ವೈದ್ಯಕೀಯ ಕ್ಷೇತ್ರದಲ್ಲಿ ಸಹಾಯಕ ವೈದ್ಯಕೀಯ ಸಿಬ್ಬಂದಿ ಪಾತ್ರ ಪ್ರಮುಖ: ಡಾ.ನಾ.ಸೋಮೇಶ್ವರ

| Published : Jun 16 2025, 01:48 AM IST

ವೈದ್ಯಕೀಯ ಕ್ಷೇತ್ರದಲ್ಲಿ ಸಹಾಯಕ ವೈದ್ಯಕೀಯ ಸಿಬ್ಬಂದಿ ಪಾತ್ರ ಪ್ರಮುಖ: ಡಾ.ನಾ.ಸೋಮೇಶ್ವರ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿಯೊಂದು ಆಸ್ಪತ್ರೆಗಳಲ್ಲಿ ಸಹಾಯಕ ವೈದ್ಯಕೀಯ ಸಿಬ್ಬಂದಿ ಅವಶ್ಯಕತೆ ಹೆಚ್ಚಾಗಿರುವುದರಿಂದ ಪ್ಯಾರಾ ಮೆಡಿಕಲ್, ನರ್ಸಿಂಗ್ ಸೇರಿದಂತೆ ಸಹಾಯಕ ವೈದ್ಯಕೀಯ ಕೋರ್ಸ್ ಓದುವ ವಿದ್ಯಾರ್ಥಿಗಳಿಗೆ ಉದ್ಯೋಗ ಸುಲಭವಾಗಿ ಸಿಗಲಿದೆ. ವೈದ್ಯರಿಗೆ ಸಿಗುವ ಗೌರವ ಆರೋಗ್ಯ ಸಿಬ್ಬಂದಿಗೂ ಸಿಗುವುದರಿಂದ ಸಮರ್ಪಕವಾಗಿ ಬಳಸಿಕೊಳ್ಳಬಹುದು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ವೈದ್ಯಕೀಯ ಕ್ಷೇತ್ರದಲ್ಲಿ ಸಹಾಯಕ ವೈದ್ಯಕೀಯ ಸಿಬ್ಬಂದಿ ಪಾತ್ರ ಪ್ರಮುಖವಾಗಿದೆ ಎಂದು ಖ್ಯಾತ ಬರಹಗಾರ, ವೈದ್ಯ ಡಾ.ನಾ.ಸೋಮೇಶ್ವರ ತಿಳಿಸಿದರು.

ಪಟ್ಟಣದ ಮೈಸೂರು ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ವಿದ್ಯಾ ಪ್ಯಾರಾ ಮೆಡಿಕಲ್‌ನ ವಿದ್ಯೋದಯ ಕಾಲೇಜು ಕಟ್ಟಡ ಉದ್ಘಾಟಿಸಿ ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ಸಹಾಯಕ ವೈದ್ಯಕೀಯ ಸಿಬ್ಬಂದಿ ಪಾತ್ರ ವೈದ್ಯರಿಕ್ಕಿಂತ ಮೀಗಿಲಾಗಿದೆ. ವೈದ್ಯರು ಸಲಹೆ ಕೊಡುವುದನ್ನು ರೋಗಿಗಳಿಗೆ ಪರಿಣಾಮಕಾರಿ ಚಿಕಿತ್ಸೆ ನೀಡುವುದು ಸಹಾಯಕ ವೈದ್ಯಕೀಯ ಸಿಬ್ಬಂದಿ ಜವಾಬ್ದಾರಿಯಾಗಿದೆ ಎಂದರು.

ಪ್ರತಿಯೊಂದು ಆಸ್ಪತ್ರೆಗಳಲ್ಲಿ ಸಹಾಯಕ ವೈದ್ಯಕೀಯ ಸಿಬ್ಬಂದಿ ಅವಶ್ಯಕತೆ ಹೆಚ್ಚಾಗಿರುವುದರಿಂದ ಪ್ಯಾರಾ ಮೆಡಿಕಲ್, ನರ್ಸಿಂಗ್ ಸೇರಿದಂತೆ ಸಹಾಯಕ ವೈದ್ಯಕೀಯ ಕೋರ್ಸ್ ಓದುವ ವಿದ್ಯಾರ್ಥಿಗಳಿಗೆ ಉದ್ಯೋಗ ಸುಲಭವಾಗಿ ಸಿಗಲಿದೆ. ವೈದ್ಯರಿಗೆ ಸಿಗುವ ಗೌರವ ಆರೋಗ್ಯ ಸಿಬ್ಬಂದಿಗೂ ಸಿಗುವುದರಿಂದ ಸಮರ್ಪಕವಾಗಿ ಬಳಸಿಕೊಳ್ಳಬಹುದು. ರಾಜ್ಯ ಸೇರಿದಂತೆ ಹೊರ ರಾಜ್ಯ ಹಾಗೂ ವಿದೇಶಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿಯೂ ಸೇವೆ ಸಲ್ಲಿಸಬಹುದು ಎಂದು ತಿಳಿವಳಿಕೆ ನೀಡಿದರು.

