ಮಠದ ಕೇರಿಯಲ್ಲಿ ಇರುವ ರಾಘವೇಂದ್ರ ಸ್ವಾಮಿಗಳ ಮಠಕ್ಕೆ 273 ವರ್ಷ!

| Published : Aug 10 2025, 01:33 AM IST

ಸಾರಾಂಶ

ಪಟ್ಟಣದ ಮಠದ ಕೇರಿಯಲ್ಲಿ ಇರುವ ರಾಘವೇಂದ್ರ ಸ್ವಾಮಿಗಳ ಮಠ 1752ರಲ್ಲಿ ಸ್ಥಾಪನೆಯಾಗಿದ್ದು, ನಾಳೆ ಭಾನುವಾರ (ಆ.10)ಕ್ಕೆ ಬರೋಬ್ಬರಿ 273 ವರ್ಷ ತುಂಬುತ್ತಿವೆ. ಈ ಹಿನ್ನಲೆಯಲ್ಲಿ ಆ.10 ರಿಂದ 12ರ ವರೆಗೆ ರಾಯರ ಆರಾಧನೆ ಭಕ್ತಿ ಶ್ರದ್ಧೆಯಿಂದ ಜರುಗಲಿದೆ.

ಆ.10 ರಿಂದ 12ರ ವರೆಗೆ ರಾಯರ ಆರಾಧನೆ ಭಕ್ತಿ ಶ್ರದ್ಧೆಯಿಂದ ಜರುಗಲಿದೆ.

ಬಿ. ರಾಮಪ್ರಸಾದ್ ಗಾಂಧಿ ಕನ್ನಡಪ್ರಭ ವಾರ್ತೆ ಹರಪನಹಳ್ಳಿ

ಪಟ್ಟಣದ ಮಠದ ಕೇರಿಯಲ್ಲಿ ಇರುವ ರಾಘವೇಂದ್ರ ಸ್ವಾಮಿಗಳ ಮಠ 1752ರಲ್ಲಿ ಸ್ಥಾಪನೆಯಾಗಿದ್ದು, ನಾಳೆ ಭಾನುವಾರ (ಆ.10)ಕ್ಕೆ ಬರೋಬ್ಬರಿ 273 ವರ್ಷ ತುಂಬುತ್ತಿವೆ. ಈ ಹಿನ್ನಲೆಯಲ್ಲಿ ಆ.10 ರಿಂದ 12ರ ವರೆಗೆ ರಾಯರ ಆರಾಧನೆ ಭಕ್ತಿ ಶ್ರದ್ಧೆಯಿಂದ ಜರುಗಲಿದೆ.

ಪ್ರತಿದಿನ ಬೆಳಗ್ಗೆ 6.30ರಿಂದ 8.30ರವರೆಗೆ ಅಷ್ಟೋತ್ತರ, 8.30ರಿಂದ ಪಂಚಾಮೃತ ಅಭಿಷೇಕ ಸಂಜೆ 5.30ರಿಂದ 9ಗಂಟೆವರೆಗೆ ಪಂಚಾಮೃತ ಪ್ರಸಾದ ವಿತರಣೆ ನಡೆಯುತ್ತವೆ. ಆ.11ರಂದು ರಥೋತ್ಸವ ಜರುಗುತ್ತದೆ. ಇದಲ್ಲದೆ ವರ್ಷದುದ್ದಕೂ ನಾಡಿನ ಎಲ್ಲಾ ರಾಯರ ಮಠದಲ್ಲಿ ನಡೆಯುವಂತೆ ಧಾರ್ಮಿಕ ಕಾರ್ಯಕ್ರಮಗಳು ಇಲ್ಲೂ ಜರುಗುತ್ತವೆ. ಆರಾಧನೆಯು ಭಕ್ತಿಯ ಸಂಕೇತವಾಗಿದ್ದು, ಭಕ್ತರ ಜೀವನದಲ್ಲಿ ಶಾಂತಿ, ನೆಮ್ಮದಿ ಮತ್ತು ಸಮೃದ್ಧಿ ತರುತ್ತದೆ ಎಂಬುದು ನಂಬಿಕೆಯಾಗಿದೆ.

