ಸಾರಾಂಶ
ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಲ್ಲ ಪಕ್ಷಗಳು ಹಾಳಾಗಿವೆ. ಅದರಲ್ಲಿ ನಾನು ಜೀವನ ಪೂರ್ತಿ ಕಳೆದ ಭಾರತೀಯ ಜನತಾ ಪಾರ್ಟಿ ಕಥೆ ಹಾಳಾಗಿದ್ದು, ಬಿಜೆಪಿಗೆ ಸಿದ್ದಾಂತವೇ ಇಲ್ಲ ಎಂಬಂತಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದರು.
ವಿಜಯಪುರ : ರಾಜ್ಯ ರಾಜಕಾರಣ ಗಬ್ಬೆದ್ದು ಹೋಗಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಲ್ಲ ಪಕ್ಷಗಳು ಹಾಳಾಗಿವೆ. ಅದರಲ್ಲಿ ನಾನು ಜೀವನ ಪೂರ್ತಿ ಕಳೆದ ಭಾರತೀಯ ಜನತಾ ಪಾರ್ಟಿ ಕಥೆ ಹಾಳಾಗಿದ್ದು, ಬಿಜೆಪಿಗೆ ಸಿದ್ದಾಂತವೇ ಇಲ್ಲ ಎಂಬಂತಾಗಿದೆ. ಹಿಂದುತ್ವ ಎಂದು ಹೇಳುತ್ತಿದ್ದ ಪಕ್ಷ ಹಾಳಾಗಿ ಹೋಗುತ್ತಿದೆ. ಒಂದು ಕುಟುಂಬದ ಕೈಲಿ ಬಿಜೆಪಿ ಸಿಲುಕಿ ನಲುಗುತ್ತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದರು.
ನಗರದಲ್ಲಿ ಭಾನುವಾರ ಸುದ್ದಿಗರರೊಂದಿಗೆ ಮಾತನಾಡಿದ ಅವರು, ಎಲ್ಲ ಪಕ್ಷಗಳ ಕೇಂದ್ರ ನಾಯಕರು ಏನೂ ಮಾಡುತ್ತಿಲ್ಲ. ನಾನು ಜೀವನ ಪೂರ್ತಿ ಕಳೆದ ಬಿಜೆಪಿ ಕಥೆಯೇ ಹಾಳಾಗಿದೆ. ಶಿವಮೊಗ್ಗದ ಶಿಕಾರಿಪುರದಲ್ಲಿ ವಿಜಯೇಂದ್ರ ನಮ್ಮ ಭಿಕ್ಷೆಯಿಂದ ಗೆದ್ದಿದ್ದು ಎಂದು ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಅವರು ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ. ವಿಜಯೇಂದ್ರ ವಿರುದ್ದ ಸೂಕ್ತ ಅಭ್ಯರ್ಥಿ ಹಾಕದೇ ಇರೋ ಕಾರಣ ಗೆದ್ದಿದ್ದು ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ನಾನು ಸ್ಪರ್ಧೆ ಮಾಡಿದ್ದರೆ ಸಿದ್ದರಾಮಯ್ಯ ಗೆಲ್ಲುತ್ತಿರಲಿಲ್ಲ ಎಂದು ವಿಜಯೇಂದ್ರ ಹೇಳುತ್ತಾರೆ. ಇದೆಲ್ಲ ಹೊಂದಾಣಿಕೆ ಅಲ್ಲವೇ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ಕಲಹ ಉಂಟಾಗುತ್ತಿದೆ. ಕಾಂಗ್ರೆಸ್ ಪಕ್ಷವೂ ಸಹ ಇದಕ್ಕೆ ಹೊರತಾಗಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತಿಗೆ ಪಕ್ಷದಲ್ಲಿ ಯಾವ ಬೆಲೆಯಿಲ್ಲ. ಖರ್ಗೆ ಮಹಾಕುಂಭ ಮೇಳದ ಬಗ್ಗೆ ಮಾತನಾಡಿದ್ದು ನೋವು ತರಿಸಿದೆ. ಮಲ್ಲಿಕಾರ್ಜುನ ಖರ್ಗೆ ಕುಂಭಮೇದ ಬಗ್ಗೆ ಟೀಕೆ ಮಾಡಿದ್ದಾರೆ. ಸೋನಿಯಾ ಗಾಂಧಿ ಮೆಚ್ಚಿಸೋಕೆ ಅವರು ಮಾತನಾಡಿದ್ಧಾರೆ. 144 ವರ್ಷಗಳ ಬಳಿಕ ನಡೆಯುತ್ತಿರುವ ಕುಂಭ ಮೇಳಕ್ಕೆ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅವಮಾನ ಮಾಡಿದ್ದಾರೆ. ಕುಂಭಮೇಳದಲ್ಲಿ ಸ್ನಾನ ಮಾಡಿದರೆ ಬಡವರ ಹೊಟ್ಟೆ ತುಂಬತ್ತಾ ಎಂದು ಖರ್ಗೆ ಮಾತನಾಡುವ ಮೂಲಕ ಹಿಂದೂಗಳಿಗೆ ಅವಮಾನ ಮಾಡಿದ್ದಾರೆ. ಖರ್ಗೆ ಬಾಯಿಮುಚ್ಚಿ ಎಂದು ತಮ್ಮ ಪಕ್ಷದವರಿಗೆ ಹೇಳುತ್ತಾರೆ. ಆದರೆ, ಕುಂಭಮೇಳದ ವಿಚಾರದಲ್ಲಿ ಖರ್ಗೆ ಬಾಯಿ ಮುಚ್ಚಿಕೊಳ್ಳಬೇಕು ಎಂದು ಎಚ್ಚರಿಸಿದರು.
