ಸಮಾಜದ ಉದ್ಧಾರಕ್ಕಾಗಿ ಜೀವನ ತ್ಯಾಗ ಮಾಡಿದ ಶರಣರು

| Published : Jul 11 2025, 11:48 PM IST

ಸಾರಾಂಶ

ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಪರೋಪಕಾರ ಗುಣ ಬೆಳೆಸಿಕೊಳ್ಳಬೇಕು. ಧರ್ಮದ ಕಾರ್ಯ ಮಾಡುವ ಮೂಲಕ ದಾನ, ಧರ್ಮ ಮಾಡುವ ಮನೋಭಾವ, ಪ್ರವೃತ್ತಿ ಹೊಂದಬೇಕು. ಸಮಾಜದ ಒಳಿತಿಗಾಗಿ ಶ್ರಮಿಸಿದ ಅನೇಕ ಶರಣ, ಸಂತರಲ್ಲಿ ಅಥಣಿ ಮುರುಘೇಂದ್ರ ಶಿವಯೋಗಿಗಳು ಒಬ್ಬರಾಗಿದ್ದಾರೆ.

ಯಲಬುರ್ಗಾ:

ಅನೇಕ ಪುಣ್ಯ-ಪುರುಷರು ಸಮಾಜದ ಉದ್ಧಾರಕ್ಕಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿದ್ದಾರೆ. ಅಂತಹ ಮಹಾತ್ಮರ ಆದರ್ಶ ಎಲ್ಲರೂ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಹಾಲಕೆರೆ ಸಂಸ್ಥಾನಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.

ತಾಲೂಕಿನ ಸಂಗನಹಾಳ ಗ್ರಾಮದ ಹಾಲಕೆರೆಯ ಅನ್ನದಾನೀಶ್ವರ ಶಾಖಾ ಮಠದಲ್ಲಿ ಪ್ರಾರಂಭಿಸಲಾದ ಅಥಣಿ ಮುರುಘೇಂದ್ರ ಶಿವಯೋಗಿಗಳ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಪರೋಪಕಾರ ಗುಣ ಬೆಳೆಸಿಕೊಳ್ಳಬೇಕು. ಧರ್ಮದ ಕಾರ್ಯ ಮಾಡುವ ಮೂಲಕ ದಾನ, ಧರ್ಮ ಮಾಡುವ ಮನೋಭಾವ, ಪ್ರವೃತ್ತಿ ಹೊಂದಬೇಕು. ಸಮಾಜದ ಒಳಿತಿಗಾಗಿ ಶ್ರಮಿಸಿದ ಅನೇಕ ಶರಣ, ಸಂತರಲ್ಲಿ ಅಥಣಿ ಮುರುಘೇಂದ್ರ ಶಿವಯೋಗಿಗಳು ಒಬ್ಬರಾಗಿದ್ದಾರೆ. ಅಂಥ ಮಹಾತ್ಮರ ಕುರಿತ ಪುರಾಣ, ಪ್ರವಚನ ಆಲಿಸುವುದರಿಂದ ಮನಸ್ಸಿಗೆ ನೆಮ್ಮದಿ ಲಭಿಸುತ್ತದೆ ಎಂದರು.

ಸಂಗನಹಾಳ ಅನ್ನದಾನೀಶ್ವರ ಶಾಖಾ ಮಠದ ವಿಶ್ವೇಶ್ವರ ದೇವರು ಮಾತನಾಡಿ, ಒತ್ತಡದ ಬದುಕಿನಿಂದ ಹೊರಬರಲು ಶರಣರ ಕುರಿತ ಹಿತನುಡಿ ಆಲಿಸಬೇಕು. ಪ್ರವಚನ ಆಲಿಸುವುದರಿಂದ ಮಾನಸಿಕ ನೆಮ್ಮದಿ ಕಾಣಬಹುದು. ತಾಯಂದಿರು ತಮ್ಮ ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ಕಲಿಸಬೇಕು ಎಂದು ಹೇಳಿದರು.

ಪ್ರವಚನಕಾರ ಮೈಸೂರಿನ ನಿರಂಜನ ದೇವರು ಮಾತನಾಡಿ, ಮುರುಘೇಂದ್ರ ಶರಣರು ಯುಗಕ್ಕೊಂದು ಪ್ರಭೆಯಂತೆ ಉದಯಿಸಿ, ಜಗವನ್ನು ಬೆಳಗಿದರು. ತನು ಕರಣಾದಿಗಳ ಕರ್ಮವಾಸನೆಯನ್ನು ಕಳೆದು ಅವನ್ನು ಲಿಂಗಾರ್ಪಿತ ಮಾಡಿ, ಲಿಂಗ ಜ್ಯೋತಿಯಾಗಿ ಬೆಳಕಾಗಿದ್ದಾರೆ ಎಂದರು.

ಶರಣಬಸವ ಕೆ. ಸೋಮನಾಳ, ಪಂಚಾಕ್ಷರಿ ಹೂಗಾರ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಈ ವೇಳೆ ಗ್ರಾಪಂ ಸದಸ್ಯ ಮಲ್ಲಪ್ಪ ಕಿನ್ನಾಳ, ಗುರುಲಿಂಗಪ್ಪ ಕುಂಬಾರ, ಅಂದಪ್ಪ ಸೋಂಪುರ, ಬಸನಗೌಡ ಗಿರಡ್ಡಿ, ಯಲ್ಲಪ್ಪ ಅಡವಳ್ಳಿ, ಸಂಗಪ್ಪ ಶಿದ್ದರಡ್ಡಿ, ಗಣೇಶಪ್ಪ ಕಮ್ಮಾರ, ಹನುಮಂತ ಕೊಣ್ಣೂರ, ಸೋಮಶೇಖರ ಗಡಾದ, ಹೊನ್ನರಡ್ಡಿ ಹೊಸಮನಿ, ವಿಜಯಕುಮಾರ ಕವಲೂರ, ಶಿವಮೂರ್ತೆಪ್ಪ ತೊಟಗಂಟಿ, ಶರಣಯ್ಯ ಶಾಸ್ತ್ರಿಮಠ, ಸಂಗಪ್ಪ ಸಿಂದೋಗಿ ಸೇರಿದಂತೆ ಮತ್ತಿತರರು ಇದ್ದರು.