ಸಾರಾಂಶ
ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ಜ್ಞಾನದ ಮೂಲ ಶಿಕ್ಷಣದಲ್ಲಿದೆ. ಶಿಕ್ಷಣದ ಮೂಲ ಅಕ್ಷರಗಳಲ್ಲಿದೆ. ಅದಕ್ಕಾಗಿ ಜ್ಞಾನಾರ್ಜನೆಯ ಆರಂಭ ಮಕ್ಕಳ ಚೇತನದಲ್ಲಿ ಅಕ್ಷರಾರೋಪಣದಿಂದ ಪ್ರಾರಂಭವಾಗುತ್ತದೆ ಎಂದು ಹರಳಯ್ಯ ಗವಿಯ ಡಾ. ಗಂಗಾಂಬಿಕಾ ಅಕ್ಕ ನುಡಿದರು.ನಗರದ ಪರುಷಕಟ್ಟೆಯಲ್ಲಿ ಅಂತಾರಾಷ್ಟ್ರೀಯ ಲಿಂಗಾಯತ ಧರ್ಮಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ವತಿಯಿಂದ ನಡೆದ ಬಸವ ಜಯಂತ್ಯುತ್ಸವ ಮಕ್ಕಳಲ್ಲಿ ಜ್ಞಾನ ಬಿತ್ತಣಿಕೆಯ ಶುಭ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಸೂರ್ಯ ಮಂಡಲದ ಉಗಮದಿಂದ ಇಲ್ಲಿಯವರೆಗೆ ಮಾನವನ ಉದ್ಧಾರಕ್ಕಾಗಿ ಸಂಭವಿಸಿದ ವರ್ಣನಾತೀತವಾದ ಫಲಪ್ರದಾಯಕ ಶುಭದಿನ ಬಸವ ಗುರು ಹುಟ್ಟಿದ ದಿನ ಬಸವ ಜಯಂತಿಯಾಗಿದೆ. ಈ ದಿನದಂದು ಆರಂಭ ಮಾಡಿದ ಪ್ರತಿಯೊಂದು ಕಾರ್ಯ ಪೂರ್ಣ ಫಲ ಕೊಡುತ್ತದೆ. ಕಾರ್ಯ ಆರಂಭ ಮಾಡಿದ ಉದ್ದೇಶ ಪೂರ್ಣವಾಗಿ ಸಾಕಾರವಾಗುತ್ತದೆ ಎಂದು ನುಡಿದರು.ನಮ್ಮ ಮಕ್ಕಳನ್ನು ದಿವ್ಯ ಮಾನವರಾಗಿಸುವ ವಿದ್ಯೆ ಸಂಪಾದನೆಯ ಆರಂಭ ಬಸವ ಜಯಂತಿಯ ಮಾನವ ಮಂಗಳದ ಅಕ್ಷಯ ತೃತೀಯದಂದು ಆರಂಭಿಸಿ ಅವರಲ್ಲಿ ಪತ್ರ ಅಕ್ಷರಗಳ ಬಿತ್ತಣಿಕೆಯೊಂದಿಗೆ ಜ್ಞಾನದ ಮಹಾದ್ವಾರ ತೆರೆಯುವುದಾಗಿದೆ. ಈ ದಿನ ಮಕ್ಕಳಲ್ಲಿ ಸಾಕ್ಷಾತ್ ಮಹಾಲಿಂಗ ಜ್ಞಾನ ಪರಮಾತ್ಮನೇ ಮಕ್ಕಳ ಮಧ್ಯದಲ್ಲಿ ಬಂದು ಅಂತರಂಗದಲ್ಲಿ ಉಳಿದು ಅಕ್ಷರ ರೂಪ ಧರಿಸಿ ನಮ್ಮ ಜ್ಞಾನವೆಂಬ ಭೂಮಿಯಲ್ಲಿ ಬೀಜ ಬಿತ್ತಿ ಮೊಳಕೆಯಾಗಿ ಅಂಕುರಿಸಿ ಮಹಾಜ್ಞಾನ ವೃಕ್ಷವಾಗಿ ಬೆಳೆಯುತಲಿದ್ದಾನೆ. ನಮ್ಮ ಮಕ್ಕಳೇ ನಮ್ಮ ಮತ್ತು ದೇಶದ ಭವಿಷ್ಯ. ಅವರನ್ನು ಶ್ರೇಷ್ಠವಾಗಿ ಬೆಳೆಸಿದರೆ ಎಲ್ಲರ ಭವಿಷ್ಯ ಸುರಕ್ಷಿತವಾಗಿದೇ ಜಗತ್ತಿನಲ್ಲಿ ಉನ್ನತ ಸ್ಥಾನ ಪಡೆಯುತ್ತದೆ ಎಂದರು.
ಇದೆ ಸಂದರ್ಭದಲ್ಲಿ ಮಕ್ಕಳ ಮೇಲೆ ಲಿಂಗೋದಕ ಸಿಂಪಡಿಸಿ ರುದ್ರಾಕ್ಷಿ ಕಂಕಣ ಕಟ್ಟಿ ಅವರಿಗೆ ಕಿವಿಯಲ್ಲಿ ಮಂತ್ರ ಹೇಳಿ ಪಾಟಿಯ ಮೇಲೆ ಓಂ ಬಸವ ಎಂದು ಬರೆಸಿ ಅವರಿಗೆ ಅಕ್ಷರಾಭ್ಯಸ ಮಾಡಿಸಿದರು. ಇದಕ್ಕೂ ಮೊದಲು ಶರಣೆಯರಿಂದ ಸಾಮೂಹಿಕವಾಗಿ ಬಸವ ಸ್ತವನ ಸತತಂ ಪಠಣ ನಡೆಯಿತು.ಬಸವೇಶ್ವರ ದೇವಸ್ಥಾನ ಪಂಚಕಮಿಟಿ ನಿರ್ದೇಶಕ ರೇವಣಪ್ಪಾ ರಾಯವಾಡೆ, ಜಗನ್ನಾಥ ಖೂಬಾ, ರಾಷ್ಟ್ರೀಯ ಬಸವ ದಳದ ತಾಲೂಕಾಧ್ಯಕ್ಷರ ರವೀಂದ್ರ ಕೊಳಕೂರ, ಅಕ್ಕನ ಬಳಗದ ಸುಲೋಚನಾ ಮಾಮಾ, ಮಾತೆ ಕಲ್ಯಾಣಮ್ಮಾ, ಸೋನಾಲಿ ನೀಲಕಂಠೆ, ಮೀನಾ ಜಾಧವ, ಕವಿತಾ ಮೂಲಗೆ, ಕವಿತಾ ಸಜ್ಜನ, ರಾಜೇಶ್ವರಿ ನಾಗರಾಳೆ, ಮಹಾನಂದಾ ಗುಂಗೆ, ಸವಿತಾ ರಗಟೆ, ಸುಜಾತಾ ತೋಗರಖೇಡೆ ಸೇರಿದಂತೆ ನೂರಾರು ಮಕ್ಕಳು, ಪಾಲಕರು ಭಾಗವಹಿಸಿದ್ದರು. ರಂಜನಾ ಬೂಶೆಟ್ಟಿ ವಚನ ಗಾಯನ ಮಾಡಿದರು.