ಸಾರಾಂಶ
ಕನ್ನಡಪ್ರಭವಾರ್ತೆ ಚಳ್ಳಕೆರೆ
ಛಾಯಾಗ್ರಾಹಕ ವೃತ್ತಿ ಬಗ್ಗೆ ಸಮಾಜದಲ್ಲಿ ವಿಶೇಷ ಗೌರವಿದೆ. ಪ್ರಸ್ತುತ ಘಟನೆಗಳೂ ಸೇರಿದಂತೆ ಹಳೆ ತಲೆಮಾರಿನ ಸಂಗತಿಗಳನ್ನು ಪೋಟೋ ನೋಡುವ ಮೂಲಕ ಮೆಲುಕು ಹಾಕಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ ತಿಳಿಸಿದರು.ಅವರು, ನಗರದ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ತಾಲೂಕು ಛಾಯಾಗ್ರಾಹಕರ ಸಂಘದ 185ನೇ ವಿಶ್ವಛಾಯಾಗ್ರಹಣ ದಿನಾಚರಣೆ ಹಾಗೂ ಛಾಯಾಕುಟುಂಬ ಮಿಲನ ಕಾರ್ಯಕ್ರಮವನ್ನು ಕ್ಯಾಮರ ಕ್ಲಿಕ್ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಹಲವಾರು ವರ್ಷಗಳಿಂದ ಛಾಯಾಗ್ರಾಹಕರ ವೃತ್ತಿಯ ಬಗ್ಗೆ ಮಾಹಿತಿ ಪಡೆದಿರುವೆ. ಬರುವ ಆದಾಯದಲ್ಲೇ ಸಂತೃಪ್ತಿಯ ಬದುಕನ್ನು ನಡೆಸುವುದರಲ್ಲಿ ಛಾಯಾಗ್ರಾಹಕರು ಸದಾ ಮುಂದು. ಛಾಯಾಗ್ರಾಹಕರ ಯಾವುದೇ ಸಮಸ್ಯೆ ಇದ್ದಲ್ಲಿ ನಾನು ಬಗೆಹರಿಸಲು ಸಿದ್ಧ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ನೇತಾಜಿ ಪ್ರಸನ್ನ, ಚಳ್ಳಕೆರೆ ನಗರದಲ್ಲಿ ಸುಮಾರು 100ಕ್ಕೂ ಹೆಚ್ಚು ಕುಟುಂಬಗಳು ಛಾಯಾಗ್ರಹಣೆ ವೃತ್ತಿ ಅವಲಂಬಿಸಿವೆ. ಅನೇಕ ಸಮಸ್ಯೆಗಳ ನಡುವೆಯೂ ಛಾಯಾಗ್ರಾಹಕರು ತಮ್ಮ ವೃತ್ತಿ ಬದುಕು ಮುಂದುವರೆಸಿಕೊಂಡು ಬಂದಿದ್ದಾರೆ ಎಂದು ತಿಳಿಸಿದರು.ಛಾಯಾಗ್ರಾಹಕರ ಸಂಘದ ಚಟುವಟಿಕೆಗಳನ್ನು ಕ್ರಿಯಾಶೀಲವಾಗಿ ನಡೆಸಲು ನಗರದಲ್ಲಿ ನಿವೇಶನ ನೀಡುವುದಲ್ಲದೇ, ಛಾಯಾಭವನ ನಿರ್ಮಿಸಿಕೊಡುವಂತೆ ಸಚಿವರಿಗೆ ಮನವಿ ಮಾಡಿದರು.
