ಸಾರಾಂಶ
ವೈಚಾರಿಕ-ವೈಜ್ಞಾನಿಕ ನಿಲುವು ಹೊಂದಿದ್ದ ತೋಂಟದ ಸಿದ್ಧಲಿಂಗ ಸ್ವಾಮಿಗಳು ಮಾನವೀಯತೆಯ ಮೇರು ಪರ್ವತವಾಗಿದ್ದರು
ಗದಗ: ಕನ್ನಡದ ಕುಲಗುರು, ಕೋಮು ಸೌಹಾರ್ದತೆಯ ಹರಿಕಾರರು ಎನಿಸಿದ್ದ ಲಿಂ.ಡಾ. ತೋಂಟದ ಸಿದ್ಧಲಿಂಗ ಸ್ವಾಮಿಗಳು ನಾಡು-ನುಡಿಗೆ ಸಲ್ಲಿಸಿದ ಸೇವೆ ಅನನ್ಯವಾಗಿದ್ದು, ಅವರ ಉದಾತ್ತ ಆದರ್ಶಗಳು ಎಂದಿಗೂ ಅಮರವಾಗಿವೆ ಎಂದು ಲೆಕ್ಕ ಪರಿಶೋಧಕ ಕೆ.ಎಸ್.ಚಟ್ಟಿ ಹೇಳಿದರು.
ಅವರು ನಗರದ ಡಿ.ಸಿ. ಪಾವಟೆ ಶಿಕ್ಷಣ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ಡಾ. ತೋಂಟದ ಸಿದ್ಧಲಿಂಗ ಸ್ವಾಮಿಗಳ 6ನೇ ಪುಣ್ಯಸ್ಮರಣೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು.ಪರಿಸರ, ಪುಸ್ತಕ ಪ್ರಕಟಣೆ, ಶಿವಾನುಭವ, ಶಿಕ್ಷಣ ಸಂಸ್ಥೆಗಳು, ದಾಸೋಹ, ಬಸವತತ್ವ ಪ್ರಸಾರ ಹೀಗೆ ಲಿಂ. ಪೂಜ್ಯರ ಸೇವಾಕ್ಷೇತ್ರಗಳ ಎಲ್ಲೆ ವಿಸ್ತೃತವಾಗಿದ್ದು, ಧಾರ್ಮಿಕ ಕೇಂದ್ರಗಳ ಮೂಲಕ ಸಹ ಸಮಾಜ ಕಟ್ಟಲು ಸಾಧ್ಯವಿದೆ ಎಂದು ಶ್ರೀಗಳು ನಿರೂಪಿಸಿದ್ದಾರೆ ಎಂದರು.
ಪ್ರಾ. ಎಸ್.ಪಿ.ಗೌಳಿ ಮಾತನಾಡಿ, ವೈಚಾರಿಕ-ವೈಜ್ಞಾನಿಕ ನಿಲುವು ಹೊಂದಿದ್ದ ತೋಂಟದ ಸಿದ್ಧಲಿಂಗ ಸ್ವಾಮಿಗಳು ಮಾನವೀಯತೆಯ ಮೇರು ಪರ್ವತವಾಗಿದ್ದರು. ತನ್ನ ವೈಭವ ಕಳೆದುಕೊಂಡು ಬರುಡಾಗಿದ್ದ ತೋಂಟದಾರ್ಯ ಮಠವನ್ನು ರಾಷ್ಟ್ರಮಟ್ಟದಲ್ಲಿ ಧ್ರುವೀಕರಿಸುವಂತೆ ಮಾಡಿದ ಅವರು, ಭಕ್ತರ-ಅಭಿಮಾನಿಗಳ ಮನದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದರು.ಗಿರಿಜಾ ಹಸಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವಯೋಗ ಕೇಂದ್ರದ ಅಧ್ಯಕ್ಷ ಕೆ.ಎಸ್. ಪಲ್ಲೇದ ಅಧ್ಯಕ್ಷತೆ ವಹಿಸಿದ್ದರು. ಎಂ.ಕೆ.ಬಂಡಿಹಾಳ, ಕೆ.ವಿ. ಕೋರಡ್ಡಿ, ಎಸ್.ಎ. ಕಾಲವಾಡ ಸೇರಿದಂತೆ ಕಾಲೇಜಿನ ಪ್ರಶಿಕ್ಷಣಾರ್ಥಿಗಳು, ಬೋಧಕ-ಬೋಧಕೇತರ ಸಿಬ್ಬಂದಿ ಇದ್ದರು. ಶಿವಾನಂದ ಗಿಡ್ಡಕೆಂಚಣ್ಣವರ ಸ್ವಾಗತಿಸಿದರು.