ಸಾರಾಂಶ
ಭರತ ಹುಣ್ಣಿಮೆ ಪ್ರಯುಕ್ತ ತಾಲೂಕಿನ ಜಿಗಣೇಹಳ್ಳಿಯ ವೇದಾ ನದಿ ತಟದಲ್ಲಿ ಬುಧವಾರ ಶ್ರೀ ಮೈಲಾರ ಲಿಂಗೇಶ್ವರಸ್ವಾಮಿ ಕಾರ್ಣಿಕೋತ್ಸವದಲ್ಲಿ ಆಕಾಶ ಹೊಳೆಯಿತೋ.. ಭೂಮಿ ಬೆಳಗೀತಲೇ ಪರಾಕ್ಎಂಬ ಕಾರ್ಣಿಕ ನುಡಿ ಮೊಳಗಿತು.
ಕಡೂರು: ಭರತ ಹುಣ್ಣಿಮೆ ಪ್ರಯುಕ್ತ ತಾಲೂಕಿನ ಜಿಗಣೇಹಳ್ಳಿಯ ವೇದಾ ನದಿ ತಟದಲ್ಲಿ ಬುಧವಾರ ಶ್ರೀ ಮೈಲಾರ ಲಿಂಗೇಶ್ವರಸ್ವಾಮಿ ಕಾರ್ಣಿಕೋತ್ಸವದಲ್ಲಿ ಆಕಾಶ ಹೊಳೆಯಿತೋ.. ಭೂಮಿ ಬೆಳಗೀತಲೇ ಪರಾಕ್ಎಂಬ ಕಾರ್ಣಿಕ ನುಡಿ ಮೊಳಗಿತು. ಶ್ರೀ ಮೈಲಾರಲಿಂಗ ಸ್ವಾಮಿ, ಶ್ರೀಆಂಜನೇಯಸ್ವಾಮಿ,ಶ್ರೀಕರಿಯಮ್ಮ ಮತ್ತು ವಿವಿಧ ದೇವರ ಉತ್ಸವ ಮೂರ್ತಿ ಗಳೊಂದಿಗೆ ಮೆರವಣಿಗೆ ನಡೆಸುವ ಮೂಲಕ ಸಾಂಪ್ರದಾಯಿಕ ವ್ರತ ಕೈಗೊಂಡಿದ್ದ ಕಾರ್ಣಿಕ ನುಡಿಯವ ಗಣಮಗ ಜಿಗಣೇ ಹಳ್ಳಿ ಮಂಜುನಾಥ್ ಅವರು ವಾದ್ಯವೃಂದದ ಜೊತೆಯಲ್ಲಿ ವೇದಾನದಿ ತೀರಕ್ಕೆ ಆಗಮಿಸಿ ಪೂಜಾ ಕಾರ್ಯ ನೆರವೇರಿಸಿದರು.
ಆ ನಂತರ ಕಾರ್ಣಿಕದ ವಿಧಿ ವಿಧಾನಗಳನ್ನು ಪೂರೈಸಿದ ನಂತರ ಗಣಮಗ ಮಂಜುನಾಥ್ ಬಿಲ್ಲನೇರಿ ಸದ್ದಲೇ...ಎಂದು ಕೂಗಿದಾಗ ಜನ ಜಂಗುಳಿಯಲ್ಲಿ ನಿಶ್ಯಬ್ಧ ಆವರಿಸಿತು. ಆಕಾಶ ಹೊಳೆಯಿತೋ.. ಭೂಮಿ ಬೆಳಗೀತಲೇ ಪರಾಕ್ ಎಂದು ಕಾರ್ಣಿಕದ ನುಡಿ ನುಡಿದಾಗ ಜನ ಹರ್ಷೋದ್ಗಾರ ಮಾಡಿದರು. ಈ ವರ್ಷ ಸಮೃದ್ಧಿಯಾಗಿ ಮಳೆಯಾಗುತ್ತದೆ. ಭೂಮಿ ಸಮೃದ್ಧ ಹಸಿರಿನಿಂದ ಬೆಳಗುತ್ತದೆ ಎಂದು ಕಾರ್ಣಿಕದ ನುಡಿಯನ್ನು ನೆರೆದಿದ್ದವರು ಅರ್ಥೈಸಿದರು.ಶ್ರೀ ಮೈಲಾರಲಿಂಗೇಶ್ವರ ಪೌರ್ಣಮಿ ಸೇವಾ ಸಮಿತಿ ಮುಖ್ಯಸ್ಥರು, ಜಿಗಣೇಹಳ್ಳಿ ಗ್ರಾಮಸ್ಥರು ಇದ್ದರು.
12ಕೆಕೆಡಿಯು2. ಕಾರ್ಣಿಕ ನುಡಿಯವ ಗಣಮಗ ಜಿಗಣೇಹಳ್ಳಿ ಮಂಜುನಾಥ್ ರವರು ಬಿಲ್ಲನೇರಿ ಕಾರ್ಣಿಕ ನುಡಿದರು.