ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಆತ್ಮಬಲ, ಸಹನೆ, ಶಕ್ತಿ, ಸಾಮರ್ಥ್ಯಗಳಿಂದ ಮಹಿಳೆ ಕುಟುಂಬ ಕಟ್ಟುವುದರೊಂದಿಗೆ ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ರೂಪಿಸಿ ದೇಶ ಸೇವೆಗೆ ಕೊಡುಗೆ ನೀಡುತ್ತಾಳೆ. ಮಕ್ಕಳ ವ್ಯಕ್ತಿತ್ವ ರೂಪಿಸುವ ಶಿಕ್ಷಕರು ರಾಷ್ಟ್ರದ ಸಂಪತ್ತು ಎಂದು ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಹೇಳಿದರು.ಪಟ್ಟಣದ ಗುರುಸಿದ್ದೇಶ್ವರ ಮಹಿಳಾ ಶಿಕ್ಷಣ(ಬಿ.ಇಡಿ) ಮಹಾವಿದ್ಯಾಲಯದಲ್ಲಿ ಬುಧವಾರ ಜರುಗಿದ ಬಿ.ಇಡಿ. ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳ ಸ್ವಾಗತ ಹಾಗೂ ಸಾಂಸ್ಕೃತಿಕ ಚಟುವಟಿಕೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮಹಿಳೆ ಅಬಲೆಯಲ್ಲ, ಸಬಲೆಯಾಗಿದ್ದಾಳೆ. ಎಲ್ಲಾ ರಂಗಗಳಲ್ಲೂ ಕೆಲಸ ಮಾಡುತ್ತಿದ್ದಾಳೆ. ಭಾವಿ ಶಿಕ್ಷಕರಾಗುವ ತಾವು ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡುವ ಮೂಲಕ ಸಮರ್ಥ ಶಿಕ್ಷಕಿಯಾಗಿ ಸಮಾಜದ ಬದಲಾವಣೆಗೆ ಶ್ರಮಿಸಬೇಕೆಂದು ಸಲಹೆ ನೀಡಿದರು.ಸಂಸ್ಥೆಯ ಚೇರಮನ್ ರಾಜು ಜವಳಿ ಅಧ್ಯಕ್ಷತೆವಹಿಸಿ ಮಾತನಾಡಿ, ಜಗತ್ತು ಕಟ್ಟುವ ಶಕ್ತಿ ಮಹಿಳೆಗಿದೆ. ಶಿಕ್ಷಕರಾಗುವ ತಾವು ಸಾಧನೆ ಮಾಡುವ ಮೂಲಕ ಸಮಾಜದ ಮತ್ತು ಮಕ್ಕಳ ವ್ಯಕ್ತಿತ್ವ ವೃದ್ಧಿಗೆ ಹಗಲಿರುಳು ಶ್ರಮಿಸಬೇಕೆಂದರು. ಮಹಾರಾಷ್ಟ್ರದ ಸಲಗರ ರಾಮಲಿಂಗ ಶಿವಶರಣ ಮಠದ ಅಭಿನವ ರಾಮಲಿಂಗ ಪಟ್ಟದ ದೇವರು ಸಾನ್ನಿಧ್ಯ ವಹಿಸಿ ಮಾತನಾಡಿದರು.ಗುರುಸಿದ್ದೇಶ್ವರ ಬೃಹನ್ಮಠದ ಗುರುಸಿದ್ಧ ಪಟ್ಟದಾರ್ಯ ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಬಸವಾದಿ ಶರಣರ ಆಶಯದಂತೆ ಸಮಸಮಾಜ ಕಟ್ಟಲು ಶಿಕ್ಷಕರಾಗುವ ನೀವು ಪ್ರಯತ್ನಿಸಬೇಕು. ಉತ್ತಮ ವಿದ್ಯಾರ್ಥಿಗಳನ್ನು ದೇಶ ಸೇವೆಗೆ ಸಿದ್ಧರಾಗುವಂತೆ ಬೋಧನೆ ಮಾಡಬೇಕು. ಉತ್ತಮ ಸಮಾಜ ನಿರ್ಮಾಣವೇ ನಿಮ್ಮ ಗುರಿಯಾಗಬೇಕು ಎಂದರು.ಇದೇ ವೇಳೆ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಹೂವು ನೀಡಿ ವಚನ ಪಠಣ ಮಾಡಿಸುವ ಮೂಲಕ ಸ್ವಾಗತಿಸಲಾಯಿತು. ಒಕ್ಕೂಟದ ಪ್ರತಿನಿಧಿಗಳಿಗೆ ಪ್ರಾಚಾರ್ಯ ಡಾ.ಎಚ್.ಎಸ್.ಘಂಟಿ ಪ್ರತಿಜ್ಞಾ ವಿಧಿ ಬೋಧಿಸಿದರು.ಸಂಸ್ಥೆಯ ಉಪಾಧ್ಯಕ್ಷ ಬಸವಣ್ಣೆಪ್ಪ ಚಿಂದಿ, ಕಾರ್ಯದರ್ಶಿ ಎಸ್.ಎ.ಕಲಬುರ್ಗಿ,ಆಡಳಿತ ಮಂಡಳಿ ನಿರ್ದೇಶಕರಾದ ಸುರೇಖಾ ತಿಪ್ಪಾ, ನೇತ್ರಾವತಿ ತಾಂಡೂರ, ಈರಣ್ಣ ಶೇಖಾ, ದೊಡ್ಡಬಸಪ್ಪ ಉಂಕಿ, ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥೆ ಸಕ್ಕೂಬಾಯಿ ನೆಲ್ಲೂರ, ಪ್ರಧಾನ ಕಾರ್ಯದರ್ಶಿ ಕೀರ್ತಿ ಬಂತಲ್, ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ಪ್ರಥಮ ಮತ್ತು ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಇದ್ದರು.