ಸಾರಾಂಶ
ಶಿಗ್ಗಾಂವಿ:ರಾಜ್ಯ ಸರ್ಕಾರದಿಂದ ಶಿಗ್ಗಾಂವಿಗೆ ನೂರು ಕೋಟಿ ರು. ಅನುದಾನ ಬಿಡುಗಡೆ ಮಾಡಿದ್ದೇವೆ ಎಂದು ಕಾಂಗ್ರೆಸಿಗರು ಹಸಿ ಸುಳ್ಳು ಹೇಳಿ ಜನರಿಗೆ ಮೋಸ ಮಾಡಿದ್ದಾರೆ. ನೂರು ಕೋಟಿ ರು. ಬಿಡುಗಡೆ ಮಾಡಿರುವ ದಾಖಲೆ ಇದ್ದರೆ ತೋರಿಸಲಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಪರ ಶಿಗ್ಗಾಂವಿ ತಾಲೂಕಿನ ಹೋತನಹಳ್ಳಿ, ಚಂದಾಪುರ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು. ರಾಜ್ಯ ಕಾಂಗ್ರೆಸ್ ಸರ್ಕಾರ ಜನರ ಮೇಲೆ ದಬ್ಬಾಳಿಕೆ ಮಾಡುತ್ತಿದೆ. ಸಣ್ಣ ಪುಟ್ಟ ವಿಷಯಗಳಿಗೂ ಜನರ ಮೇಲೆ ಕೇಸ್ ಹಾಕಿ ಪೊಲಿಸ್ ಸ್ಟೇಶನ್ಗೆ ಅಲೆದಾಡುವಂತೆ ಮಾಡುತ್ತಿದ್ದಾರೆ. ಪಿಎಸ್ಐಗಳು ಕೊಬ್ಬಿದ್ದಾರೆ. ದಬ್ಬಾಳಿಕೆ ಮಾಡುವ ಸರ್ಕಾರದ ವಿರುದ್ಧ ಎಲ್ಲರೂ ನಿಲ್ಲಬೇಕು. ನಾನು ಸದಾ ನಿಮ್ಮ ಜತೆಗೆ ಇರುತ್ತೇನೆ. ನಿಮ್ಮ ಕೂದಲು ಕೊಂಕದ ಹಾಗೆ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.ಶಿಗ್ಗಾಂವಿ ಕ್ಷೇತ್ರದಲ್ಲಿ ಯಾವುದೇ ರೀತಿಯ ಗಲಭೆಗಳು ಆಗಿರಲಿಲ್ಲ. ನಮ್ಮ ನಮ್ಮ ನಡುವೆಯೇ ಮಾತುಕತೆ ಮಾಡಿಕೊಂಡು ಸಮಸ್ಯೆ ಬಗೆಹರಿಸಿಕೊಂಡು ಬರುತ್ತಿದ್ದೇವು. ಈಗ ಪ್ರತಿಯೊಂದಕ್ಕೂ ಪೊಲೀಸ್ ಸ್ಟೇಶನ್ಗೆ ಹೋಗಬೇಕು. ಅಲ್ಲಿ ಇಬ್ಬರೂ ದುಡ್ಡು ಕಳೆದುಕೊಳ್ಳುವಂತಾಗಿದೆ. ಈ ಕ್ಷೇತ್ರದಲ್ಲಿ ಗೂಂಡಾ ಸಂಸ್ಕೃತಿ ಪೊಲೀಸ್ ಸ್ಟೇಶನ್ ರಾಜಕೀಯಕ್ಕೆ ಅವಕಾಶ ನೀಡದೇ ಭರತ್ ಬೊಮ್ಮಾಯಿ ಅವರನ್ನು ಗೆಲ್ಲಿಸಿಕೊಂಡು ಬರಬೇಕು ಎಂದರು.ಅಭಿವೃದ್ಧಿ ನಿರಂತರ:ಕಳೆದ ಹದಿನೈದು ವರ್ಷದಲ್ಲಿ ಅತಿ ಹಿಂದುಳಿದ ತಾಲೂಕು ಆಗಿದ್ದ ಶಿಗ್ಗಾಂವಿಯನ್ನು ಒಂದು ಹಳಿಗೆ ತಂದಿದ್ದೇವೆ. ಅಭಿವೃದ್ಧಿ ಪಥ ನಿರಂತರವಾಗಿ ಮುಂದುವರೆಯಬೇಕು. ಇಲ್ಲದಿದ್ದರೆ ಮತ್ತೆ ಹಿಂದುಳಿಯುತ್ತೇವೆ. ಅಭಿವೃದ್ಧಿ ನಿರಂತರವಾಗಬೇಕೆಂದರೆ ಅಭಿವೃದ್ಧಿ ಮಾಡುವ ಪಕ್ಷಕ್ಕೆ ಬೆಂಬಲ ಕೊಡಬೇಕು. ನಾನು ಏನಾದರೂ ಅಭಿವೃದ್ಧಿ ಮಾಡಿದರೆ ಅದರ ಶ್ರೇಯಸ್ಸು ನಿಮಗೆ ಸಲ್ಲುತ್ತದೆ. ನಾನು ಸಿಎಂ ಆಗಿದ್ದಾಗ ನಿಮ್ಮ ಮತಕ್ಕೆ ಚ್ಯುತಿ ಬಾರದಂತೆ ನಡೆದುಕೊಂಡಿದ್ದೇನೆ ಎಂದರು.