ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸುವ ಛಲ

| Published : May 18 2025, 01:23 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಪೂರ್ಣಗೊಳಿಸುವ ಛಲವನ್ನು ನಮ್ಮ ಸರ್ಕಾರ ಹೊಂದಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್. ಕೆ. ಪಾಟೀಲ ಭರವಸೆ ನೀಡಿದರು. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಹೊಸಪೇಟೆಯಲ್ಲಿ ಮೇ 20ರಂದು ನಡೆಯಲಿರುವ ರಾಜ್ಯ ಸರ್ಕಾರದ ಎರಡು ವರ್ಷಗಳ ಸಾಧನೆ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ವಿಜಯಪುರ ಜಿಲ್ಲೆ ಮತ್ತು ಬಬಲೇಶ್ವರ ವಿಧಾನಸಭೆ ಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳು ಮತ್ತು ಪಕ್ಷದ ಕಾರ್ಯಕರ್ತರು ಭಾಗವಹಿಸಬೇಕು ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಪೂರ್ಣಗೊಳಿಸುವ ಛಲವನ್ನು ನಮ್ಮ ಸರ್ಕಾರ ಹೊಂದಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್. ಕೆ. ಪಾಟೀಲ ಭರವಸೆ ನೀಡಿದರು. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಹೊಸಪೇಟೆಯಲ್ಲಿ ಮೇ 20ರಂದು ನಡೆಯಲಿರುವ ರಾಜ್ಯ ಸರ್ಕಾರದ ಎರಡು ವರ್ಷಗಳ ಸಾಧನೆ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ವಿಜಯಪುರ ಜಿಲ್ಲೆ ಮತ್ತು ಬಬಲೇಶ್ವರ ವಿಧಾನಸಭೆ ಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳು ಮತ್ತು ಪಕ್ಷದ ಕಾರ್ಯಕರ್ತರು ಭಾಗವಹಿಸಬೇಕು ಎಂದು ಹೇಳಿದರು.

ಆಲಮಟ್ಟಿ ಜಲಾಶಯದ ಎತ್ತರ ಕುರಿತು ಕೃಷ್ಣಾ ನ್ಯಾಯಾಧೀಕರಣ ತೀರ್ಪು ನೀಡಿದರೂ ಕೇಂದ್ರ ಸರ್ಕಾರ ಇನ್ನೂ ಗೆಜೆಟ್ ನೋಟಿಫಿಕೇಶನ್ ಹೊರಡಿಸಿಲ್ಲ. ಬಿಜೆಪಿ ಸಂಸದರು, ಸಚಿವರು ಸೇರಿದಂತೆ ಯಾವ ಜನಪ್ರತಿನಿಧಿಗಳೂ ಈ ಬಗ್ಗೆ ಧ್ವನಿ ಎತ್ತಿಲ್ಲ. ಆದರೆ, ಉತ್ತರ ಕರ್ನಾಟಕದ ನಾವೆಲ್ಲ ಸಚಿವರು ಸಿಎಂ ಅವರನ್ನು ಭೇಟಿ ಮಾಡಿ ಪ್ರಧಾನಿ ಮೇಲೆ ಒತ್ತಡ ತರುವಂತೆ ಮನವಿ ಮಾಡಿದ್ಧಾಗಿ ತಿಳಿಸಿದರು.ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಹಣಕಾಸು ಸಚಿವೆ ₹ 5500 ಕೋಟಿ ಹಣವನ್ನು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು. ಆದರೆ, ಈವರೆಗೆ ಒಂದು ನೈಯಾ ಪೈಸೆ ಬಿಡುಗಡೆ ಮಾಡಿಲ್ಲ. ಬರಗಾಲ ಸಮಯದಲ್ಲಿ ನಾವು ಸುಪ್ರೀಂ ಕೋರ್ಟ್‌ ಮೊರೆ ಹೋಗಿ ನ್ಯಾಯ ಪಡೆಯಬೇಕಾಯಿತು. ಕೇಂದ್ರದ ಅಸಹಕಾರದ ನಡುವೆಯೂ ಸಿಎಂ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಅಭಿವೃದ್ಧಿ ಯೋಜನೆಗಳಿಗೆ ಆದ್ಯತೆ ನೀಡುತ್ತಿದೆ. ರಾಜ್ಯದಲ್ಲಿ 25 ಸಾವಿರ ಸ್ಮಾರಕಗಳಿದ್ದು, ಇವುಗಳಲ್ಲಿ 2000 ರಕ್ಷಿತ ಸ್ಮಾರಕಗಳಿವೆ. ವಿಜಯಪುರ ಜಿಲ್ಲೆಯಲ್ಲಿರುವಷ್ಟು ಪ್ರವಾಸೋದ್ಯಮ ಸ್ಥಳಗಳು ರಾಜ್ಯದ ಬೇರಾವ ಜಿಲ್ಲೆಗಳಲ್ಲಿಯೂ ಇಲ್ಲ. ಪ್ರವಾಸೋದ್ಯಮ ಅಭಿವೃದ್ಧಿಗೆ ನಾವು ಒತ್ತು ನೀಡಿದ್ದೇವೆ ಎಂದು ಹೇಳಿದರು.ಡಾ.ಮಹಾಂತೇಶ ಬಿರಾದಾರ ಪ್ರಾಸ್ತಾವಿಕ ಮಾತನಾಡಿ, ತಿಕೋಟಾ ತಾಲೂಕಿನಲ್ಲಿ 96 ಹಳ್ಳಿಗಳಿಗೆ ಕಂದಾಯ ಗ್ರಾಮದ ಮಾನ್ಯತೆ ಸಿಕ್ಕಿದೆ. ಈ ತಾಲೂಕಿನ 4486 ಮತ್ತು ಬಬಲೇಶ್ವರ ತಾಲೂಕಿನಲ್ಲಿ 877 ಫಲಾನುಭವಿಗಳ ಹಕ್ಕುಪತ್ರ ಅರ್ಜಿಗಳು ಪುರಸ್ಕೃತಗೊಂಡಿವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿ.ಪರಿಷತ ಸದಸ್ಯ ಶಾಸಕ ಸುನಿಲಗೌಡ ಪಾಟೀಲ, ಮಾಜಿ ಶಾಸಕ ಪ್ರೊ.ರಾಜು ಆಲಗೂರ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಂ.ಎಸ್.ಲೋಣಿ, ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಬಬಲೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಗೊಂಡ ಬಿರಾದಾರ, ಮುಖಂಡರಾದ ಕೆ.ಎಚ್.ಮುಂಬಾರೆಡ್ಡಿ, ಎಚ್.ಎಸ್.ಕೊರಡ್ಡಿ, ಅಪ್ಪುಗೌಡ ಪಾಟೀಲ, ಯಾಕೂಬ ಜತ್ತಿ, ವಿ.ಎಸ್.ಪಾಟೀಲ, ಆನಂದಕುಮಾರ ದೇಸಾಯಿ, ಬಸನಗೌಡ ಪಾಟೀಲ, ಮಲ್ಲು ದಳವಾಯಿ, ಉಮೇಶ ಮಲ್ಲಣ್ಣವರ, ಲಕ್ಷ್ಮಣ ಚಿಕದಾಣಿ, ರಮೇಶ ಸುಳಿಭಾವಿ, ಚನ್ನಪ್ಪ ಕೊಪ್ಪದ, ಪೀರ ಪಟೇಲ್, ಎಲ್.ಎಸ್.ನಿಡೋಣಿ, ರಫೀಕ್ ಕಾನೆ, ಮದ್ದುರಾಜ ಕುಲಕರ್ಣಿ, ಡಾ.ಗಂಗಾಧರ ಸಂಬಣ್ಣಿ, ಅಬ್ದುಲಹಮೀದ್ ಮುಶ್ರಿಫ್ ಮುಂತಾದವರು ಉಪಸ್ಥಿತರಿದ್ದರು.------