ರಾಜ್ಯ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ನಾಗೇಶ್ ಮಾತನಾಡಿ, ಛಾಯಾಗ್ರಹಣ ವೃತ್ತಿ ವಿಶೇಷ ಮಹತ್ವ ಪಡೆದುಕೊಂಡಿದೆ. ಕಳೆದ ಹಲವಾರು ವರ್ಷಗಳ ಹಿಂದೆ ನಡೆದ ವಿಷಯವನ್ನು ಛಾಯಾಗ್ರಹಣದ ಮೂಲಕ ಸೆರೆಹಿಡಿದು ಜನರಿಗೆ ತಲುಪಿಸುವ ಕೆಲಸವನ್ನು ಮಾಡಲಾಗುತ್ತಿದೆ. ವಿಶೇಷವಾಗಿ ಈ ವೃತ್ತಿಯನ್ನು ಎಲ್ಲರೂ ಗೌರವಿಸುತ್ತಾರೆ. ಛಾಯಾಗ್ರಾಹಕರ ಸಮಸ್ಯೆ ನಿವಾರಣೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಕ್ಷೇತ್ರದ ಶಾಸಕರು ಗಮನಹರಿಸುವಂತೆ ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯದರ್ಶಿ ಮುರುಳಿ, ಉಮಾಶಂಕರ್, ಜಿಲ್ಲಾ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಸೈಯದ್ ರಹಮತ್ವುಲ್ಲಾ, ಪ್ರಧಾನ ಕಾರ್ಯದರ್ಶಿ ನಾಗಣ್ಣ, ಖಜಾಂಚಿ ಕುಮಾರ್, ಹಿರಿಯ ಛಾಯಾಗ್ರಾಹಕರಾದ ಪಿ. ರವೀಂದ್ರನಾಥ, ಭವಾನಿಶಂಕರ ಮುಂತಾದವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಾಸಕ ಟಿ. ರಘುಮೂರ್ತಿ ಮಾತನಾಡಿ, ತಾಲೂಕು ಛಾಯಾಗ್ರಾಹಕರ ಸಂಘಕ್ಕೆ ನಿವೇಶನ, ಛಾಯಾಭವನ ನಿರ್ಮಾಣಕ್ಕೆ ಮನವಿ ಸಲ್ಲಿಸಿದ್ದೀರಿ, ನಗರಸಭೆ ಆಡಳಿತದೊಂದಿಗೆ ಚರ್ಚಿಸಿ ಛಾಯಾಭವನ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು.ಇಂದು ಛಾಯಾಗ್ರಹಣ ಎಲ್ಲೆಡೆ ವ್ಯಾಪಿಸಿದೆ. ಯಾವುದೇ ಕಾರ್ಯಕ್ರಮವಾಗಲಿ, ಅಲ್ಲಿ ಛಾಯಾಗ್ರಾಹಕರು ಬೇಕಾಗುತ್ತಾರೆ. ಯಾವ ವ್ಯಕ್ತಿ ವೃತ್ತಿಯನ್ನು ಗೌರವಿಸುತ್ತಾನೋ ಅವನು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಛಾಯಾಗ್ರಾಹಕರ ಯಾವುದೇ ಸಮಸ್ಯೆಗಳಿದ್ದರೂ ಪರಸ್ವರ ಚರ್ಚಿಸಿ ಬಗೆಹರಿಸುತ್ತೇನೆ ಎಂದರು.
ಉಪಾಧ್ಯಕ್ಷ ವೈ. ಜಯಕುಮಾರ್, ಪ್ರಧಾನ ಕಾರ್ಯದರ್ಶಿ ಟಿ.ಆರ್. ಚಂದ್ರಶೇಖರ್, ಖಜಾಂಚಿ ಅಜಯ್, ಸಂಘಟನಾ ಕಾರ್ಯದರ್ಶಿ ಪಿಎಸ್ಆರ್ ಪಟೇಲ್, ನಿರ್ದೇಶಕ ಕೆ. ಮೃತ್ಯುಂಜಯ, ಶ್ರೀನಿವಾಸಲು, ರಘು, ಭಾನುವೀರೇಶ್, ಅಶೋಕ್, ವೆಂಕಟೇಶ್, ನಾಗರಾಜಗೌಡ, ಚೌಧರಿ, ಶಶಿ, ಶಿವು ಮುಂತಾದವರು ಉಪಸ್ಥಿತರಿದ್ದರು.