ವಿಶ್ವದಲ್ಲಿ ಎಲ್ಲ ಧರ್ಮಗಳ ಶರಣರು, ಸೂಫಿ ಸಂತರು, ದಾರ್ಶನಿಕರು ಶಾಂತಿ ಸಂದೇಶ ಸಾರುವ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಪಿ.ಟಿ. ಪರಮೇಶ್ವರ ನಾಯ್ಕ ಹೇಳಿದರು.
ಹೂವಿನಹಡಗಲಿ: ವಿಶ್ವದಲ್ಲಿ ಎಲ್ಲ ಧರ್ಮಗಳ ಶರಣರು, ಸೂಫಿ ಸಂತರು, ದಾರ್ಶನಿಕರು ಶಾಂತಿ ಸಂದೇಶ ಸಾರುವ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಪಿ.ಟಿ. ಪರಮೇಶ್ವರ ನಾಯ್ಕ ಹೇಳಿದರು.
ಇಲ್ಲಿನ ರಾಜಾಬಾಗ್ ಸವಾರ ದರ್ಗಾ ಆವರಣದಲ್ಲಿ ಈದ್ ಮಿಲಾದ್ ಸಮಿತಿಯು ಮೊಹಮದ್ ಪೈಗಂಬರ್ ಅವರ 1501ನೇ ಜನ್ಮ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ, ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಮೊಹಮ್ಮದ ಪೈಗಂಬರ್, ವಿಶ್ವ ಗುರು ಬಸವಣ್ಣ, ಬುದ್ಧ, ಮಹಾವೀರ, ಏಸುಕ್ರಿಸ್ತ್ರ ಸೇರಿದಂತೆ ಎಲ್ಲ ಧಾರ್ಮಿಕ ದಾರ್ಶನಿಕರು, ಸಮಾಜಕ್ಕೆ ಬೆಲೆ ಕಟ್ಟಲಾಗದಷ್ಟು ಕೊಡುಗೆಗಳನ್ನು ನೀಡಿದ್ದಾರೆ, ಉತ್ತಮ ಸಂದೇಶ ಸಾರುವ ಜತೆಗೆ, ಪರಸ್ಪರವಾಗಿ ಸೌಹಾರ್ದದಿಂದ ಬಾಳಿ ಬದುಕನ್ನು ಕಲಿಸಿದ್ದಾರೆ. ಅವರ ತತ್ವಾದರ್ಶಗಳನ್ನು ಮೈಗೊಡಿಸಿಕೊಳ್ಳಬೇಕು ಎಂದು ಹೇಳಿದರು.ನಾನು ಶಾಸಕನಾಗಿ ಸಚಿವನಾಗಿದ್ದ ಸಂದರ್ಭದಲ್ಲಿ ಇಡೀ ಕ್ಷೇತ್ರದ ಮಸೀದಿಗಳ ನಿರ್ಮಾಣ ಮತ್ತು ಅಭಿವೃದ್ಧಿ ಮಾಡಿದ್ದೇನೆ. ಪಟ್ಟಣದಲ್ಲಿ ಮುಸ್ಲಿಂ ಸಮಾಜದವರು ಕಲ್ಯಾಣ ಕಾರ್ಯಗಳನ್ನು ನಡೆಸಲು ಶಾದಿಮಹಲ್ ಮರು ನಿರ್ಮಾಣ ಮಾಡಿದ್ದೇವೆ. ಮುಸ್ಲಿಂ ಸಮಾಜದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ನಡೆಯುವುದು ಬಹಳ ವಿರಳ. ಆದರೂ ಯುವಕರು ಈದ್ ಮಿಲಾದ್ ಸಮಿತಿ ರಚಿಸಿಕೊಂಡು ಕಳೆದ 2 ವರ್ಷದಿಂದ ಸಾಮೂಹಿಕ ವಿವಾಹ ಆಯೋಜಿಸುತ್ತಿರುವುದು ಉತ್ತಮ ಬೆಳವಣಿಗೆ. ಇಂತಹ ಕಾರ್ಯಕ್ರಮ ಬಡ ಕುಟುಂಬಗಳಿಗೆ ಸಾಕಷ್ಟು ಅನುಕೂಲವಾಗಿದೆ. ನೂತನ ದಂಪತಿಗಳ ಭವಿಷ್ಯದ ಬದುಕು ಉತ್ತಮವಾಗಿರಲಿ. ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ, ಸಂಸ್ಕೃತಿಯನ್ನು ಕಲಿಸಿ ಉತ್ತಮ ನಾಗರಿಕರನ್ನಾಗಿ ಮಾಡಬೇಕು ಎಂದು ಹೇಳಿದರು.
ಈದ್ ಮಿಲಾದ್ ಸಮಿತಿ ಅಧ್ಯಕ್ಷ ಬಾವಿಹಳ್ಳಿ ಸದ್ದಾಂ ಹುಸೇನ್ ಅಧ್ಯಕ್ಷತೆ ವಹಿಸಿದ್ದರು. ಎಸ್ಎಸ್ಎಫ್ ರಾಜ್ಯಾಧ್ಯಕ್ಷ ಮೊಹಮ್ಮದ್ ಸುಫಿಯಾನ್ ಸಖಾಫಿ, ಮುಖಂಡ ಕಾಗದದ ಗೌಸ್ ಮಾತನಾಡಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಟವಾಳಗಿ ಕೊಟ್ರೇಶ, ಗ್ಯಾರಂಟಿ ಸಮಿತಿ ಜಿಲ್ಲಾ ಉಪಾಧ್ಯಕ್ಷ ಕೆ.ಎಸ್. ಶಾಂತನಗೌಡ, ಪಟ್ಟಣದ ದೈವದ 6 ದೈವಗಳ ಪದಾಧಿಕಾರಿಗಳು, ಈದ್ ಮಿಲಾದ್ ಸಮಿತಿ ಸದಸ್ಯರು ಸೇರಿದಂತೆ ಇತರರಿದ್ದರು. ಈ ವೇಳೆ 11 ಮುಸ್ಲಿಂ ಜೋಡಿಗಳು ನವ ಜೀವನಕ್ಕೆ ಕಾಲಿಟ್ಟರು.