ಸಾರಾಂಶ
ಮತದಾನದ ಪಾವಿತ್ರ್ಯತೆ ಮತ್ತು ಕಡ್ಡಾಯ ಮತದಾನದ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸುವದು. 18 ವರ್ಷ ತಲುಪಿದ ಪ್ರತಿಯೊಬ್ಬ ಯುವ ಮತದಾರರು ಆ ಹಕ್ಕನ್ನು ಸ್ವಯಂ ಪ್ರೇರಿತರಾಗಿ ಚಲಾಯಿಸುವಂತೆ ಮಾಡುವುದು ಮತ್ತು ಮತದಾರರ ಸಂಖ್ಯೆ ಮತದಾನದ ಶೇಕಡವಾರು ಪ್ರಮಾಣವನ್ನು ಹೆಚ್ಚಿಸುವುದೇ ಮತದಾರರ ದಿನಾಚರಣೆ ಉದ್ದೇಶ ಎಂದು ನ್ಯಾಯಾಧೀಶರು ಹೇಳಿದರು.
ಕನ್ನಡಪ್ರಭ ವಾರ್ತೆ ಶಹಾಪುರ
ರಾಷ್ಟ್ರದ ಪ್ರಗತಿ ಯುವಪೀಳಿಗೆಯ ಕೈಯಲ್ಲಿದೆ. ಯಾವುದೇ ಆಸೆ, ಆಮಿಷಕ್ಕೆ ಒಳಗಾಗದೆ ತಪ್ಪದೇ ಮತಾದಾನ ಮಾಡಿ, ಒಳ್ಳೆಯ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು ಎಂದು ಹೆಚ್ಚುವರಿ ನ್ಯಾಯಾಧೀಶ ಬಸವರಾಜ್ ಹೇಳಿದರು.ನಗರದ ಸಾಯಿರಾಮ್ ಪಿಯು ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಂದಾಯ ಇಲಾಖೆ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಸಾಯಿ ರಾಮ್ ಪಿಯು ಕಾಲೇಜು ಸಹಯೋಗದಲ್ಲಿ ಮತದಾರರ ದಿನಾಚರಣೆ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮತದಾನದ ಪಾವಿತ್ರ್ಯತೆ ಮತ್ತು ಕಡ್ಡಾಯ ಮತದಾನದ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸುವ ಮೂಲಕ 18 ವರ್ಷ ತಲುಪಿದ ಪ್ರತಿಯೊಬ್ಬ ಮತದಾರರು ಮತದಾನದ ಹಕ್ಕನ್ನು ಪಡೆಯುವ ಯುವ ಮತದಾರರು ಆ ಹಕ್ಕನ್ನು ಸ್ವಯಂ ಪ್ರೇರಿತರಾಗಿ ಚಲಾಯಿಸುವಂತೆ ಮಾಡುವುದು ಮತ್ತು ಮತದಾರರ ಸಂಖ್ಯೆ ಮತದಾನದ ಶೇಕಡವಾರು ಪ್ರಮಾಣವನ್ನು ಹೆಚ್ಚಿಸುವುದೇ ಈ ಆಚರಣೆಯ ಮುಖ್ಯ ಉದ್ದೇಶವಾಗಿದೆ ಎಂದರು.ತಹಸೀಲ್ದಾರ್ ಉಮಾಕಾಂತ ಹಳ್ಳೆ ಮಾತನಾಡಿ, ಯುವಕರು ದೇಶದ ಆಸ್ತಿ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಅವರ ಪಾತ್ರವನ್ನು ನಿರ್ಲಕ್ಷಿಸಲಾಗುವುದಿಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಯು ಮತದಾನದ ಮಹತ್ವ ಅರಿತುಕೊಂಡರೆ ಅಭಿವೃದ್ಧಿಯತ್ತ ರಾಷ್ಟ್ರವನ್ನು ಕೊಂಡೊಯ್ಯಬಹುದು ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ವಕೀಲೆ ಬಸಮ್ಮ ಅವರು ಉಪನ್ಯಾಸ ನೀಡಿ ಮತದಾನ ಮಹತ್ವ ಕುರಿತು ತಿಳಿಸಿದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಮತದಾರರ ದಿನದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.ಅಧ್ಯಕ್ಷತೆಯನ್ನು ಕಾಲೇಜಿನ ಕನ್ನಡ ಉಪನ್ಯಾಸಕ ಮೌನೇಶ ಹಯ್ಯಳ್ಕರ್ ವಹಿಸಿದ್ದರು. ಸಹಾಯಕ ಸರ್ಕಾರಿ ಅಭಿಯೋಜಕ ವೈ.ಬಿ. ದೇಸಾಯಿ, ವಕೀಲರ ಸಂಘದ ಸಹ ಕಾರ್ಯದರ್ಶಿ ಭೀಮರಾಯ ಮೂಲಿಮನಿ, ಪಿಎಸ್ಐ ಶಾಮ ಸುಂದರ್ ನಾಯಕ್, ಪ್ಯಾನಲ್ ವಕೀಲ ಮಲ್ಲಪ್ಪ ಕುರಿ, ಬಾಲಕಿರ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಭೀಮರಾಯ ಇತರರಿದ್ದರು.