ಒಡೆಯುವ ಶಕ್ತಿಗಿಂತ ಒಂದುಗೂಡಿಸುವ ಶಕ್ತಿ ದೊಡ್ಡದು

| Published : Jun 18 2025, 11:48 PM IST

ಸಾರಾಂಶ

ಕೇವಲ ಪದವೀಧರರಾದರೆ ಸಾಲದು ಕೌಶಲಪೂರಿತ ಪದವೀಧರರಾಗುವ ಅಗತ್ಯವಿದೆ. ದೇಶದ ನೂರಾರು ಕೋಟಿ ಜನಸಂಖ್ಯೆಯಲ್ಲಿ ಕೋಟ್ಯತರ ಪದವೀಧರರಿದ್ದಾರೆ. ಅದರಲ್ಲಿ ಕೆಲವೇ ಲಕ್ಷದ ಮಂದಿ ಉತ್ತಮ ಉದ್ಯೋಗದಲ್ಲಿದ್ದಾರೆ. ಇದಕ್ಕೆ ಕಾರಣ ಕೌಶಲ ಕೊರತೆ. ಕೌಶಲ್ಯವಿಲ್ಲದ ಪದವಿ ಕೇವಲ ಪ್ರಮಾಣ ಪತ್ರಕ್ಕೆ ಸೀಮಿತ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಒಡೆಯುವುದರಲ್ಲಿರುವ ಶಕ್ತಿಗಿಂತ ಕೂಡಿಸುವುದರಲ್ಲಿರುವ ಒಗ್ಗಟ್ಟು ದೊಡ್ಡದು. ಇದಕ್ಕೆ ಉದಾಹಣೆ ಅಣು ಒಡೆದಲ್ಲಿ ತಕ್ಷಣ ಬೆಳಕು ಚಲ್ಲುತ್ತದೆ. ಆದರೆ ಅಣು ಒಟ್ಟಿಗೆ ಕೂಡಿದರೆ ಸೂರ್ಯನಂತೆ ಸದಾ ಬೆಳಕು ನೀಡುತ್ತದೆ. ಅದೇ ರೀತಿ ಒಡೆಯುವ ಮತ್ತು ಕೂಡಿಸುವ ವಿದ್ಯೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಕೂಡಿಸುವ ವಿದ್ಯೆಯನ್ನು ಬಳಸಿಕೊಂಡು ಉನ್ನತ ಸ್ಥಾನಕ್ಕೇರಬೇಕೆಂದು ವಿದ್ಯಾರ್ಥಿಗಳಿಗೆ ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಕರೆ ನೀಡಿದರು.

ನಗರ ಹೊರವಲಯದ ಎಸ್ ಜೆಸಿಐಟಿ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿನ ಬಿಜಿಎಸ್ ಸಭಾಂಗಣದಲ್ಲಿ ಗುರುವಾರ ಎಸ್ ಜೆಸಿಐಟಿ ಇಂಜನಿಯರಿಂಗ್ ಕಾಲೇಜು ಏರ್ಪಡಿಸಿದ್ದ ಗ್ರಾಜ್ಯುಯೇಷನ್ ಡೇ- 2025 ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿ,

ನಿರಂತರ ಅಧ್ಯಯನ ಮಾಡಿ

ಪಾಲಕರು ಮಕ್ಕಳ ಉಜ್ವಲ ಭವಿಷ್ಯ ರೂಪಿಸುವ ಕನಸಿನಲ್ಲಿ ಕಷ್ಟಪಟ್ಟು ಶಿಕ್ಷಣವನ್ನು ಕೊಡಿಸುತ್ತಾರೆ. ಯಾರು ಇದನ್ನು ಅರಿತು ಜವಾಬ್ದಾರಿಯಿಂದ ಮುನ್ನಡೆಯುತ್ತಾರೋ ಅವರು ಉತ್ತಮ ಭವಿಷ್ಯ ಕಟ್ಟಿಕೊಳ್ಳುತ್ತಾರೆ. ಜ್ಞಾನಕ್ಕೆ ಮಿಗಿಲಾದ ವಸ್ತು ಬೇರೊಂದಿಲ್ಲ. ನಿರಂತರ ಅಧ್ಯಯನ ಮತ್ತು ಉತ್ತಮ ಚಿಂತನೆಯಿದ್ದರೆ ಮನಸ್ಸು ಲವಲವಿಕೆಯಿಂದ ಇರಲು ಸಾಧ್ಯ ಎಂದರು.

.ವಿದ್ಯಾರ್ಥಿಗಳು ಸತತ ಪ್ರಯತ್ನಶೀಲರಾದಾಗ ಮಾತ್ರ ಏನಾದರೂ ಸಾಧಿಸಲು ಸಾಧ್ಯವಾಗುತ್ತದೆ. ಇದಿಲ್ಲದೆ ಕೇವಲ ಅಧ್ಯಾಪಕರು ಮಾಡುವ ಪಾಠ ಪ್ರವಚನಗಳಿಂದ, ಪೋಷಕರು ತೋರುವ ಪ್ರೀತಿಯಿಂದ ಏಳಿಗೆ ಸಾಧ್ಯವಿಲ್ಲ. ಸಂಕಲ್ಪಕ್ಕೆ ಪೂರಕವಾಗಿ ಸಾಧನೆ ಮಾಡಬೇಕು. ಓದುವ ಸಂದರ್ಭದಲ್ಲಿ ಯಾರು ಸುಖವನ್ನು ಅಪೇಕ್ಷೆ ಪಡುತ್ತಾರೋ ಅವರು ಎಂದಿಗೂ ಜೀವನದಲ್ಲಿ ಏಳಿಗೆಯನ್ನು ಹೊಂದಲು ಸಾಧ್ಯವಿಲ್ಲ. ವಿದ್ಯಾರ್ಥಿ ಜೀವನಕ್ಕೆ ಆಲಸ್ಯ ಒಳ್ಳೆಯದಲ್ಲ. ತನ್ನ ಇರುವಿಕೆಯನ್ನು ಜಗತ್ತಿಗೆ ತೋರಬೇಕಾದರೆ ಪ್ರಾಮಾಣಿಕ ಪ್ರಯತ್ನ ಹಾಕಲೇಬೇಕು ಎಂದು ಶ್ರೀಗಳು ಕಿವಿಮಾತು ಹೇಳಿದರು.