ಸಂಸ್ಕಾರ ಹಾಗೂ ಸಂಸ್ಕೃತಿಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದು ಭಾರತೀಯ ಕನ್ನಡ ಸಂಸ್ಕೃತಿಯ ವಿಶೇಷ ಗುಣಲಕ್ಷಣವಾಗಿದೆ. ಆರೋಗ್ಯ ಸಹಾಯಕ ಸಿಬ್ಬಂದಿ ಪಾರ್ಶ್ವ ಪರಿಣಾಮಗಳ ಬಗ್ಗೆ ಜಾಗೃತಿ, ಸೂಕ್ಷ್ಮ ವಿಷಯಗಳನ್ನು ರೋಗಿಗಳಿಗೆ ಅರ್ಥ ಮಾಡುವ ರೀತಿಯಲ್ಲಿ ನಿಖರವಾದ ಮಾಹಿತಿ ನೀಡಬೇಕೆಂದು ಸಲಹೆ ನೀಡಿದರು.

ವೈದ್ಯಕೀಯ ಶಿಕ್ಷಣವನ್ನು ಕನ್ನಡ ಭಾಷೆಯಲ್ಲಿಯೇ ನೀಡಬೇಕೆಂಬ ದೊಡ್ಡ ಚರ್ಚೆ ನಡೆಯುತ್ತಿದೆ. ಪ್ರಾಂತೀಯ ಭಾಷೆ ಮಾಧ್ಯಮಗಳಲ್ಲಿ ಕೊಡಬೇಕೆಂಬ ಚಳಿವಳಿ ಆರಂಭವಾಗಿದೆ. ರಾಜೀವ್‌ ಗಾಂಧಿ ಆರೋಗ್ಯ ವಿವಿಯಲ್ಲಿ ಈಗಾಗಲೇ ಕಮಿಟಿ ರೂಪುಗೊಂಡು ಮಾತುಕತೆಗಳು ನಡೆಯುತ್ತಿದೆ ಎಂದರು.

ನೇರವಾಗಿ ಎಂಬಿಬಿಎಸ್ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಆರಂಭಿಸುವುದಕ್ಕೆ ಮೊದಲು ಸಹಾಯಕ ವೈದ್ಯಕೀಯ ಕೊರ್ಸ್ ಗಳನ್ನು ಕನ್ನಡದಲ್ಲಿ ಪ್ರಾರಂಭಿಸಿ ವಿದ್ಯಾರ್ಥಿಗಳ ಪ್ರತಿಕ್ರಿಯೆಯನ್ನು ಪಡೆದು ನಂತರ ಆರಂಭಿಸಬೇಕೆಂಬುವುದರ ಬಗ್ಗೆ ತೀರ್ಮಾನ ಮಾಡುವುದಾಗಿ ಚರ್ಚೆ ನಡೆಸಲಾಗಿದೆ. ಇನ್ನೂ ಮುಂದೆ ವಿದ್ಯಾರ್ಥಿಗಳು ಕನ್ನಡ ಭಾಷೆಯಲ್ಲಿಯೇ ಪ್ಯಾರಾ ಮೆಡಿಕಲ್ ಶಿಕ್ಷಣವನ್ನು ಪಡೆಯಬಹುದಾಗಿದೆ ಎಂದರು.

ತಾಲೂಕು ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಎಂ.ಡಿ.ಸಂಜಯ್ ಮಾತನಾಡಿ, ಆರೋಗ್ಯ ಕ್ಷೇತ್ರದಲ್ಲಿ ವೈದ್ಯರಿಗಷ್ಟೆ ಪ್ರಾಮುಖ್ಯತೆ ಸಹಾಯ ವೈದ್ಯಕೀಯ ಸಿಬ್ಬಂದಿಗೂ ಸಿಗುತ್ತಿದೆ. ಮಳವಳ್ಳಿಯಲ್ಲಿ ಆರಂಭಗೊಂಡಿರುವ ವಿದ್ಯಾ ಪ್ಯಾರಾ ಮೆಡಿಕಲ್ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸಮಾಜಿಕ ಸೇವಾ ಕ್ಷೇತ್ರದಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಾ ಬರುತ್ತಿದ್ದು, ಕಾಲೇಜು ಮತ್ತಷ್ಟು ಗುಣಮಟ್ಟದ ಶಿಕ್ಷಣವನ್ನು ನೀಡುವಂತಾಗಿದೆ ಎಂದರು.

ಪ್ರಾಂಶುಪಾಲ ಬಿ.ಚಂದ್ರಮೋಹನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಕರ್ಷಣೆಗೆ ಒಳಗಾಗದೇ ದುಡಿಯುವ ಹಣದಲ್ಲಿಯೇ ನೆಮ್ಮದಿ ಜೀವನ ಕಾಣಬೇಕು. ಸಹಾಯಕ ವೈದ್ಯಕೀಯ ಕೋರ್ಸ್‌ಗಳು ವಿದ್ಯಾರ್ಥಿಗಳ ಬದುಕಿಗೆ ದಾರಿ ದೀಪವಾಗಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಳ್ಳಬೇಕೆಂದು ಹೇಳಿದರು.

ಇದೇ ಸಂದರ್ಭದಲ್ಲಿ ರಾಜ್ಯ ಮಟ್ಟದಲ್ಲಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ರಾಜ್ಯ ಪ್ಯಾರಾಮೆಡಿಕಲ್ ಕಾಲೇಜುಗಳ ಸಂಘದ ಕಾರ್ಯದರ್ಶಿ ಕೆ.ಎಸ್.ಮಂಜುನಾಥ್, ಹಾಸನ ಜ್ಞಾನಧಾರೆ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎ.ಎನ್.ಮಧುಸೂದನ್, ಉಪನ್ಯಾಸಕಿ ವಿದ್ಯಾ, ರಂಜಿತಾ ಸೇರಿದಂತೆ ಇತರರು ಇದ್ದರು.