ಅಸಂಖ್ಯಾತ ಭಕ್ತರಿಂದ ಆರಾಧಿಸಲ್ಪಡುವ ರಾಘವೇಂದ್ರ ಸ್ವಾಮಿಗಳು 1671 ಶ್ರಾವಣ ಕೃಷ್ಣಪಕ್ಷದ ದ್ವಿತೀಯ ದಿನದಂದು ಮಂತ್ರಾಲಯದಲ್ಲಿ ಬೃಂದಾವನವನ್ನು ಪ್ರವೇಶಿಸಿದರು. ಪ್ರವೇಶಿಸಿದ ದಿನವನ್ನು ಸ್ಮರಿಸುವ ಒಂದು ಹಬ್ಬವೇ ರಾಘವೇಂದ್ರಸ್ವಾಮಿಗಳ ಆರಾಧನೆಯಾಗಿ ಈವರೆಗೂ ನಡೆದುಕೊಂಡು ಬಂದಿದೆ.ರಾಘವೇಂದ್ರ ಸ್ವಾಮಿಗಳ ಆರಾಧನೆಯು ಭಕ್ತರಿಗೆ ಗುರುಗಳ ಅನುಗ್ರಹವನ್ನು ಪಡೆಯಲು ಮತ್ತು ಅವರ ಬೋಧನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಒಂದು ಅವಕಾಶವಾಗಿದೆ. ಹರಪನಹಳ್ಳಿ ಮಠದ ಇತಿಹಾಸ:ರಾಯರ ಮಠದ ಅರ್ಚಕರಾಗಿರುವ ವೆಂಕಣ್ಣಾಚಾರ್ಯರು ಹೇಳುವ ಪ್ರಕಾರ ಹಿಂದಿನ ಕಾಲದಲ್ಲಿ ಹರಪನಹಳ್ಳಿಯಲ್ಲಿ ನರಹರಿ ಕುಟುಂಬಸ್ಥರು ಪ್ರತಿ ವರ್ಷ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ಆರಾಧನೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ನರಹರಿ ಕುಟುಂಬದವರಿಗೆ ವಯಸ್ಸಾದ ನಂತರ ಮತ್ತೆ ಆರಾಧನೆಗೆ ಮಂತ್ರಾಲಯಕ್ಕೆ ಹೋಗಬೇಕು ಎಂದಾಗ ಆ ವರ್ಷದಲ್ಲಿ ನಾಡಿನಲ್ಲಿ ಅತಿಯಾದ ಮಳೆಯಾಗಿ ಹಳ್ಳ-ಕೊಳ್ಳ ತುಂಬಿ ಹರಿದ ಕಾರಣ ಹೋಗಲಾಗದೆ ನರಹರಿ ಕುಟುಂಬದವರು ಬಹಳ ವ್ಯಥೆ ಪಟ್ಟು ಆ ದಿವಸ ಊಟ ಸಹ ಮಾಡದೆ ಉಪವಾಸ ಮಲಗಿದರು. ಬೆಳಗಿನ ಜಾವ ರಾಘವೇಂದ್ರ ಸ್ವಾಮಿಗಳು ಸ್ವಪ್ನದಲ್ಲಿ ಬಂದು ನಿಮ್ಮ ಸೇವೆ ನಮಗೆ ತೃಪ್ತಿ ತಂದಿದೆ. ನೀವು ಮಂತ್ರಾಯಲಕ್ಕೆ ಬರುವ ಅವಶ್ಯಕತೆ ಇಲ್ಲ. ನೀವು ಇದ್ದಲ್ಲಿಗೆ ನಾವೇ ಬರುತ್ತೇವೆ, ಬಂದಿರುವುದರ ಕುರುಹಾಗಿ ನಮ್ಮ ಕೈಯೊಳಗಿನ ದಂಡ (ಕೋಲು) ವನ್ನು ಊರಿ ಹೋಗಿರುತ್ತೇವೆ. ಆ ಸ್ಥಳದಲ್ಲಿಯೇ ಬೃಂದಾವನ ಪ್ರತಿಷ್ಠಾಪನೆ ಮಾಡಿ ಎಂದು ಅಪ್ಪಣೆಯಾಯಿತು.ಬೆಳಕು ಹರಿದ ನಂತರ ಊರಿನ ಮುಖಂಡರ ಜೊತೆ ಹೋಗಿ ಮಠದ ಕೇರಿಯ ಸುತ್ತ ನೋಡಿದಾಗ ಈಗ ಇರುವ ಮಠದ ಬಳಿ ದಂಡ ಕಂಡು ಬಂದಿದೆ. ಆಗ ಊರಿನ ಮುಖಂಡರು ಮಳೆ ನಿಂತು ಎಲ್ಲಾ ಸರಿಹೋದ ನಂತರ ಮಂತ್ರಾಯಲಕ್ಕೆ ತೆರಳಿ ಆಗ ಅಲ್ಲಿ ಪೀಠಾಧಿಪತಿಯಾಗಿದ್ದ ವಸುದೇಂದ್ರ ತೀರ್ಥರ ಆಶೀರ್ವಾದದೊಂದಿಗೆ ಮೂಲ ಬೃಂದಾವನದ ಮೃತ್ತಿಕೆಯನ್ನು ತಂದು ಹರಪನಹಳ್ಳಿಯಲ್ಲಿ ರಾಘವೇಂದ್ರಸ್ವಾಮಿಗಳ ಬೃಂದಾವನವನ್ನು ಪ್ರತಿಷ್ಠಾನೆ ಮಾಡಿದರು ಎಂಬುದು ಇತಿಹಾಸ. ಅಲ್ಲಿಂದ ಈವರೆಗೂ ಇಲ್ಲಿಯ ರಾಯರ ಮಠ ಹಂತ-ಹಂತವಾಗಿ ಜೀರ್ಣೋದ್ದಾರವಾಗುತ್ತಾ ಸಾಗಿ ಪೂರ್ಣ ಪ್ರಮಾಣದ ರಾಘವೇಂದ್ರಸ್ವಾಮಿಗಳ ಮಠವಾಗಿದೆ.ನರಹರಿ ವಂಶಸ್ಥರು ಧರ್ಮಕರ್ತರಾಗಿ, ಅನಂತತೀರ್ಥ ವಂಶಸ್ಥರು ಅರ್ಚಕರಾಗಿ ಈವರೆಗೂ ಗುರು ರಾಯರ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಹಾಲಿ ನರಹರಿ ವಂಶಸ್ಥರಾದ ಎನ್.ಶೇಷಗಿರಿ ಆಚಾರ ಧರ್ಮಕರ್ತರಾಗಿದ್ದು, ಅನಂತತೀರ್ಥ ವಂಶಸ್ಥರಾದ ವೆಂಕಣ್ಣಾಚಾರ್ಯ ಅರ್ಚಕರಾಗಿ ಸೇವೆಗೈಯುತ್ತಿದ್ದಾರೆ. ಮಂತ್ರಾಲಯದ ಪೀಠಾಧಿಪತಿಗಳು ಈ ಮಠಕ್ಕೆ ಆಗಮಿಸಿ ತೆರಳಿದ್ದಾರೆ.