಕು ರೋಟರಿ ಕ್ಲಬ್ ಅಧ್ಯಕ್ಷೆ ಡಾ.ಶೈಲಜಾ ಡಾ.ಅನೀಲಕುಮಾರ ತಳವಾಡೆ, ಪ್ರಥಮ ಶೈಕ್ಷಣಿಕ ಸಾಹಿತ್ಯ ಸಮ್ಮೇಳದ ಸರ್ವಾಧ್ಯಕ್ಷೆ ವಿಜಯಕುಮಾರ ಪಾಟೀಲ ಯರನಳ್ಳಿ, ಜಿಲ್ಲಾ ಕನ್ನಡ ಮಹಿಳಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ ಆಯ್ಕೆಯಾದ ಮಲ್ಲಮ್ಮ ಆರ್.ಪಾಟೀಲ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜೈರಾಜ ಪಾತ್ರೆ, ರೋಟರಿ ಕ್ಲಬ್ ಕಾರ್ಯದರ್ಶಿ ಪ್ರೊ.ಅಶೋಕ ರಾಜೋಳೆ, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ ಬಿ.ಜಿ.ಪಾಟೀಲ ಮತ್ತು ರೋಟರಿ ಕ್ಲಬ್ ಖಜಾಂಜಿ ಅವಿನಾಶ ಮಲ್ಗೆ ಅವರನ್ನು ಮಠದ ಪರವಾಗಿ ಸನ್ಮಾನಿಸಿ, ಆಶೀರ್ವದಿಸಿದರು.