ಸಾರಾಂಶ
ಕನ್ನಡಪ್ರಭ ವಾರ್ತೆ ಲೋಕಾಪುರ
ಸ್ವಚ್ಛತೆ ಆರೋಗ್ಯದ ಅತ್ಯಂತ ಪ್ರಮುಖ ಅಂಶವಾಗಿದೆ. ಸ್ವಚ್ಛತೆ ಇಲ್ಲದಿದ್ದರೆ ಅನೇಕ ರೋಗಗಳಿಗೆ ಕಾರಣವಾಗಬಹುದು. ವೈಯಕ್ತಿಕ ಸ್ವಚ್ಛತೆಗಾಗಿ ನಾವು ಶ್ರಮಿಸಿದರೆ, ನಮ್ಮ ಸುತ್ತಮುತ್ತಲಿನ ಪರಿಸರದ ಸ್ವಚ್ಛತೆಗೆ ಕಾರ್ಮಿಕರ ಸೇವೆ ಸ್ಮರಣೀಯ ಎಂದು ಮಾಜಿ ಸಚಿವ ಹಾಗೂ ಬೀಳಗಿ ಶುಗರ್ಸ್ ಹಾಗೂ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಎಸ್.ಆರ್. ಪಾಟೀಲ ಹೇಳಿದರು.ಸಮೀಪದ ತಿಮ್ಮಾಪೂರ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡ ಪರಿಸರ ದಿನಾಚರಣೆ ಹಾಗೂ ಕಾರ್ಮಿಕರ ಕುಟುಂಬ ದಿನಾಚರಣೆ ಪ್ರಯುಕ್ತ ಮಾತನಾಡಿದ ಅವರು, ನಮ್ಮ ಬದುಕಿನ ವಿಧಾನವನ್ನು ಪರಿಸರಕ್ಕೆ ಪೂರಕವಾಗಿ ಬದಲಿಸಿಕೊಂಡರೆ ಮಾತ್ರ ಮುಂದಿನ ಪೀಳಿಗೆ ನೆಮ್ಮದಿಯಿಂದ ಬದುಕಲು ಸಾಧ್ಯ ಎಂದ ಅವರು, ಪ್ಲಾಸ್ಟಿಕ್ ಮುಕ್ತ ಪರಿಸರಕ್ಕೆ ಆದ್ಯತೆ ನೀಡಲು ಕರೆ ನೀಡಿದರು.
ಕಾರ್ಮಿಕರ ಕುಟುಂಬದ ಜೊತೆಗೆ ಮಾಜಿ ಸಚಿವರು ಕುಶಲೋಪಹಾರಿ ವಿಚಾರಿಸಿದರು.ಮಾನವ ಸಂಪನ್ಮೂಲ ಇಲಾಖೆ ಮುಖ್ಯಸ್ಥ ಮಾಧವ ಜೋಶಿ ಮಾತನಾಡಿ, ಕಾರ್ಮಿಕರ ದಿನಾಚರಣೆಯನ್ನು ಇಡೀ ಜಗತ್ತಿನಲ್ಲೇ ಮಾಡುವುದು ವಾಡಿಕೆ, ಆದರೆ ಕಾರ್ಮಿಕರ ಕುಟುಂಬ ಕಲ್ಯಾಣ ದಿನಾಚರಣೆಯನ್ನು ಮಾಡುತ್ತಿರುವ ಅಧ್ಯಕ್ಷ ಎಸ್.ಆರ್. ಪಾಟೀಲ ಅವರ ಕಾರ್ಯ ಶ್ಲಾಘನೀಯ. ದುಡಿಯುವ ವರ್ಗದ ಕುಟುಂಬಕ್ಕೆ ಆಧಾರವಾಗಲು ಕಾರ್ಖಾನೆಯಲ್ಲಿ ಎಲ್ಲ ನೆರವು ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು. ಎಸ್.ಆರ್. ಪಾಟೀಲ ಅವರ ನೇತೃತ್ವದಲ್ಲಿ ಈ ಕಾರ್ಖಾನೆ ಪ್ರಾರಂಭವಾಗಿದ್ದು ಕಾರ್ಮಿಕರ ಪರವಾಗಿ ಕೃತಜ್ಞತೆ ಸಲ್ಲಿಸಿದರು.
ಇದೇ ವೇಳೆ ಕಾರ್ಖಾನೆ ಆವರಣದಲ್ಲಿ ಗೀತಾಂಜಲಿ ಉದ್ಯಾನ ಅನಾವರಣಗೊಳಿಸಲಾಯಿತು.ಈ ವೇಳೆ ಬೀಳಗಿ ಶುಗರ್ಸ್ ನಿರ್ದೇಶಕರಾದ ಎಚ್.ಎಲ್. ಪಾಟೀಲ, ಸುರೇಶಗೌಡ ಪಾಟೀಲ, ರಾಹುಲ್ ನಾಡಗೌಡ, ಮಂಜುನಾಥ ಅರಳಿಕಟ್ಟಿ, ಪ್ರಗತಿಪರ ರೈತ ಮುಖಂಡ ವಿಠ್ಠಲ ತುಮ್ಮರಮಟ್ಟಿ, ಕಾರ್ಮಿಕರ ಸಂಘದ ಅಧ್ಯಕ್ಷ ಐ.ಜಿ. ಪಾಟೀಲ, ಪ್ರಕಾಶ ಕಬ್ಬೂರ ಎಲ್ಲ ಕಾರ್ಮಿಕರ ಮುಖಂಡರು, ಕುಟುಂಬಸ್ಥರು, ಕಾರ್ಖಾನೆ ಸಿಬ್ಬಂದಿ ಇದ್ದರು.
ಕಾರ್ಮಿಕರ ಕುಟುಂಬದ ಜೊತೆಗೆ ಕಾರ್ಖಾನೆ ಇರಲಿದೆ. ಕಾರ್ಮಿಕರ ಏಳ್ಗೆಗೆಗೆ ನಾವು ಸದಾ ಸಿದ್ಧ. ಕಾರ್ಖಾನೆಯಲ್ಲಿ ದುಡಿಯುವ ಕಾರ್ಮಿಕರೇ ಕಾರ್ಖಾನೆಯ ಆಧಾರ ಸ್ತಂಭ. ಕಾರ್ಮಿಕರ ಕುಟುಂಬ ಮುನ್ನಡೆಸಲು ನಮ್ಮಲ್ಲೇ ಸಖಿ ಮಹಿಳಾ ಕೇಂದ್ರ ಸ್ಥಾಪಿಸಲಾಗುವುದು.ಎಸ್.ಆರ್. ಪಾಟೀಲ ಮಾಜಿ ಸಚಿವರು