ನಾನು ಸಿಎಂ ಆಗಿದ್ದಾಗ ರೈತರ ಮಕ್ಕಳು ವಿದ್ಯಾವಂತರಾಗಲಿ ಎಂದು ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಜಾರಿ ಮಾಡಿದ್ದೆ, ಈ ಸರ್ಕಾರ ಅದನ್ನು ನಿಲ್ಲಿಸಿದೆ. ಬರ ಪ್ರವಾಹ ಬಂದಾಗ ನೆರವಿಗೆ ಸರ್ಕಾರ ಬರಬೇಕು. ಮಳೆ ಹೆಚ್ಚಾಗಿ ಮುಂಗಾರು, ಹಿಂಗಾರು ಎರಡೂ ಹಾನಿಯಾಗಿದೆ. ಆದರೆ ಈ ಸರ್ಕಾರ ರೈತರ ನೆರವಿಗೆ ಬರುತ್ತಿಲ್ಲ. ಸಂಕಷ್ಟದ ಸಂದರ್ಭದಲ್ಲಿ ನೆರವಿಗೆ ಬಾರದ ಸರ್ಕಾರ ಇದ್ದೂ ಸತ್ತಂತೆ ಎಂದು ಹೇಳಿದರು.ನಾನು ಸಿಎಂ ಆಗಿದ್ದಾಗ ಪ್ರವಾಹ ಬಂದಾಗ ಎರಡು ಪಟ್ಟು ಪರಿಹಾರ ಕೊಟ್ಟಿದ್ದೇನೆ. ಸಂಪೂರ್ಣ ಮನೆಗಳು ಬಿದ್ದರೆ ಐದು ಲಕ್ಷ ಪರಿಹಾರ ಕೊಟ್ಟಿದ್ದೆ, ಈಗಿನ ಸರ್ಕಾರ ₹96 ಸಾವಿರ ಕೊಡುವುದಾಗಿ ಹೇಳುತ್ತಿದೆ. ಅದನ್ನು ಇನ್ನೂ ಕೊಡುತ್ತಿಲ್ಲ. ನನಗೆ ನಿಮ್ಮೊಡನೆಯ ಒಡನಾಟದಿಂದ ನಿಮ್ಮ ಕಷ್ಟ ಅರಿವಿದೆ. ದೇಶಕ್ಕೆ, ರಾಜ್ಯಕ್ಕೆ ಅಂತಃಕರಣ ಇರುವ ನಾಯಕ ಬೇಕಾಗಿದೆ ಎಂದು ಹೇಳಿದರು. ನನ್ನ ಕೆಲಸಗಳ ಬಗ್ಗೆ ನಾನೇ ಹೇಳುವುದಿಲ್ಲ. ಅವುಗಳನ್ನು ನೀವು ಅನುಭವಿಸಿ ಹೇಳಬೇಕು. ನಾನು ಎಂಪಿ ಆದ ಮೇಲೆ ಈ ಕ್ಷೇತ್ರವನ್ನು ಕಳೆದುಕೊಳ್ಳುತ್ತೇನಾ ಎಂಬ ಆತಂಕ ಇತ್ತು. ಪಕ್ಷದ ಮುಖಂಡರು ಭರತ್ ಬೊಮ್ಮಾಯಿ ಅವರಿಗೆ ಅವಕಾಶ ಕೊಟ್ಟಿದ್ದಾರೆ. ನಿಮ್ಮ ಆಸೆಯಂತೆ ಭರತ್ ಬೊಮ್ಮಾಯಿ ಅಭ್ಯರ್ಥಿಯಾಗಿದ್ದಾರೆ. ಅವರು ಅಭಿವೃದ್ಧಿಯ ಗಾಡಿ ಮುಂದುವರಿಸಿಕೊಂಡು ಹೋಗಬೇಕು. ನಾನು ಈ ಕ್ಷೇತ್ರದ ಶಾಸಕನಾಗಲಿ ಆಗದಿರಲಿ ಸದಾ ನಿಮ್ಮ ಸೇವೆ ಮಾಡಲು ನಿಮ್ಮ ಜತೆಗೆ ಇರುತ್ತೇನೆ. ಬಹುತೇಕ ಗ್ರಾಮಗಳಲ್ಲಿ ಮನೆಗಳ ಬೇಡಿಕೆ ಇದೆ. ನಾವಿದ್ದಾಗ ಮನೆ ನಿರ್ಮಾಣಕ್ಕೆ ಐದು ಲಕ್ಷ ರು. ನೀಡುತ್ತಿದ್ದೇವು. ಈಗ ಈ ಸರ್ಕಾರ ಕಡಿಮೆ ಕೊಡುತ್ತಿದೆ ಎಂದರು. ನಾನು ಎಂಪಿ ಆದ ಮೇಲೆ ಚಂದಾಪುರದಲ್ಲಿ ಬ್ಯಾಂಕ್ ಆರಂಭಿಸಲು ಸೂಚನೆ ನೀಡಿದ್ದೇನೆ. ಅವರು ಈಗಾಗಲೇ ಸಮೀಕ್ಷೆ ಮಾಡಿಕೊಂಡು ಹೋಗಿದ್ದಾರೆ. ಎರಡು ಮೂರು ತಿಂಗಳಲ್ಲಿ ಚಂದಾಪುರದಲ್ಲಿ ಬ್ಯಾಂಕ್ ಆರಂಭಿಸಲಾಗುವುದು. ಮುಂದಿನ ಶೈಕ್ಷಣಿಕ ವರ್ಷದಿಂದ ಕಾಲೇಜು ಆರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.