ಸಾರಾಂಶ
ಉಡುಪಿ ಜಿಲ್ಲೆಯ ತೊಟ್ಟಂ ಚರ್ಚ್ ಸಭಾಂಗಣದಲ್ಲಿ ಗುರುವಾರ ಶ್ರೀ ಸಾಮಾನ್ಯ, ಕಾರ್ಮಿಕ ಹಾಗೂ ವಲಸೆ ಕಾರ್ಮಿಕರ ಆಯೋಗ ಜಂಟಿಯಾ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಆಯೋಜಿಸಿತ್ತು.
ಕನ್ನಡಪ್ರಭ ವಾರ್ತೆ ಮಲ್ಪೆ
ಕಾರ್ಮಿಕರ ಘನತೆ ಮತ್ತು ಗೌರವ ಗುರುತಿಸುವುದು ಕಾರ್ಮಿಕ ದಿನಾಚರಣೆಯ ಮೂಲ ಉದ್ದೇಶ ಎಂದು ತೊಟ್ಟಂ ಸಂತ ಅನ್ನಮ್ಮ ಚರ್ಚ್ ಧರ್ಮಗುರು ವಂ.ಡೆನಿಸ್ ಡೇಸಾ ಹೇಳಿದ್ದಾರೆ.ಗುರುವಾರ ತೊಟ್ಟಂ ಚರ್ಚ್ ಸಭಾಂಗಣದಲ್ಲಿ ಶ್ರೀ ಸಾಮಾನ್ಯ, ಕಾರ್ಮಿಕ ಹಾಗೂ ವಲಸೆ ಕಾರ್ಮಿಕರ ಆಯೋಗ ಜಂಟಿಯಾಗಿ ಆಯೋಜಿಸಿದ್ದ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಪ್ರತಿ ವ್ಯಕ್ತಿ ಮಾಡುವ ಕೆಲಸವೂ ಪವಿತ್ರವಾದುದ್ದಾಗಿದ್ದು ಅವರಿಗ ಸೂಕ್ತ ವೇತನ ಪಡೆಯುವ ಹಕ್ಕು ಹೊಂದಿರುತ್ತಾರೆ. ರೊಬೊಟಿಕ್ ಯುಗದಲ್ಲಿ ಮನುಷ್ಯನಲ್ಲಿ ಆಲಸ್ಯತನ ಕಂಡುಬರುತ್ತಿದ್ದು ತಾನೇ ದೇವರು ಎನ್ನುವ ಹಂತಕ್ಕೆ ತಲುಪಿರುವುದು ಅಪಾಯಕಾರಿಯಾಗಿದೆ. ಯಾವುದೇ ರೀತಿಯ ಕೃತಕ ಬುದ್ಧಿಮತ್ತೆ ಜಗತ್ತಿನಲ್ಲಿ ಬಂದರೂ ಕೂಡ ಅದನ್ನು ನಿರ್ಮಾಣ ಮಾಡಿರುವುದು ಮನುಷ್ಯ ಎನ್ನುವುದನ್ನು ಮರೆಯಬಾರದು ಆದ್ದರಿಂದ ಕೆಳಹಂತದ ಕಾರ್ಮಿಕನಿಂದ ಹಿಡಿದು ಮೇಲ್ವರ್ಗದ ಕಾರ್ಮಿಕನೂ ಕೂಡ ಸಮಾನ ಗೌರವಕ್ಕೆ ಅರ್ಹರಾಗಿದ್ದಾರೆ ಎಂದರು.ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ ಇದರ ಸದಸ್ಯ ಕಾರ್ಯದರ್ಶಿ ಪಿ ಆರ್ ಯೋಗೀಶ್ ಕಾರ್ಯಕ್ರಮ ಉದ್ಘಾಟಿಸಿ ಕಾನೂನು ಸೇವೆಗಳ ಪ್ರಾಧಿಕಾರದ ಸೇವೆಯ ಮಾಹಿತಿ ನೀಡಿದರು.ಜಿಲ್ಲಾ ಕಾರ್ಮಿಕ ಅಧಿಕಾರಿ ಅಲ್ಥಾಫ್ ಅಹ್ಮದ್ ಇಲಾಖೆಯ ವತಿಯಿಂದ ಕಟ್ಟಡ ಕಾರ್ಮಿಕರಿಗೆ ಲಭಿಸುವ ವಿವಿಧ ಯೋಜನೆಗಳ ಮಾಹಿತಿ ನೀಡಿದರು.ಉದ್ಯಮಿ ಡ್ಯೂರೋಟಾಪ್ ಕನ್ಸ್ಟ್ರ ಕ್ಷನ್ ಉಡುಪಿ ಇದರ ನಿರ್ದೇಶಕ ಆಲ್ವಿನ್ ಕ್ವಾಡ್ರಸ್ ಸ್ವ ಉದ್ಯೋಗದ ಕುರಿತು ವಿವರಣೆ ನೀಡಿದರು.ಕುಂದಾಪುರ ವಿಭಾಗ ಕಾರ್ಮಿಕ ನೀರಿಕ್ಷಕ ವಿಜೇಂದ್ರ ಕೆ, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಸುನೀಲ್ ಫರ್ನಾಂಡಿಸ್, ಕಾರ್ಯದರ್ಶಿ ಬ್ಲೆಸಿಲ್ಲಾ ಕ್ರಾಸ್ತಾ, 20 ಆಯೋಗಗಳ ಸಂಯೋಜಕಿ ವನಿತಾ ಫರ್ನಾಂಡಿಸ್, ಕಾನ್ವೆಂಟಿನ ಮುಖ್ಯಸ್ಥ ಸಿಸ್ಟರ್ ಸುಶ್ಮಾ ಹಾಗೂ ಇತರರು ಉಪಸ್ಥಿತರಿದ್ದರು.ವೀಣಾ ಫರ್ನಾಂಡಿಸ್ ಸ್ವಾಗತಿಸಿದರು. ವಿಕ್ಟರ್ ಮಿನೇಜಸ್ ವಂದಿಸಿದರು. ಶಾಂತಿ ಪಿಕಾರ್ಡೊ ಕಾರ್ಯಕ್ರಮ ನಿರೂಪಿಸಿದರು.