ಸಾರಾಂಶ
ತುರ್ವಿಹಾಳ ಪಟ್ಟಣದ 11ನೇ ವಾರ್ಡಿನ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ನಿರ್ಮಿಸಲು ಆಗ್ರಹಿಸಿ ಜನರು ಪಪಂಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ತುರ್ವಿಹಾಳ: ಪಟ್ಟಣದ 11ನೇ ವಾರ್ಡಿನ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ನಿರ್ಮಿಸಿ ಎಂದು ಸಾರ್ವಜನಿಕರು ಸೋಮವಾರ ಪಪಂಗೆ ಮುತ್ತಿಗೆ ಹಾಕಿ ಪ್ರತಿಭಟಿಸಿ ನಂತರ ಮುಖ್ಯಾಧಿಕಾರಿ ಪ್ರಸನ್ನ ಎ.ಕಲ್ಯಾಣಶೆಟ್ಟಿ ಅವರಿಗೆ ಮನವಿಪತ್ರ ಸಲ್ಲಿಸಿದರು.
ಪಪಂ 11ನೇ ವಾರ್ಡಿನಲ್ಲಿ ಬರುವ ಸರ್ವೇ ನಂ.329ರಲ್ಲಿ 5.35 ಎಕರೆ ಜಮೀನು ಎನ್.ಎ ಆಗಿರುತ್ತದೆ. ವಸತಿ ವಿನ್ಯಾಸದ ಪ್ರಕಾರ ಜನರು ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಸರ್ಕಾರದಿಂದಲೂ ಸಿಸಿ ರಸ್ತೆ, ಚರಂಡಿಗಳನ್ನು ನಿರ್ಮಿಸಿದ್ದಾರೆ. ಆದರೆ ಅವರಿಗೆ ಮುಖ್ಯ ರಸ್ತೆಗೆ ಸೇರುವುದಕ್ಕೆ ಸರಿಯಾದ ರಸ್ತೆ ಇಲ್ಲದೇ ತೊಂದರೆಗೆ ಸಿಲುಕಿದ್ದಾರೆ.ಮೊದಲು ಮುಖ್ಯರಸ್ತೆಯ ಪಕ್ಕದ ವಸತಿ ವಿನ್ಯಾಸದ ರಸ್ತೆಯಿಂದ ಮುಂದಿನ ನಮ್ಮ ವಸತಿ ವಿನ್ಯಾಸಕ್ಕೆ ಹೋಗುತ್ತಿದ್ದೇವು, ಈಗ ಆ ರಸ್ತೆಗಳು ಇಲ್ಲದಾಗಿವೆ. ಇದರಿಂದಾಗಿ ನಮ್ಮ ಮನೆಗಳಿಗೆ ತೆರಳು ಸಮಸ್ಯೆಯಾಗಿದೆ. ಮನೆಯ ಮುಂದಿನ ಚರಂಡಿ ನೀರು ಹರಿಯಲು ಅವಕಾಶವಿಲ್ಲದೆ ತುಂಬಿಕೊಂಡು ಪರಿಸರ ಕಲುಷಿತಗೊಂಡಿದೆ. ಮಕ್ಕಳು ಅನಾರೋಗ್ಯ ಭೀತಿಯಿಂದ ಬಳಲುವಂತಾಗಿದೆ. ಈ ಸಮಸ್ಯೆ ಪರಿಹಾರಕ್ಕಾಗಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಸಮಸ್ಯೆ ಪರಿಹರಿಸಿ ಇಲ್ಲದಿದ್ದರೆ ಪಂಚಾಯ್ತಿ ಮುಂದೆ ಉಗ್ರ ಹೋರಾಟ ನಡೆಸಲಾಗುವುದು ಎಚ್ಚರಿಸಿದರು.
ಈ ವೇಳೆ ಬಸವರಾಜ, ಷಡಾಕ್ಷರಯ್ಯ ಸ್ವಾಮಿ, ವಿಶ್ವನಾಥ, ವೀರೇಶ, ಮಹ್ಮದ್ ಹನೀಫ್, ಕನಕರಾಯ, ಹಾಜಿಸಾಬ್, ಮಲ್ಲಯ್ಯ, ಮಂಜುನಾಥ, ಶರಣಪ್ಪ, ದುರ್ಗಾಪ್ರಶಾದ, ಮುನಿಸ್ವಾಮಿ, ಅಯ್ಯಣ್ಣ, ಪಂಪಣ್ಣ, ಮುನ್ನಾ, ರಾಚಯ್ಯ, ಮಂಜುನಾಥ ಇತರರು ಭಾಗವಹಿಸಿದ್ದರು.