ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿರ್ಣಯ ಮಾಡಿದ ಒಳಮೀಸಲಾತಿ, ಅದು ಒಳ ಮೀಸಲಾತಿಯೇ ಅಲ್ಲ. ಒಳ ಮೀಸಲಾತಿಯೆಂದರೆ ಎಷ್ಟೇ ಹುದ್ದೆಗಳಿದ್ದರೂ ಆ ಹುದ್ದೆಗಳಿಗೆ ಅದು ಅನ್ವಯ ಆಗಬೇಕು. ತಾರತಮ್ಯ ಆಗಬಾರದು. ಆದರೆ, ಈ ತಾರತಮ್ಯ ನಿಮ್ಮವರಿಂದಲೇ ಆಗಿದೆ ಎಂದು ಮಾಜಿ ಡಿಸಿಎಂ, ಸಂಸದ ಗೋವಿಂದ ಕಾರಜೋಳ ಗಂಭೀರ ಆರೋಪ ಮಾಡಿದರು.ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಿದ್ದರಾಮಯ್ಯನವರಿಗೆ ಹೇಳಲು ಬಯಸುತ್ತೇನೆ. 15ಕ್ಕೂ ಕಡಿಮೆ ಸೀಟ್ಗಳಿದ್ದರೆ ಅದಕ್ಕೆ ಮೀಸಲಾತಿ ಇಲ್ಲವೆಂದರೆ ಅದು ಯಾವ ಮೀಸಲಾತಿ? ಮೈಸೂರಿನಲ್ಲಿ 47 ಜನ ಎಸ್ಸಿ ಪ್ರೊಫೆಸರ್ಗಳಿದ್ದರು. ಅದರಲ್ಲಿ 43 ಜನ ಒಂದೇ ಜಾತಿಯವರಿದ್ದಾರೆ. ಮೂರು ಜನ ಮಾದಿಗರಿದ್ದಾರೆ. ಒಬ್ಬರು ಭೋವಿ ಜನಾಂಗಕ್ಕೆ ಸೇರಿದವರು. ಇದು ಸಾಮಾಜಿಕ ನ್ಯಾಯವಾ? ಸಿದ್ದರಾಮಯ್ಯನವರೇ ಹೇಳಿ ಎಂದು ಪ್ರಶ್ನೆ ಮಾಡಿದರು.ವೈಜ್ಞಾನಿಕವಾಗಿ ನಾಗಮೋಹನದಾಸ್ ಅವರು ವರದಿಯನ್ನು ಕೊಟ್ಟಿದ್ದರು. ಆದರೆ, ಅದನ್ನು ನೀವು ಅವೈಜ್ಞಾನಿಕ ಎಂದು ಹೇಳಿದಿರಿ. ಮಾಧುಸ್ವಾಮಿ ಅವರ ವರದಿ, ನ್ಯಾಯಮೂರ್ತಿ ಸದಾಶಿವಯ್ಯನವರ ವರದಿ ಇವೆಲ್ಲವೂ ಅವೈಜ್ಞಾನಿಕ ಅಂತ ನೀವು ಘೋಷಣೆ ಮಾಡಿದರೆ, ಅದನ್ನು ಜನರಿಗೆ ತಿಳಿಸಿ. ಮುಖ್ಯ ಕಾರ್ಯದರ್ಶಿ ಶಾಲಿನಿ ರಜನಿಶ್ ಅವರಿಂದ ಕಮಿಟಿ ಮಾಡಿ ಅವರಿಂದ ವರದಿ ತೆಗೆಸಿಕೊಂಡು ಮಾಡುವಂಥದ್ದು ಏನಿತ್ತು? ಒಳಮೀಸಲಾತಿ ಸರ್ವೆ ಮಾಡುವುದಕ್ಕೆ ಸಾವಿರಾರು ಕೋಟಿ ಖರ್ಚು ಮಾಡಿದ್ದೀರಿ. ಏನು ಪ್ರಯೋಜನ ಎಂದು ಅವರು ಕಿಡಿಕಾರಿದರು.