ಕೌಶಲಪೂರಿತ ಪದವೀಧರರಾಗಿ

ಕಾರ್ಯಕ್ರಮ ಉದ್ಘಾಟಿಸಿದ ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಮಾತನಾಡಿ, ಕೇವಲ ಪದವೀಧರರಾದರೆ ಸಾಲದು ಕೌಶಲಪೂರಿತ ಪದವೀಧರರಾಗುವ ಅಗತ್ಯವಿದೆ. ದೇಶದ ನೂರಾರು ಕೋಟಿ ಜನಸಂಖ್ಯೆಯಲ್ಲಿ ಕೋಟ್ಯತರ ಪದವೀಧರರಿದ್ದಾರೆ. ಅದರಲ್ಲಿ ಕೆಲವೇ ಲಕ್ಷದ ಮಂದಿ ಉತ್ತಮ ಉದ್ಯೋಗದಲ್ಲಿದ್ದಾರೆ. ಯಾಕೆ ಹೀಗಾಯಿತು ಎಂದರೆ ಕೌಶಲ್ಯವಿಲ್ಲದ ಪದವಿ ಕೇವಲ ಪ್ರಮಾಣ ಪತ್ರವಾಗುತ್ತದೆ ಅಷ್ಟೇ ಎಂಬುದನ್ನು ಅರಿತು ಓದಬೇಕಿದೆ ಎಂದರು.

ಪದವಿ ಮುಗಿದ ನಂತರ ರಾಷ್ಟ್ರವನ್ನು ನಿರ್ಮಿಸುವ ದೊಡ್ಡ ಜವಾಬ್ದಾರಿ ನಿಮ್ಮ ಮುಂದಿದೆ. ಪದವಿ ಪಡೆಯಲು ಕಾರಣರಾದ ಪ್ರಾಧ್ಯಾಪಕರನ್ನು ಮತ್ತು ಪೋಷಕರನ್ನು ಮರೆಯಬಾರದು. ಇಂದು ಪೋಷಕರ ಕನಸು ನನಸಾದಂತಹ ದಿನ, ಸಮಾಜದ ಸವಾಲುಗಳನ್ನು ಎದುರಿಸುವಂತಹ ಸಮಯ ಹಾಗೂ ಉದ್ಯೋಗ ಪಾದಾರ್ಪಣೆ ಮಾಡುವ ಸಮಯ ಎಂದರು.

ಟೆಕ್ ಮಹೀಂದ್ರದ ಸೀನಿಯರ್ ರಿಕ್ರೂಟ್ ಮೆಂಟ್ ಮೇನೆಜರ್ ಕೀರ್ತಿನಾಯಕ್ ಮಾತನಾಡಿ, ಪದವೀಧರರು ಉದ್ಯೋಗವಕಾಶಗಳಿಗೆ ಯಾವ ರೀತಿಯಾಗಿ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಹಾಗೂ ಸಂವಹನವು ಮುಖ್ಯವಾಗಿರುತ್ತದೆ ಎಂದು ತಿಳಿಸಿದರು.

ಬಿಜಿಎಸ್‌ ಸಂಸ್ಥೆಗಳ ಆಡಳಿತಾಧಿಕಾರಿ ಎನ್‌.ಶಿವರಾಮರೆಡ್ಡಿ ಮಾತನಾಡಿದರು. ಅಕಾಡೆಮಿಕ್ಸ್ ಡೀನ್ ಡಾ.ಬಿ.ಹೆಚ್.ಮಂಜುನಾಥ್ ಕುಮಾರ್ ಪದವೀಧರರಿಗೆ ಪ್ರಮಾಣ ವಚನವನ್ನು ಬೋಧಿಸಿದರು. ಪದವೀಧರರಿಗೆ ಮತ್ತು 2025 ರ ಸ್ನಾತಕೋತ್ತರ ಪದವೀಧರರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

ಸಮಾರಂಭದಲ್ಲಿ ಕಾಲೇಜು ಆಡಳಿತ ಮಂಡಳಿ ಸದಸ್ಯ ಅನಿಲ್, ಕಾಲೇಜು ಪ್ರಾಂಶುಪಾಲ ಡಾ.ಜಿ.ಟಿ.ರಾಜು,ಎಸ್.ಜೆ.ಸಿ.ಐ.ಟಿ ಆಡಳಿತ ಅಧಿಕಾರಿ ಜಿ.ಆರ್. ರಂಗಸ್ವಾಮಿ , ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ಕಾಲೇಜಿನ ಭೋಧಕ,ಭೋಧಕೇತರ ಸಿಬ್ಬಂಧಿ,ವಿದ್ಯಾರ್ಥಿಗಳು ಇದ್ದರು. ಕಾಲೆಜಿನ ಭೋಧಕ, ಬೋಧಕೇತರ ಸಿಬ್ಬಂಧಿ,ವಿಧ್ಯಾರ್ಥಿಗಳು, ಪೋಷಕರು ಇದ್ದರು.