ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಔಷಧಿ ವ್ಯಾಪಾರಿಗಳ ಸೇವೆ ರೋಗಿಗಳ ಆರೋಗ್ಯ ಸುಧಾರಣೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಿದ್ದಾರೆ ಎಂದು ಶಾಸಕ ರಮೇಶ್ ಬಂಡಿಸಿದ್ದೇಗೌಡ ಶ್ಲಾಘಿಸಿದರು.ಪಟ್ಟಣದ ಪುರಸಭಾ ವ್ಯಾಪ್ತಿಯ ಗಂಜಾಂನ ಖಾಸಗಿ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಔಷಧಿ ವ್ಯಾಪಾರಿಗಳು ಹಾಗೂ ವಿತರಕರ ಸಂಘ ಉದ್ಘಾಟಿಸಿ ಮಾತನಾಡಿ, ಸರ್ಕಾರಿ ರಜೆ, ಪ್ರತಿಭಟನೆ, ಬಂದ್ ನಡೆದರೂ ಔಷಧಿ ವ್ಯಾಪಾರಿಗಳು ಮಾತ್ರ ತಮ್ಮ ಅಂಗಡಿಗಳನ್ನು ತೆರೆದು ಎಂದಿನಂತೆ ಔಷಧಿಗಳನ್ನು ನೀಡುತ್ತಾರೆ ಎಂದರು.
ತಾವು ನೀಡುವ ಗುಣಮಟ್ಟದ ಹಾಗೂ ತ್ವರಿತ ಪ್ರಭಾವ ಬೀರಿ ಔಷಧಿಗಳು ಒಬ್ಬರ ಜೀವ ಉಳಿಸಲು ಸಹಕಾರಿಯಾಗಲಿದೆ. ವೈದ್ಯರ ನಂತರದಲ್ಲಿ ಔಷಧಿ ವಿತರಕರು ಎರಡನೇ ವೈದ್ಯರಂತೆ ಭಾಷವಾಗುತ್ತದೆ. ಡ್ರಗ್ಸ್ ಮಾಫಿಯಾ ಈಗಾಗಲೇ ಹೆಚ್ಚಾಗಿದೆ. ನಿಮಗೆ ಗೊತ್ತಿಲ್ಲದೆ ಅದು ಬೇರೆ ಬೇರೆ ತರಹದಲ್ಲಿ ಬದಲಾವಣೆಯಾಗುತ್ತದೆ. ತಾವುಗಳು ಜಾಗೃತೆ ವಹಿಸಿ ಆರೋಗ್ಯ ಕೆಡುವಂತಹ ಔಷಧಿಗಳನ್ನು ಸರಬರಾಜು ಆಗದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.ನೂತನ ಸಂಘದ ಪದಾಧಿಕಾರಿಗಳು ಗುಣಮಟ್ಟದ ಔಷಧ ವಿತರಣೆಯ ಜೊತೆಗೆ ಸಂಘದ ಏಳೆಗೆ ಶ್ರಮಿಸಿ, ಸಾರ್ವಜನಿಕರಿಗೆ ಮತ್ತಷ್ಟು ಅನುಕೂಲವಾಗುವಂತೆ ನೋಡಿಕೊಳ್ಳಬೇಕು ಎಂದರು.
ಮಂಡ್ಯ ಜಿಲ್ಲಾ ಔಷಧಿ ವ್ಯಾರಿಗಳು ಹಾಗೂ ವಿತರಕರ ಸಂಘದ ಅಧ್ಯಕ್ಷ ಬಿ.ಲೋಕೇಶ್ ಮಾತನಾಡಿ, ಸಾರ್ವಜನಿಕ ಜೀವನದಲ್ಲಿ ಔಷಧಿ ವಿತರಣೆಯ ನಮ್ಮ ಕೆಲಸವು ಅತ್ಯುತ್ತಮ ಹಾಗೂ ಅತ್ಯವಶ್ಯಕವಾಗಿದೆ. ಪ್ರತಿಯೊಬ್ಬರು ತಮ್ಮ ತಮ್ಮ ಜವಾಬ್ದಾರಿ ಅರಿತು ಗುಣಮಟ್ಟದ ಔಷಧಿಗಳನ್ನು ವಿತರಿಸುವಂತೆ ಸಲಹೆ ನೀಡಿದರು.
ಕಡ್ಡಾಯವಾಗಿ ಅವಧಿ ಮೀರದ ಔಷಧಿಗಳನ್ನು ಪರಿಶೀಲಿಸಿ ಬಳಿಕವಷ್ಟೇ ಸಾರ್ವಜನಿಕರಿಗೆ ವಿತರಿಸುವ ಮಹತ್ತರ ಜವಾಬ್ದಾರಿ ನಿರ್ವಹಿಸುವಂತೆ ಸೂಚನೆ ನೀಡಿದರು. ಕಾರ್ಯಕ್ರಮದಲ್ಲಿ ಶ್ರೀರಂಗಪಟ್ಟಣ ಕಾವೇರಿ ಮೆಡಿಕಲ್ಸ್ನ ಎಂ.ನಂದೀಶ್ ಹಾಗೂ ಅರಕೆರೆ ಶ್ರೀಕಂಠೇಶ್ವರ ಮೆಡಿಕಲ್ಸ್ನ ಜೆ.ಎಂ.ಸತೀಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ ಸಹಾಯಕ ಔಷಧ ನಿಯಂತ್ರಕರಾದ ಮೊಹಮ್ಮದ್ ಚೌಹಾರ್ ಖಾಲದ್, ಎಂಡಿಸಿಡಿಒ ಗೌರವ ಸಲಹೆಗಾರ ಕೆ.ಪ್ರಭಾಕರನ್, ಸಂಘದ ಕಾರ್ಯಕಾರಿ ಸಮಿತಿ ಪ್ರದೀಪ್ ಕುಮಾರ್, ಝಿಜಿವುಲ್ಲಾ, ಡಾ.ಮುನೀರ್ ಅಹಮ್ಮದ್, ವಿನೋದ್ ಕುಮಾರ್, ಸುದರ್ಶನ್, ಕಬೀರ್, ರಮೇಶ್, ಭಾನುಪ್ರಕಾಶ್, ಅಕ್ಷತಾ, ತೇಜು, ಕಾರ್ತಿಕ್, ರಾಕೇಶ್, ಚಂದ್ರಕಲಾ, ವಸೀಂ ಖಾನ್, ಚಂದ್ರಶೇಖರ್, ನಯನ, ನಾರಾಯಣಚಾರಿ, ಶಿವಕುಮಾರ್, ವೆಂಕಟೇಶ್, ನವೀನ್ ಕುಮಾರ್ ಉಪಸ್ಥಿತರಿದ್ದರು.