ಸಾರಾಂಶ
ಹನೂರು: ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಗುರುವಾರ ಸಂಜೆ ಬಿದ್ದ ಭಾರಿ ಮಳೆಗೆ ಜಡೆತಡಿ ಹಳ್ಳ ತುಂಬಿ ಹರಿದ ಪರಿಣಾಮ ಮೂರು ಗಂಟೆಗಳಿಗೂ ಹೆಚ್ಚು ಕಾಲ ಅಂತರ ರಾಜ್ಯ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಬಂದ್ ಆಗಿದ್ದು ಸಂಚಾರ ಅಸ್ತವ್ಯಸ್ತವಾಗಿದೆ.ಲೊಕ್ಕನಹಳ್ಳಿ ಹೋಬಳಿಯ ಪಿ.ಜಿ ಪಾಳ್ಯ ಗ್ರಾಪಂ ವ್ಯಾಪ್ತಿಯ ಹಾವಿನ ಮೂಲೆ, ಉದ್ದಟ್ಟಿ, ಕೆರೆದಿಂಬ ನೆಲ್ಲಿಕತ್ರಿ ಅರಣ್ಯ ವ್ಯಾಪ್ತಿಯಲ್ಲಿ ಸುಮಾರು 2 ಗಂಟೆಗಳಿಗೂ ಹೆಚ್ಚು ಕಾಲ ಉತ್ತಮ ಮಳೆಯಾಗಿದೆ. ಈ ಹಿನ್ನೆಲೆ ಬೋರೆದೊಡ್ಡಿ ಗ್ರಾಮದ ಸಮೀಪದ ಜಡೆತಡಿ ಹಳ್ಳ, ಲೊಕ್ಕನಹಳ್ಳಿ ಸಮೀಪದ ಹಳ್ಳಗಳು ತುಂಬಿ ಹರಿಯುತ್ತಿದೆ. ಇದರಿಂದ ಲೊಕ್ಕನಹಳ್ಳಿ ಗ್ರಾಮದಿಂದ ಒಡೆಯರಪಾಳ್ಯ ಪಿಜಿ ಪಾಳ್ಯ ತಮಿಳುನಾಡಿಗೆ ಹೋಗುತ್ತಿದ್ದ ವಾಹನಗಳು ಹಾಗೂ ಒಡೆಯರಪಾಳ್ಯ ಮಾರ್ಗವಾಗಿ ಲೊಕ್ಕನಹಳ್ಳಿ ಕೊಳ್ಳೇಗಾಲ, ಹನೂರು ಪಟ್ಟಣ ವ್ಯಾಪ್ತಿಗೆ ಬರುತ್ತಿದ್ದ ಹಲವಾರು ದ್ವಿಚಕ್ರ ವಾಹನ, ಬಸ್, ಸರಕು ಸಾಗಣೆ ವಾಹನಗಳು ಸುಮಾರು ಮೂರು ಗಂಟೆಗಳಿಗೂ ಹೆಚ್ಚು ಕಾಲ ಸಂಚಾರ ಸ್ಥಗಿತವಾಗಿತ್ತು. ಮಳೆಯಿಂದ ಕೆರೆಕಟ್ಟೆಗಳು ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದೆ. ರೈತರ ಮುಖದಲ್ಲಿ ಮಂದಹಾಸ ಮೂಡಿದೆ.