೨೦೧೭ರಿಂದ ಕುಂಟುತ್ತ ಆಮೆಗತಿಯಲ್ಲಿ ಸಾಗುತ್ತಿದ್ದ ತಾಲೂಕಿನ ಮಹಿಷವಾಡಗಿ ಸೇತುವೆ ಕಾರ್ಯ ವಿರೋಧಿಸಿ ವಾರದ ಹಿಂದೆ ನಡೆಸಿದ ಉಪವಾಸ ಸತ್ಯಾಗ್ರಹ ವೇದಿಕೆಯಲ್ಲೇ ಭರವಸೆ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಭರವಸೆ ಹುಸಿಯಾಯಿತೇ? ಎಂಬ ಪ್ರಶ್ನೆ ಇಲ್ಲಿನ ನಾಗರಿಕರನ್ನು ಬಲವಾಗಿ ಕಾಡುತ್ತಿದೆ.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
೨೦೧೭ರಿಂದ ಕುಂಟುತ್ತ ಆಮೆಗತಿಯಲ್ಲಿ ಸಾಗುತ್ತಿದ್ದ ತಾಲೂಕಿನ ಮಹಿಷವಾಡಗಿ ಸೇತುವೆ ಕಾರ್ಯ ವಿರೋಧಿಸಿ ವಾರದ ಹಿಂದೆ ನಡೆಸಿದ ಉಪವಾಸ ಸತ್ಯಾಗ್ರಹ ವೇದಿಕೆಯಲ್ಲೇ ಭರವಸೆ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಭರವಸೆ ಹುಸಿಯಾಯಿತೇ? ಎಂಬ ಪ್ರಶ್ನೆ ಇಲ್ಲಿನ ನಾಗರಿಕರನ್ನು ಬಲವಾಗಿ ಕಾಡುತ್ತಿದೆ.ಅಣ್ಣಾ (ಶಾಸಕ ಸವದಿ), ಅಕ್ಕಾ (ವಿ.ಪ. ಸದಸ್ಯೆ ಡಾ.ಉಮಾಶ್ರೀ) ರಬಕವಿ-ಮಹಿಷವಾಡಗಿ ಸೇತುವೆ ಕಾಮಗಾರಿ ಬಗ್ಗೆ ಇದೂವರೆಗೆ ನನ್ನ ಗಮನಕ್ಕೆ ತಾರದ್ದರಿಂದ ಮತ್ತು ಅವರ ಅಧಿಕಾರವಧಿಯಲ್ಲಿ ಇದುವರೆಗೆ ಏನು ಮಾಡಿದ್ದಾರೋ ನನಗೆ ಗೊತ್ತಿಲ್ಲ. ಇನ್ನು ಕೇವಲ ಮೂರು ದಿನಗಳೊಳಗಾಗಿ ಕಾಮಗಾರಿ ಪ್ರಾರಂಭಿಸುವುದಾಗಿ ಮತ್ತು ನಿರಂತರ ಕಾಮಗಾರಿ ನಡೆಸಿ ಪೂರ್ಣಗೊಳಿಸುವುದಾಗಿ ವೇದಿಕೆಯಲ್ಲೇ ಭರವಸೆ ನೀಡಿ ಸತ್ಯಾಗ್ರಹಿಗಳಿಗೆ ತಂಪು ಪಾನೀಯ ಕುಡಿಸಿ ೫ ದಿನಗಳ ಸತ್ಯಾಗ್ರಹಕ್ಕೆ ಅಂತ್ಯ ನೀಡಿದ್ದರು.
ಸಚಿವರ ಭರವಸೆ ನಂಬಿ ಡಾ.ರವಿ ಜಮಖಂಡಿ, ಶಂಕರ ಸೊರಗಾಂವಿ, ಬಾಪೂರೆ ನೇತೃತ್ವದಲ್ಲಿ ನಡೆದ ಉಪವಾಸ ಸತ್ಯಾಗ್ರಹ ಹಿಂಪಡೆದು ಬರೋಬ್ಬರಿ ೧೨ ದಿನಗಳೇ ಕಳೆದಿವೆ. ಮೂರೇ ದಿನದಲ್ಲಿ ಕಾಮಗಾರಿ ಪ್ರಾರಂಭಿಸುವುದಾಗಿ ಅಧಿಕಾರಿಗಳಿಗೆ ಖಡಕ್ ತಾಕೀತು ಮಾಡಿದ್ದ ಸಚಿವ, ಶಾಸಕರು ಮತ್ತೆ ಮೌನಕ್ಕೆ ಜಾರಿದ್ದು ಜನರಲ್ಲಿ ಸಂಶಯಕ್ಕೆ ಕಾರಣವಾಗಿದೆ.೨೦೨೭ರಲ್ಲಿ ಸೇತುವೆ ಕಾಮಗಾರಿ ಮುಕ್ತಾಯಗೊಳಿಸುವ ಭರವಸೆ ನೀಡಿರುವ ಜನಪ್ರತಿನಿಧಿಗಳು ಈ ಕೂಡಲೇ ಕಾಮಗಾರಿಗೆ ವೇಗ ನೀಡಬೇಕಾದ ಅನಿವಾರ್ಯತೆಯಿದೆ.
- ಚಿದಾನಂದ ಸೊಲ್ಲಾಪುರ ಸಾಮಾಜಿಕ ಕಾರ್ಯಕರ್ತರು ರಬಕವಿ