ಡಿ.ಕೆ.ಶಿವಕುಮಾರ ಹಾಗೂ ಸಭಾಪತಿ ಯು.ಟಿ. ಖಾದರ್ ಕುಂಭಮೇಳಕ್ಕೆ ಹೋಗಿದ್ದಾರೆ. ಹಾಗಾದರೆ ಅವರನ್ನು ಪಕ್ಷದಿಂದ ಕಿತ್ತು ಹಾಕಿ ಎಂದು ಖರ್ಗೆಗೆ ಸವಾಲು ಹಾಕಿದರು. ಹಸು ಕೆಚ್ಚಲು ಕತ್ತರಿಸಿದಾಗ, ಗಬ್ಬಿದ ಹಸು ಕತ್ತರಿಸಿದಾಗ, ಬಾಲ ಕತ್ತರಿಸಿದಾಗ ಖರ್ಗೆ ಅವರು ಮಾತನಾಡಲಿಲ್ಲ. ಈಗಾ ಕುಂಭಮೇಳದ ಬಗ್ಗೆ ಮಾತನಾಡುತ್ತಾರೆ. ಯಾರು ಹಸು ಕತ್ತರಿಸಿತ್ತಾರೋ, ಬಾಲ ಕತ್ತರಿಸುತ್ತಾ ಗರ್ಭದ ಹಸು ಕತ್ತರಿಸುತ್ತಾರೋ ಅವರ ಕೈ ಕತ್ತರಿಸೋ ಕೆಲಸ ಆಗುತ್ತಿದೆ. ಹಿಂದೂ ಯುವಕರು ಈ ಕೆಲಸ ಮಾಡುತ್ತಾರೆಂದು ಅವರು ಹೇಳಿದರು.
ಇತರ ಪಾರ್ಟಿಗಳಲ್ಲಿ ಚುನಾವಣೆ ಆಗಲ್ಲ, ಬಿಜೆಪಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರೋದ್ರಿಂದ ಚುನಾವಣೆ ನಡೆಯುತ್ತದೆ. ಜಿಲ್ಲಾ ಮಟ್ಟದಿಂದ ಹಿಡಿದು ರಾಷ್ಟ್ರಮಟ್ಟದಿಂದ ಚುನಾವಣೆ ನಡೆಯುತ್ತದೆ. ಕೇಂದ್ರ ಮಟ್ಟದಲ್ಲಿ ನಿರ್ಧಾರ ಆಗಬಹುದು, ಇಲ್ಲವೇ ಚುನಾವಣೆ ನಡೆಯಬಹುದು. ಇದನ್ನು ತಪ್ಪು ಎಂದು ನಾನು ಹೇಳಲ್ಲ ಎಂದರು.
ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ತೆರಳುತ್ತಿದ್ದೇನೆ. ಕುಂಭಮೇಳಕ್ಕೆ ಫೆ.27 ರಂದು ಕುಟುಂಬ ಸಮೇತರಾಗಿ ತೆರಳುತ್ತಿದ್ದೇವೆ. ಪತ್ನಿ ಮಕ್ಕಳು ಸೊಸೆಯಂದಿರರು ಅಳಿಯಂದಿರರು ಮೊಮ್ಮಕ್ಕಳ ಸಮೇತ ಹೋಗುತ್ತಿದ್ದೇವೆ ಎಂದು ತಿಳಿಸಿದರು.