ಬಾಕ್ಸ್‌ನೈಯಾ ಪೈಸೆ ಭ್ರಷ್ಟಾಚಾರವಿಲ್ಲ: ಪಾಟೀಲ

ಹೊಸಪೇಟೆ ಸಮಾವೇಶದಲ್ಲಿ ಮೂರು ಲಕ್ಷ ಜನ ಭಾಗವಹಿಸಲಿದ್ದಾರೆ. ನಮ್ಮ ಸರ್ಕಾರ ಎರಡು ವರ್ಷದ ಪ್ರಗತಿಯ ಸಮಾವೇಶ ಇದಾಗಿದೆ. ಪಂಚ ಗ್ಯಾರಂಟಿ ಯೋಜನೆಗಳು 1.25 ಕೋಟಿ ಕುಟುಂಬಗಳನ್ನು ಬಡತನ ರೇಖೆಯಿಂದ ಮೇಲೆ ಎತ್ತುವಲ್ಲಿ ಸಹಾಯವಾಗಿವೆ. ಪ್ರತಿಯೊಂದು ಕುಟುಂಬಕ್ಕೆ ವರ್ಷಕ್ಕೆ ₹ 60 ಸಾವಿರ ಸೌಲಭ್ಯ ಒದಗಿಸಿದೆ. ಟೀಕೆ ಮಾಡುವವರಿಗೆ ಈ ಸಮಾವೇಶ ಸೂಕ್ತ ಉತ್ತರ ನೀಡಲಿದೆ. ಎರಡು ವರ್ಷಗಳಲ್ಲಿ ಸರ್ಕಾರ ಮಾಡಿರುವ ಕೆಲಸ ಅಷ್ಟಿಷ್ಟಲ್ಲ. ಬಡವರ ಕಣ್ಣೀರು ಒರೆಸಿ, ಹಸಿವು ನೀಗಿಸಿ ಬದುಕು ಹಸನಾಗಿಸುವ ಕೆಲಸ ನಡೆದಿದೆ. ಸ್ವಾತಂತ್ರ್ಯದ ನಂತರ ಇದೇ ಮೊದಲ ಗ್ಯಾರಂಟಿ ಯೋಜನೆಗಳು ಶೇ.98.5 ಅರ್ಹರಿಗೆ ತಲುಪಿಸುವ ಕೆಲಸವಾಗಿದೆ. ಈವರೆಗೆ ₹ 90 ಸಾವಿರ ಕೋಟಿ ಹಣ ಖರ್ಚು ಮಾಡಿದ್ದು, ಒಂದು ನೈಯಾ ಪೈಸೆ ಭ್ರಷ್ಚಾಚಾರವಾಗಿಲ್ಲ. ಯೋಜನೆಯ ಸಂಪೂರ್ಣ ಲಾಭ ಫಲಾನುಭವಿಗಳಿಗೆ ತಲುಪಿದೆ ಎಂದು ಸಚಿವ ಎಚ್‌.ಕೆ.ಪಾಟೀಲ ಹೇಳಿದರು.