ಸಾರಾಂಶ
ಹಾವೇರಿ: ಆರೋಗ್ಯ ಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಸಮರ್ಪಕ ಸೇವೆ ನೀಡುವಲ್ಲಿ ಫಾರ್ಮಸಿ ಅಧಿಕಾರಿಗಳು ಒಂದು ಕಣ್ಣಾಗಿದ್ದರೆ, ನರ್ಸಿಂಗ್ ಸಿಬ್ಬಂದಿ ಇನ್ನೊಂದು ಕಣ್ಣಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಪ್ರಭಾಕರ ಕುಂದೂರ ಹೇಳಿದರು.ನಗರದ ಶಿವ ಕನ್ವೆನ್ಷನ್ ಹಾಲ್ನಲ್ಲಿ ಗುರುವಾರ ವಿಶ್ವ ಫಾರ್ಮಸಿಸ್ಟ್ ದಿನದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಾಗಾರ ಮತ್ತು ನೂತನ ಜಿಲ್ಲಾ ಸಂಘದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಕೋವಿಡ್ ನಂತರದ ಸಮಯದಲ್ಲಿ ಸ್ವತಃ ಮಾತ್ರೆ ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದ್ದು, ಇದರಿಂದ ಅಪಾಯ ಹೆಚ್ಚುತ್ತದೆ. ಇಂದು ಔಷಧ ಇಲ್ಲದ ಜೀವನವನ್ನು ಊಹಿಸಲು ಸಾಧ್ಯವಿಲ್ಲ. ಹಿಂದೆ ವಿಶೇಷ ಸಂದರ್ಭದಲ್ಲಿ ಮಾತ್ರ ಆಸ್ಪತ್ರೆಗೆ ಹೋಗಲಾಗುತ್ತಿತ್ತು. ಆದರೆ ಇಂದು ಅವಶ್ಯಕತೆ ಇಲ್ಲದೆ ಮಾತ್ರೆ ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಿದೆ. ಜನರಲ್ಲಿ ಔಷಧಿಗಳ ಬಗ್ಗೆ ಒಲವು ಹೆಚ್ಚಿದ್ದು, ಹೆಚ್ಚು ಮಾತ್ರೆ ನೀಡದೆ ಇದ್ದಲ್ಲಿ ವೈದ್ಯರನ್ನು ಅನುಮಾನದಿಂದ ನೋಡುವ ಸ್ಥಿತಿ ಉಂಟಾಗಿದೆ ಎಂದರು.ಆರೋಗ್ಯ ಇಲಾಖೆಯಲ್ಲಿ ಫಾರ್ಮಸಿ ಅಧಿಕಾರಿಗಳ ಪಾತ್ರ ಹೆಚ್ಚಿದೆ. ಪ್ರತಿಯೊಂದು ಆಸ್ಪತ್ರೆಗೆ ಫಾರ್ಮಸಿ ಅಧಿಕಾರಿಗಳು ಕಡ್ಡಾಯವಾಗಿ ಬೇಕಾಗುತ್ತದೆ. ಕೆಲಸದ ಒತ್ತಡ ಹೆಚ್ಚಿದೆ ಜೊತೆಗೆ ರೋಗಿಗಳ ಸಂಖ್ಯೆಯೂ ಹೆಚ್ಚಿದೆ. ಹಲವು ವರ್ಷಗಳಿಂದ ಬಹಳಷ್ಟು ಹುದ್ದೆಗಳು ಖಾಲಿಯಿವೆ. ಮಂಜೂರಾದ ಹುದ್ದೆಗಳನ್ನು ಭರ್ತಿ ಮಾಡುವ ಅವಶ್ಯಕತೆ ಇದೆ. ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳ ಭರ್ತಿಗೆ ಸಂಘದ ಪದಾಧಿಕಾರಿಗಳು ಗಮನ ಹರಿಸಬೇಕು ಎಂದು ಹೇಳಿದರು.ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಪ್ರಭಾಕರ ವಿ., ಮಾತನಾಡಿ, ಫಾರ್ಮಸಿ ಅಧಿಕಾರಿಗಳ ವೃತ್ತಿ ಘನತೆ, ಅನಿವಾರ್ಯತೆ ಹಾಗೂ ಪ್ರಾಮುಖ್ಯತೆ ಬಗ್ಗೆ ಜನರಿಗೆ ತಿಳಿಸಬೇಕಿದೆ. ವಿಶ್ವದಲ್ಲಿ ಸರಿಯಾದ ಕಾಯಿಲೆಗಳನ್ನು ಗುರುತಿಸಿ ಔಷಧೋಪಚಾರ ಮಾಡದ ಪರಿಣಾಮ ಸಾವು ನೋವುಗಳು ಹೆಚ್ಚಾಗುತ್ತಿವೆ. ಈ ನಿಟ್ಟಿನಲ್ಲಿ ಸಮಾಜದ ಹಿತದೃಷ್ಟಿಯಿಂದ ಹೆಚ್ಚಿನ ಜವಾಬ್ದಾರಿಯಿಂದ ಫಾರ್ಮಸಿ ಅಧಿಕಾರಿಗಳು ತಮ್ಮ ಕೆಲಸವನ್ನು ನಿರ್ವಹಿಸಬೇಕಿದೆ ಎಂದರು. ಕಾರ್ಯಕ್ರಮ ಉದ್ಘಾಟಿಸಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಗದೀಶ್ ಪಾಟೀಲ ಹಾಗೂ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ನೀಲೇಶ್ ಎಂ.