ಕನ್ನಡಪ್ರಭ ವಾರ್ತೆ ಪಾಂಡವಪುರ
ವಿಶ್ವ ವಿಖ್ಯಾತ ವೈರಮುಡಿ ಬ್ರಹೋತ್ಸವಕ್ಕೆ ಸರ್ಕಾರ ಕಳೆದ ವರ್ಷ ನೀಡಿದ್ದ ಅನುದಾನದ ಉಳಿಕೆ ಮೊತ್ತವನ್ನು ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಲಾಗುತ್ತಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.ತಾಲೂಕಿನ ಹೊಸಕೋಟೆ ಗ್ರಾಮದಲ್ಲಿ ಕೆಆರ್ಐಡಿಎಎಲ್ ನಿರ್ವಹಿಸುತ್ತಿರುವ ಒಂದು ಕೋಟಿ ರು. ವೆಚ್ಚದ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಸರ್ಕಾರ ಕಳೆದ ವರ್ಷದ ವೈರಮುಡಿ ಬ್ರಹೋತ್ಸವಕ್ಕೆ 10 ಕೋಟಿ ರು. ಅನುದಾನ ಬಿಡುಗಡೆ ಮಾಡಿತ್ತು. ಇದರಲ್ಲಿ ಬ್ರಹೋತ್ಸವಕ್ಕೆ 1.5 ಕೋಟಿ ರು. ವೆಚ್ಚ ಮಾಡಿ ಉಳಿಕೆ ಅನುದಾನವನ್ನು ಈ ಭಾಗದ ಜಕ್ಕನಹಳ್ಳಿ, ನಾರಾಯಣಪುರ, ಮಾಣಿಕ್ಯನಹಳ್ಳಿ ಮತ್ತು ಹಳೆಬೀಡು ಗ್ರಾಪಂ ವ್ಯಾಪ್ತಿಗೆ ಸೇರಿದ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿ ಮಾಡಲಾಗುತ್ತಿದೆ. ಸರ್ಕಾರ ಈ ವರ್ಷವೂ ವೈರಮುಡಿ ಬ್ರಹೋತ್ಸವಕ್ಕೆ ಅಗತ್ಯವಿದ್ದ ಅನುದಾನ ಬಿಡುಗಡೆ ಮಾಡಿದೆ ಎಂದು ವಿವರಿಸಿದರು.
ಲಾಟರಿ, ಗಾಂಚಾ ಮಾರಾಟಕ್ಕೆಕಡಿವಾಣ:ತಾಲೂಕಿನಲ್ಲಿ ಅಕ್ರಮವಾಗಿ ಕೇರಳ ರಾಜ್ಯದ ಲಾಟರಿ ಟಿಕೆಟ್, ಗಾಂಜಾ, ಇಸ್ಪೀಟ್, ಪಚ್ಚಿದಂಧೆ ಹೆಚ್ಚಾಗಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಈ ಎಲ್ಲಾ ದಂಧೆಗಳಿಗೆ ಕಡಿವಾಣ ಹಾಕುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಹಲವು ಕಡೆ ದಾಳಿ ನಡೆಸಿ ಆರೋಪಿಗಳ ವಿರುದ್ಧ ಕಾನೂನು ಕ್ರಮಕೈಗೊಂಡಿದ್ದಾರೆ. ಸ್ಥಳೀಯರು ಈ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಈ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಪೊಲೀಸರಿಗೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಕ್ಷೇತ್ರದಲ್ಲಿ ಇಂತಹ ಚಟುವಟಿಕೆಗಳು ನಡೆಯಲು ಅವಕಾಶ ಕೊಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈ ವೇಳೆ ರೈತಸಂಘ ಮುಖಂಡರಾದ ಹೊಸಕೋಟೆ ಸುರೇಶ್, ಎಚ್.ಎನ್.ವಿಜಯಕುಮಾರ್, ಸಿಂಗ್ರೀಗೌಡ, ಹಳೆಬೀಡು ತಿಮ್ಮೇಗೌಡ ಇತರರು ಇದ್ದರು.