ಕಾಂಗ್ರೆಸ್ ದಲಿತ ನಾಯಕರಿಂದ ಸಂಭ್ರಮಾಚರಣೆ ಕುರಿತು ಮಾತನಾಡಿದ ಅವರು, ಕೆಲವರು ಸಂಭ್ರಮಾಚರಣೆಯನ್ನು ಮಾಡುತ್ತಿದ್ದಾರಲ್ಲ, ಅವರಿಗೆ ತವರು ಮನೆ ಯಾವುದು ಅಂತ ಗೊತ್ತಿಲ್ಲ. ಗಂಡನ ಮನೆಯೂ ಗೊತ್ತಿಲ್ಲ. ಗಂಡನ ಮನೆ ಹಾಗೂ ತವರು ಮನೆ ವ್ಯತ್ಯಾಸ ಗೊತ್ತಿಲ್ಲದವರಿಗೆ ಏನು ಹೇಳುವುದಕ್ಕೆ ಆಗುತ್ತದೆ? ಕೆಲವು ಕೋಳಿಗಳಿಗೆ ಕಾಳು ಹಾಕಿರುತ್ತಾರೆ. ಕಾಳು ತಿನ್ನುವ ಸಲುವಾಗಿ ಹೀಗೆಲ್ಲ ಮಾಡುತ್ತವೆ ಎಂದು ಕಾಂಗ್ರೆಸ್ ದಲಿತ ನಾಯಕರಿಗೆ ತೀಕ್ಷ್ಣವಾಗಿ ಹೇಳಿದರು.ಶೇ.5.25 ಚಲವಾದಿ ಅವರಿಗೆ, ಮಾದಿಗರಿಗೆ ಶೇ.5.25 ಅಂತ ಹೇಳಿದಾರಲ್ಲ. 25 ಹೇಗೆ ಹೊಂದಿಸುತ್ತಾರೆ ಎಂದು ನನಗೆ ಹೇಳಲಿ. ಪಾಯಿಂಟ್ 25 ಇಲ್ಲವೇ ಇಲ್ಲ. 5 ಮಾತ್ರ ಸಿಕ್ಕಹಾಗೆ. ಅದು ಸ್ಕ್ಯಾವೆಂಜರ್ ಪೋಸ್ಟಿಗೆ, ಸ್ವೀಪರ್ ಪೋಸ್ಟ್ಗೆ, ಪೊಲೀಸ್ ಕಾನ್ಸ್ಟೇಬಲ್ಗೆ ಮಾತ್ರ ಒಳಮೀಸಲಾತಿ ಆಗುತ್ತದೆ. ಉಳಿದ ಯಾವುದೇ ಹುದ್ದೆಗಳಿಗೆ ಆಗುವುದಿಲ್ಲ. ಎಲ್ಲ ಇಲಾಖೆಗಳಲ್ಲಿ ಒಂದೇ ಸಾರಿ 15ಕ್ಕಿಂತ ಹೆಚ್ಚು ಹುದ್ದೆಗಳು ಬರುವುದಿಲ್ಲ. ವಿಶ್ವವಿದ್ಯಾಲಯಗಳಲ್ಲಿ ಒಂದೆರಡು ಹುದ್ದೆಗಳು ಬರುತ್ತವೆ. ಡಿವೈಎಸ್ಪಿಗಳು ನಾಲ್ಕು, ಐದು ಹುದ್ದೆಗಳು ಬರುತ್ತವೆ. ಅಸಿಸ್ಟೆಂಟ್ ಕಮಿಷನರ್ ನಾಲ್ಕು ಆರು ಬರುತ್ತವೆ. ಎಕ್ಸಿಕ್ಯೂಟಿವ್ ಪೋಸ್ಟ್ಗಳು ಒಂದೇ ಸಾರಿ ಬರುವುದಿಲ್ಲ. 4-2-6 ಬರುತ್ತವೆ. ಆಗ ಮೀಸಲಾತಿ ಇಲ್ಲ ಅಂದ್ರೆ ಮೀಸಲಾತಿ ಯಾರಿಗಾಗಿ? ಮೀಸಲಾತಿ ಯಾರಿಗೆ ಸಿಗುತ್ತದೆ ಅಂದ್ರೆ ಸ್ಕ್ಯಾವೆಂಜರ್ಸ್ಗಳಿಗೆ. ಕಕ್ಕಸು ತೊಳೆಯುವವರಿಗೆ. ಒಳ ಮೀಸಲಾತಿ ಕಸ ಹೊಡೆಯುವವರಿಗೆ. ಪೊಲೀಸ್ ಕಾನ್ಸ್ಸ್ಟೇಬಲ್ನವರಿಗೆ ಮಾತ್ರ. ಸಿದ್ದರಾಮಯ್ಯನವರ ಸಾಮಾಜಿಕ ನ್ಯಾಯ ಇದು. ಇದು ಕಾಂಗ್ರೆಸ್ ನೀತಿ. ಆದ್ದರಿಂದ ಇದನ್ನು ನಾನು ಖಂಡಿಸುತ್ತೇನೆ. ಕೂಡಲೇ ಅದನ್ನು ಸರಿಪಡಿಸಬೇಕು. ಇಲ್ಲದಿದ್ದರೆ ರಾಜ್ಯದ ಉದ್ದಗಲಕ್ಕೂ ನಾವು ಬೃಹತ್ ಪ್ರಮಾಣದಲ್ಲಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.ಸಿದ್ದರಾಮಯ್ಯನವರು 15 ದಿನಗಳ ಸರದಾರ...!
