ರಂಗಾಯಣ ಕಲಬುರಗಿ, ಸಿಂಧನೂರ ಕನ್ನಡ ಸಾಹಿತ್ಯ ಪರಿಷತ್ತು, ಸಿಂಧನೂರ ಸಮುದಾಯದ ಸಹಯೋಗದಲ್ಲಿ ಡಾ.ಶಾಂತರಸ ವಿರಚಿತ ಸಣ್ಣಗೌಡಸಾನಿ ನಾಟಕ ಶುಕ್ರವಾರ ರಾತ್ರಿ ಟೌನಹಾಲ್‌ನಲ್ಲಿ ಪ್ರದರ್ಶನಗೊಂಡಿತು.

ಕನ್ನಡಪ್ರಭ ವಾರ್ತೆ ಸಿಂಧನೂರು

ರಂಗಾಯಣ ಕಲಬುರಗಿ, ಸಿಂಧನೂರ ಕನ್ನಡ ಸಾಹಿತ್ಯ ಪರಿಷತ್ತು, ಸಿಂಧನೂರ ಸಮುದಾಯದ ಸಹಯೋಗದಲ್ಲಿ ಡಾ.ಶಾಂತರಸ ವಿರಚಿತ ಸಣ್ಣಗೌಡಸಾನಿ ನಾಟಕ ಶುಕ್ರವಾರ ರಾತ್ರಿ ಟೌನಹಾಲ್‌ನಲ್ಲಿ ಪ್ರದರ್ಶನಗೊಂಡಿತು.

ಹಳ್ಳಿಯೊಂದರ ಜಾತ್ರೆಯಲ್ಲಿ ನಡೆಯವ ನಾಟಕಕ್ಕೆ ಬಂದ ಮಾಬಿಯ ಸುತ್ತ ಹೆಣೆಯಲಾದ ಕಥೆ ಇದಾಗಿತ್ತು. ಹಳ್ಳಿಯೊಂದರಲ್ಲಿ ಪಾತ್ರ ಮಾಡಲು ಬಂದ ಮಾಬಿ ಮೇಲೆ ಇಬ್ಬರು ಗೌಡರ ಕಣ್ಣು ಬಿದ್ದು ಅವಳನ್ನು ಒಲಿಸಿಕೊಳ್ಳಲು ನಡೆಯವ ಮನಸ್ಥಿತಿಯೇ ನಾಟಕದ ಮುಖ್ಯ ವಿಷಯ ವಸ್ತುವಾಗಿತ್ತು. ಮಾಬಿ ಸಿಗದೆ ಇದ್ದ ಗೌಡನ ರೋಷ, ಹೊಟ್ಟೆಕಿಚ್ಚು, ದ್ವೇಷ, ಊರಿನಲ್ಲಿ ಎತ್ತಿಕಟ್ಟುವ ಸಹಜ ಸ್ವಭಾವಗಳು, ಪೋಲಿಸ ಕಟ್ಟೆ ಏರುವುದು, ಊರಿನಲ್ಲಿ ಅಶಾಂತಿ ನೆಲೆಸುವಂತೆ ಮಾಡುವ ವ್ಯಕ್ತಿಗಳ ಪ್ರತಿ ಚಿತ್ರಗಳೇ ನೋಡುಗರನ್ನು ಆಕರ್ಷಿಸಿತು.

ರಾಯಚೂರ ಭಾಷೆಯನ್ನು ಅಚ್ಚುಕಟಾಗಿ ನಾಟಕದಲ್ಲಿ ಬಳಸಿದ್ದು ಪ್ರೇಕ್ಷಕರ ಮೆಚ್ಚುಗೆ ಪಡೆಯಿತು. ಪ್ರತಿಯೊಬ್ಬ ಕಲಾವಿದರ ಭಾವಾಭಿನಯ ಸಹಜತೆಯಿಂದ ಕೂಡಿತ್ತು. ರಂಗಸಜ್ಜಿಕೆ, ಸಂಕಲನ, ಸಂದರ್ಭಕ್ಕೆ ತಕ್ಕಂತೆ ಬೆಳಕಿನ ವ್ಯವಸ್ಥೆ. ಜನಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಇಂದಿನ ಸಮಾಜದಲ್ಲಿ ನಡೆಯುವ ಮನಸ್ಥಿತಿಯನ್ನೇ ನಾಟಕದ ಪಾತ್ರಗಳು ಹೋಲುತ್ತಿದ್ದವು. ಪ್ರೇಕ್ಷಕರಿಗೆ ನಾಟಕದಲ್ಲಿನ ಸಂಗೀತ ಬಹು ಇಷ್ಟವಾಯಿತು. ಹಿನ್ನೆಲೆ ಗಾಯನ ಸಂಗೀತಕ್ಕೆ ಕಳೆ ಕಟ್ಟಿತ್ತು.

ನಾಟಕದ ನಗಾರಿ ಬಾರಿಸುವ ಮೂಲಕ ನಾಟಕ ಉದ್ಘಾಟಿಸಿದ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎನ್.ಶಿವನಗೌಡ ಗೋರೆಬಾಳ ಮಾತನಾಡಿದರು.

ಅಧ್ಯಕ್ಷ ಶರಬಣ್ಣ ನಾಗಲಾಪೂರ, ರಾಜ್ಯಕಾರ್ಯದರ್ಶಿ ದೇವೇಂದ್ರಗೌಡ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಫ್.ಮಸ್ಕಿ, ರಂಗಾಯಣದ ಮಹಾಂತೇಶ ನವಲಕಲ್, ಬೀರಪ್ಪ ಶಂಭೋಜಿ, ನಾಗರಾಜ ಅರಳಿಮರದ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ದತ್ತಿದಾನಿಗಳನ್ನು ಗೌರವಿಸಲಾಯಿತು.