ಎನ್ ಮಾತನಾಡಿದರು. ಹಾವೇರಿ ಎಂಆರ್ಎಂ ಪಿಯು ಕಾಲೇಜಿನ ಪ್ರಾಚಾರ್ಯ ಡಾ. ಎಂ. ರಾಮಮೋಹನರಾವ್ ಅವರು ವೃತ್ತಿ ಕೌಶಲ್ಯ ಹಾಗೂ ಒತ್ತಡ ನಿರ್ವಹಣೆ ಕುರಿತು ಉಪನ್ಯಾಸ ನೀಡಿದರು.ಕಾರ್ಯಕ್ರಮದಲ್ಲಿ ನೂತನ ಜಿಲ್ಲಾ ಘಟಕದ ಪದಾಧಿಕಾರಿಗಳು ಅಧಿಕಾರ ಪದಗ್ರಹಣ ಮಾಡಿದರು. ಇದೇ ಸಂದರ್ಭದಲ್ಲಿ ವಯೋನಿವೃತ್ತ ಫಾರ್ಮಸಿ ಅಧಿಕಾರಿಗಳು ಹಾಗೂ ಬೇರೆ ಜಿಲ್ಲೆಗೆ ವರ್ಗಾವಣೆಗೊಂಡ ಫಾರ್ಮಿಸಿ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫಾರ್ಮಸಿ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಪಟೇಲ ಮಹಮದ ಅಸಗರ ವಹಿಸಿದ್ದರು. ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ರಾಮಕೃಷ್ಣ ಘಾಟಗೆ, ಅಮೀತಕುಮಾರ ಉದಗಟ್ಟಿ, ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ್ ಮೊರೆರ್, ಉತ್ತರ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಮಹೇಶ್, ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಶಿವಕುಮಾರ್, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ದೇವರಾಜ್ ಎಸ್, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ.ಚನ್ನಬಸಯ್ಯ ವಿರಕ್ತಮಠ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಭಾರತಿ ದಡ್ಡೂರ, ಗೌರವಾಧ್ಯಕ್ಷ ರವಿರಾಜ್ ಚೌವ್ಹಾಣ ಸೇರಿದಂತೆ ಇತರರು ಇದ್ದರು.ಆನಂದಗೌಡ ಹಿರೇಗೌಡ್ರ ಸ್ವಾಗತಿಸಿದರು. ನಾಗರಾಜ ನಡುವಿನಮಠ ನಿರೂಪಿಸಿದರು.ಜಿಲ್ಲೆಯಲ್ಲಿರುವ 72 ಇಲಾಖೆಯಲ್ಲಿ ಅಧಿಕಾರಿಗಳಿಗೆ ತೊಂದರೆ ಆದಲ್ಲಿ ಅವರ ಬೆಂಬಲಕ್ಕೆ ನಾವು ನಿಂತಿದ್ದೇವೆ. ಜಿಲ್ಲಾ ಸಮಾಲೋಚನಾ ಸಭೆಯನ್ನು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆಸಲಾಗುತ್ತದೆ. ಆರೋಗ್ಯ ಇಲಾಖೆಯಲ್ಲಿ ಇತ್ತೀಚೆಗೆ ವರ್ಗಾವಣೆ ಸಂದರ್ಭದಲ್ಲಿ ಕ್ರಿಟಿಕಲ್ ಹಾಗೂ ನಾನ್ ಕ್ರಿಟಿಕಲ್ ಎಂದು ವಿಭಾಗಿಸಿ ವರ್ಗಾವಣೆ ಮಾಡಲಾಗಿದೆ. ಇದರಿಂದ ಇಲಾಖಾ ಸಿಬ್ಬಂದಿಗಳಿಗೆ ಬಹಳ ತೊಂದರೆಯಾಗಿದೆ ಎಂಬುದು ಗಮನಕ್ಕೆ ಬಂದಿದೆ. ಈ ಬಗ್ಗೆ ಉನ್ನತ ಅಧಿಕಾರಿಗಳ ಜೊತೆಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಲಾಗುತ್ತದೆ ಎಂದು ನೌಕರ ಸಂಘದ ಜಿಲ್ಲಾಧ್ಯಕ್ಷ ಮಲ್ಲೇಶ ಕರಿಗಾರ ಹೇಳಿದರು.