ಕನ್ನಡಪ್ರಭ ವಾರ್ತೆ ಹೊಸದುರ್ಗ

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಹಾಲುರಾಮೇಶ್ವರ ಹಾಗೂ ಸಾಣೇಹಳ್ಳಿ ಗ್ರಾಮದ ಕೆರೆ ಅಭಿವೃದ್ಧಿ ಸಮಿತಿಯ ಆಶ್ರಯದಲ್ಲಿ ಕೆರೆಗಳ ಪುನಶ್ಚೇತನಕ್ಕೆ ಕಾರ್ಯಕ್ಕೆ ಬುಧವಾರ ಪಂಡಿತಾರಾಧ್ಯ ಶ್ರೀಗಳು ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಶ್ರೀಗಳು, ಗ್ರಾಮದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಕೆರೆಗಳ ಪಾತ್ರ ಅತಿಮುಖ್ಯವಾಗಿದ್ದು, ಕೆರೆಗಳ ಪುನಶ್ಚೇತನಕ್ಕೆ ಗ್ರಾಮಸ್ಥರು ಕೈಜೋಡಿಸಿರುವುದು ತುಂಬಾ ಸಂತೋಷ ಎಂದರು.

ಕಳೆದ 2009ರಲ್ಲಿಯೇ ಗ್ರಾಮಸ್ಥರು ಸ್ವಯಂಪ್ರೇರಿತರಾಗಿ ಹಣ ಸಂಗ್ರಹಿಸಿ ಈ ಕೆರೆಯ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿದ್ದರು. ಆ ಸಮಯದಲ್ಲಿ ಕೆರೆಯ ಮಣ್ಣನ್ನು ತೆಗೆದ ತಕ್ಷಣ ಸುರಿದ ಮಳೆಯಿಂದಾಗಿ ಕೆರೆ ತುಂಬಿ ಗ್ರಾಮಸ್ಥರಲ್ಲಿ ಸಂತಸ ಮೂಡಿಸಿತ್ತು. ಆದರೆ ನಂತರದ ದಿನಗಳಲ್ಲಿ ನಿರ್ವಹಣೆಯ ಕೊರತೆಯಿಂದಾಗಿ ಕೆರೆ ಮತ್ತೆ ಬೋಳು ಕೆರೆ ಯಾಗಿ ಮಾರ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಕೆರೆಯನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಬೇಕು.

ಈ ಹಿಂದೆ ಮಾಡಿದಂತೆ ಪ್ರತಿಯೊಬ್ಬರೂ ತಮ್ಮ ಕೈಲಾದ ಆರ್ಥಿಕ ಸಹಾಯವನ್ನು ನೀಡಿ, ಸಂಘಟಿತರಾಗಿ ಕೆರೆಯ ಹೂಳೆತ್ತುವ ಕಾರ್ಯದಲ್ಲಿ ಭಾಗಿಯಾಗಬೇಕು. ಸಾಣೇಹಳ್ಳಿ ಕೆರೆಯ ಅಭಿವೃದ್ಧಿಗೆ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರು ಅಗತ್ಯ ಧನಸಹಾಯ ಮತ್ತು ಸಹಕಾರ ನೀಡುವರು ಎಂದರು.


ಕೆರೆ ಹೂಳು ಎತ್ತುವ ಕಾರ್ಯಕ್ಕೆ ಟ್ರ‍್ಯಾಕ್ಟರ್‌ಗಳ ಮೂಲಕ ಮಣ್ಣು ಸಾಗಿಸುವ ಕೆಲಸಕ್ಕೆ ಗ್ರಾಮಸ್ಥರು ಸನ್ನದ್ಧರಾಗಿದ್ದಾರೆ. ಹಿಂದೆ ಮಾಡಿದಂತೆಯೇ ಪ್ರತಿ ಮನೆಯಿಂದ ಅಲ್ಪ ಮೊತ್ತದ ದೇಣಿಗೆ ಸಂಗ್ರಹಿಸಿ ಈ ಕಾರ್ಯವನ್ನು ಯಶಸ್ವಿಗೊಳಿಸಬೇಕು. ಈ ನಿಟ್ಟಿನಲ್ಲಿ ಮಠದ ವತಿಯಿಂದಲೂ ಅಗತ್ಯ ಆರ್ಥಿಕ ನೆರವು ನೀಡುವುದಾಗಿ ಶ್ರೀಗಳು ಹೇಳಿದರು.

ಈ ವೇಳೆ ಯೋಜನಾಧಿಕಾರಿ ಚಂದ್ರಶೇಖರ್, ಕೆರೆ ಇಂಜಿನಿಯರ್ ಹರೀಶ್, ಕೃಷಿ ಅಧಿಕಾರಿ ಉಮೇಶ್, ಸಾಣೇಹಳ್ಳಿ ಗ್ರಾಮದ ಎಸ್ ಕೆ ಪರಮೇಶ್ವರಯ್ಯ, ಎಸ್ ಆರ್ ಮಂಜುನಾಥ್, ಸತೀಶ್, ಪ್ರದೀಪ್, ವೀರಭದ್ರಪ್ಪ, ಕೃಷ್ಣಪ್ಪ, ಕೆರೆ ಮೇಲ್ವಿಚಾರಕಿ ಪಕೀರಮ್ಮ, ಸೇವಾಪ್ರತಿನಿಧಿ ಶಿಲ್ಪ ಒಕ್ಕೂಟದ ಪದಾಧಿಕಾರಿಗಳಾದ ರತ್ನಮ್ಮ ಮತ್ತು ಮಮತಾ ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.