ಸಿದ್ದರಾಮಯ್ಯ ಪಂದ್ರಹ ದಿನ್ ಕಿ ಸರದಾರ. ಅದರ ನಂತರ ಸಿದ್ದರಾಮಯ್ಯನವರು ಈ ರಾಜ್ಯದ ಮುಖ್ಯಮಂತ್ರಿ ಆಗಿರುವುದಿಲ್ಲ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು. ರಾಜ್ಯದಲ್ಲಿ ಸಿದ್ದರಾಮಯ್ಯನವರ ಸರ್ಕಾರ ಕುರ್ಚಿ ಕಿತ್ತಾಟದಲ್ಲಿ ತೊಡಗಿದೆ. ವಿಧಾನಸೌಧದಲ್ಲಿ ಆಡಳಿತವೇ ಇಲ್ಲದಂತಾಗಿದೆ. ಮೇ 4ರಂದು ಐದು ರಾಜ್ಯಗಳ ಚುನಾವಣಾ ಫಲಿತಾಂಶ ಬರುತ್ತದೆ. ಅಂದು ದಾವಣಗೆರೆ ಹಾಗೂ ಬಾಗಲಕೋಟೆ ಉಪ ಚುನಾವಣೆಯ ಫಲಿತಾಂಶ ಕೂಡ ಬರುತ್ತದೆ. ಅದರ ಜೊತೆಗೆ ಸಿದ್ದರಾಮಯ್ಯನವರ ಕುರ್ಚಿಯ ಫಲಿತಾಂಶ ಕೂಡ ಪ್ರಕಟವಾಗುತ್ತದೆ ಎಂದು ಹೇಳಿದರು.ಸದ್ಯದ ಮಾಹಿತಿ ಪ್ರಕಾರ ಡಿ.ಕೆ.ಶಿವಕುಮಾರ್ ಸಿಎಂ ಆಗಲು ಶಾಲು ಹೊತ್ತುಕೊಂಡು ತಯಾರಾಗಿ ಕೂತಿದ್ದಾರೆ. ಸಿದ್ದರಾಮಯ್ಯನವರ ಹಿಂಬಾಲಿಗರು 40 ಜನ ಶಾಸಕರು ಹೈಕಮಾಂಡ್ಗೆ ಹೋಗಿ ಲಾಬಿ ಮಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ಪರವಾಗಿ 50 ಜನ ಲಾಬಿ ಮಾಡುತ್ತಿದ್ದಾರೆ. ಆಡಳಿತ ಸಂಪೂರ್ಣವಾಗಿ ಕುಸಿದು ಹೋಗಿದೆ ಎಂದು ಕಿಡಿಕಾರಿದರು.ರಾಜ್ಯದಲ್ಲಿ ಬರಗಾಲ ಇರುವುದರಿಂದ ಸಕಾಲದಲ್ಲಿ ಮಳೆ ಆಗದೆ ಇರುವುದರಿಂದ ರಾಜ್ಯದ ಉದ್ದಗಲಕ್ಕೂ ಕುಡಿಯುವ ನೀರಿನ ಸಮಸ್ಯೆಯಾಗಿದೆ. ವಿಧಾನಸೌಧದಲ್ಲಿ ಕೂತು ಆಡಳಿತ ಮಾಡಿ, ಯಾವ ಯಾವ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಆ ಜಿಲ್ಲೆಗಳಿಗೆ ಕೂಡಲೇ ಕುಡಿಯುವ ನೀರಿಗಾಗಿ ಅನುದಾನ ಬಿಡುಗಡೆ ಮಾಡಬೇಕು. ಕನಿಷ್ಠ ಒಂದು ಜಿಲ್ಲೆಗೆ ₹50 ಕೋಟಿ ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದರು.