ಗದಗ: ರೋಗಿಗಳ ಜತೆ ಸದಾಕಾಲ ಇದ್ದು ನಿರಂತರವಾಗಿ ಸೇವೆ ಮಾಡುವ ಶುಶ್ರೂಷಕ(ನರ್ಸ್ಗಳು)ರ ವೃತ್ತಿ ಒಂದು ಪವಿತ್ರ ಸೇವಾ ಕಾರ್ಯವಾಗಿದ್ದು, ಆಸ್ಪತ್ರೆಗಳಿಗೆ ವೈದ್ಯರು ಮೆದುಳಾದರೆ, ಶುಶ್ರೂಷಕರು ಅವುಗಳ ಹೃದಯವಿದ್ದಂತೆ ಎಂದು ರಾಜ್ಯ ಡಿಪ್ಲೊಮಾ ನರ್ಸಿಂಗ್ ಪರೀಕ್ಷಾ ಮಂಡಳಿ ಕಾರ್ಯದರ್ಶಿ ಮಡಿವಾಳಪ್ಪ ನಾಗರಹಳ್ಳಿ ತಿಳಿಸಿದರು. ನಗರದ ಭೀಮಸೇನ ಜೋಶಿ ರಂಗಮಂದಿರದಲ್ಲಿ ಶಕುಂತಲಾ ಪಾಟೀಲ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್ ಹಾಗೂ ಹುಯಿಲಗೋಳ ನಾರಾಯಣರಾವ್ ಪ್ಯಾರಾ ಮೆಡಿಕಲ್ ಕಾಲೇಜುಗಳ ಸಹಯೋಗದಲ್ಲಿ ಜರುಗಿದ ದೀಪ ಬೆಳಗುವ ಹಾಗೂ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಐಎಂಎ ಅಧ್ಯಕ್ಷ ಡಾ. ಶ್ರೀಧರ ಕುರಡಗಿ ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ನರ್ಸ್ಗಳ ಪಾತ್ರ ಅದ್ವಿತೀಯವಾಗಿದ್ದು, ವೈದ್ಯರಿಗಿಂತ ಹೆಚ್ಚು ರೋಗಿಗಳ ಜತೆ ಒಡನಾಟ ಇರಿಸಿಕೊಳ್ಳುವ ಶುಶ್ರೂಷಕರು ನಮ್ಮ ಅನುಪಸ್ಥಿತಿಯಲ್ಲೂ ಕಾರ್ಯ ನಿರ್ವಹಿಸುತ್ತಾ ಆಸ್ಪತ್ರೆಗಳ ಜೀವಾಳವಾಗಿದ್ದಾರೆ.
ಇದು ಕೃತಕ ಬುದ್ಧಿಮತ್ತೆಯ ಯುಗವಾಗಿದ್ದರೂ ಯಾವುದೇ ಎಐ ಒಬ್ಬ ನರ್ಸ್ ಮಾಡುವ ಕೆಲಸ ಮಾಡಲು ಸಾಧ್ಯವಿಲ್ಲ. ನರ್ಸಿಂಗ್ ಹಾಗೂ ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳು ಚೆನ್ನಾಗಿ ವಿದ್ಯಾಭ್ಯಾಸ ಮಾಡುವ ಜತೆಗೆ ತಮ್ಮ ಆರೋಗ್ಯದ ಮೇಲೂ ನಿಗಾ ಇಟ್ಟು ಪೋಷಕಾಂಶ ಕೊರತೆಯಾಗದಂತೆ ಆರೋಗ್ಯಕರ ಜೀವನ ನಡೆಸಬೇಕು ಎಂದರು.ವಿದ್ಯಾದಾನ ಸಮಿತಿ ಕಾರ್ಯದರ್ಶಿ ಶ್ರೀನಿವಾಸ ಹುಯಿಲಗೋಳ ಮಾತನಾಡಿದರು. ಇಎಸ್ಐ ಮೆಡಿಕಲ್ ಅಧಿಕಾರಿ ಡಾ. ಪವನ ಹುಯಿಲಗೋಳ, ಜಿಮ್ಸ್ ಪ್ರಾ. ಶಿವನಗೌಡ ವಿ.ಎಂ., ಡಾ. ಸೋಮಶೇಖರ ಕಲ್ಮಠ, ಪಿ. ಸುರೇಶ, ವಿಶ್ವನಾಥ ಪಾಟೀಲ, ರಂಗನಾಥ ಎಂ.ವಿ., ರಾಮಕೃಷ್ಣ, ಲಲಿತಾ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಬೋಧಕ- ಬೋಧಕೇತರ ಸಿಬ್ಬಂದಿ ಇದ್ದರು. ಉಪನ್ಯಾಸಕಿ ಚೈತ್ರಾ ಎಂ. ಸ್ವಾಗತಿಸಿದರು. ಪಾರ್ವತಿ ಬಹುಮಾನ ವಿತರಣಾ ಕಾರ್ಯಕ್ರಮ ನಡೆಸಿಕೊಟ್ಟರು.ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಣೆ
ನರಗುಂದ: ಸರ್ಕಾರಿ ಶಾಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ಹಾಜರಾತಿ ಕ್ಷೀಣಿಸುತ್ತಿರುವ ಇಂದಿನ ದಿನಮಾನಗಳಲ್ಲಿ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸಬೇಕೆಂದು ಶಿಕ್ಷಕಿ ಎಸ್.ಜಿ. ಕಂಟೆನ್ನವರ ಮನವಿ ಮಾಡಿದರು.ಪಟ್ಟಣದ ನಂ. 2 ಸರ್ಕಾರಿ ಪ್ರಾಥಮಿಕ ಶಾಲೆಯ ಹಿರಿಯ ಶಿಕ್ಷಕರಾದ ಎಸ್.ಜಿ. ಕಂಟೆನ್ನವರ ಅವರು ಶಾಲಾ ಪ್ರಾರಂಬೋತ್ಸವ ಕಾರ್ಯಕ್ರಮದಲ್ಲಿ ತಮ್ಮ ಶಾಲೆಗೆ ಪ್ರವೇಶ ಪಡೆಯುವ ಮಕ್ಕಳಿಗೆ ಉಚಿತವಾಗಿ ಕಲಿಕಾ ಸಾಮಗ್ರಿಗಳನ್ನು ನೀಡಿ ಮಾತನಾಡಿ, ಮಕ್ಕಳನ್ನು ಸರ್ಕಾರಿ ಶಾಲೆಗಳತ್ತ ಆಕರ್ಷಿಸುವ ವಿನೂತನ ಕಾರ್ಯವನ್ನು ಕಳೆದ ಶೈಕ್ಷಣಿಕ ವರ್ಷದಿಂದ ಮಾಡುತ್ತಿದ್ದೇವೆ. ಶಾಲೆಗಳ ಸಬಲೀಕರಣ ಹಾಗೂ ಸರ್ಕಾರಿ ಶಾಲೆಗಳಲ್ಲಿ ಹಾಜರಾತಿ ಹೆಚ್ಚಿಸುವ ಸದುದ್ದೇಶದಿಂದ ಕಳೆದ ವರ್ಷದಿಂದ ನನ್ನ ಸ್ವಂತ ಹಣದಿಂದ ಉಚಿತ ಕಲಿಕಾ ಸಾಮಗ್ರಿಗಳನ್ನು ನೀಡುತ್ತಿದ್ದು, ನಿವೃತ್ತಿಯ ನಂತರವೂ ಈ ಸೇವೆಯನ್ನು ಮುಂದುವರಿಸುತ್ತೇನೆಂದರು.ಶಾಲೆಯ ಮುಖ್ಯ ಶಿಕ್ಷಕಿ ಎಸ್.ಸಿ. ಗಂಗಪ್ಪನವರ ಮಾತನಾಡಿದರು. ಶಿಕ್ಷಕರಾದ ಬಳಿಗೇರ, ರಾಮಕೃಷ್ಣ, ಪ್ರಸನ್ನಕುಮಾರ್ ಪಟ್ಟಣಶೆಟ್ಟಿ, ಶಿಕ್ಷಕಿ ಎಸ್.ವಿ. ಮಂಡಸೊಪ್ಪಿ, ಎಸ್ಡಿಎಂಸಿ ಸದಸ್ಯ ಶರಣಪ್ಪ ಹಡಪದ ಇದ್ದರು.