ಸಾರಾಂಶ
ಕಶ್ಮೀರಿ ಪಂಡಿತ ಸಮುದಾಯಕ್ಕೆ ಸೇರಿದ ಡಾ. ರಾಹುಲ್ ಮೆಗೆಝಿನ್ ಬರೆದ ‘ಆ್ಯಂಡ್ ದಿ ವ್ಯಾಲಿ ರಿಮೈನ್ಡ್ ಸೈಲೆಂಟ್’ ಪುಸ್ತಕದ ಕನ್ನಡ ಅನುವಾದಿತ ಕೃತಿ ‘ಕಣ್ಣೀರ ಕಣಿವೆ - ಕಾಶ್ಮೀರಿ ನೆಲದಲ್ಲಿ ನೆಲೆ ಕಳೆದುಕೊಂಡವರ ಕಥೆ’ ಕೃತಿ ಬಿಡುಗಡೆ ಉಡುಪಿಯಲ್ಲಿ ನೆರವೇರಿತು.
ಕನ್ನಡಪ್ರಭ ವಾರ್ತೆ ಉಡುಪಿ
ಖ್ಯಾತ ಲೇಖಕ, ಕಶ್ಮೀರಿ ಪಂಡಿತ ಸಮುದಾಯಕ್ಕೆ ಸೇರಿದ ಡಾ. ರಾಹುಲ್ ಮೆಗೆಝಿನ್ ಬರೆದ ‘ಆ್ಯಂಡ್ ದಿ ವ್ಯಾಲಿ ರಿಮೈನ್ಡ್ ಸೈಲೆಂಟ್’ ಪುಸ್ತಕದ ಕನ್ನಡ ಅನುವಾದಿತ ಕೃತಿ ‘ಕಣ್ಣೀರ ಕಣಿವೆ - ಕಾಶ್ಮೀರಿ ನೆಲದಲ್ಲಿ ನೆಲೆ ಕಳೆದುಕೊಂಡವರ ಕಥೆ’ ಕೃತಿ ಬಿಡುಗಡೆ ಉಡುಪಿಯಲ್ಲಿ ನೆರವೇರಿತು. ಕೃತಿಯನ್ನು ಕೃಷ್ಣ ಮಠದ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮಂಗಳವಾರ ರಾಜಾಂಗಣದಲ್ಲಿ ಬಿಡುಗಡೆಗೊಳಿಸಿದರು.ಬಳಿಕ ಆರ್ಶೀವಚನ ನೀಡಿದ ಅವರು, ಲೇಖಕ ಡಾ.ರಾಹುಲ್ ಮೆಗೆಝಿನ್ ಸ್ವತಃ ಅನುಭವಿಸಿದ, ಪ್ರತ್ಯಕ್ಷ ಕಂಡಿರುವ, ಕಾಶ್ಮೀರಿ ಮುಸ್ಲಿಂ ಭಯೋತ್ಪಾದಕರು ಹಿಂದುಗಳ ಮೇಲೆ ನಡೆಸಿದ ಬರ್ಬರ ಜನಾಂಗೀಯ ಹತ್ಯೆಯನ್ನು, ಅತ್ಯಾಚಾರಗಳನ್ನು ಪುಸ್ತಕದಲ್ಲಿ ಚಿತ್ರಿಸಿದ್ದಾರೆ. ಇಂತಹ ಸಂಗತಿಗಳನ್ನು ಮಾಧ್ಯಮದವರು ಹೇಳುವುದು ತುಂಬಾ ಕಡಿಮೆ. ಈ ಕಾಶ್ಮೀರಿ ಪಂಡಿತರಿಗೆ ನ್ಯಾಯ ಸಿಗಬೇಕಿದೆ. ಈ ಪುಸ್ತಕವನ್ನು ಎಲ್ಲರೂ ಓದಬೇಕು ಎಂದು ಕರೆ ಕೊಟ್ಟರು.
ಕಿರಿಯ ಶ್ರೀ ಸುಶೀಂದ್ರತೀರ್ಥರು, ಅಯೋಧ್ಯ ಪ್ರಕಾಶನದ ರೋಹಿತ್ ಚಕ್ರತೀರ್ಥ, ಮೂಲಕೃತಿಯ ಲೇಖಕ ಡಾ.ರಾಹುಲ್ ಮೆಗೆಝಿನ್, ಅವರ ತಂದೆ ಡಾ ಮನಮೋಹನ್ ಕಿಶನ್ ಮೆಗೆಝಿನ್ ಇದ್ದರು.ಅನುವಾದಕ ಉದಯ ಕುಮಾರ ಹಬ್ಬು ಪುಸ್ತಕ ಪರಿಚಯಿಸಿದರು. ಡಾ. ಚಿನ್ಮಯಿ ಪೆಡ್ಡಿಸೆಟ್ಟಿ ಪ್ರಾರ್ಥಿಸಿದರು. ಡಾ. ಕುಶಾಂತ ಪಿ, ಸ್ವಾಗತಿಸಿದರು. ಡಾ. ಮನೀಷ್ ಆರ್. ಶೆಟ್ಟಿ ವಂದಿಸಿದರು. ಮೇಘನಾ ಭಟ್ ನಿರೂಪಿಸಿದರು.