ಕನ್ನಡಪ್ರಭ ವಾರ್ತೆ ಬೇಲೂರು
ಗಾನಕೋಗಿಲೆ ಎಸ್. ಜಾನಕಿಯವರ ನಿಧನದ ಹಿನ್ನೆಲೆ ಪಟ್ಟಣದ ಹೊಸನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚುಟುಕು ಸಾಹಿತ್ಯ ಪರಿಷತ್ನಿಂದ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಮಾಜಿ ಗೌರವಾಧ್ಯಕ್ಷ ರವಿ ನಾಕಲಗೂಡು ಮಾತನಾಡಿ, ದಕ್ಷಿಣ ಬಾರತದ ಗಾನ ಕೋಗಿಲೆ ಎಸ್.ಜಾನಕಿ ಅಮ್ಮ ಸಾವಿರಾರು ಹಾಡುಗಳನ್ನು ತಮ್ಮ ಕಂಠ ಸಿರಿಯ ಮೂಲಕ ದೇಶದ ಕೋಟ್ಯಾಂತರ ಜನತೆಗೆ ಮನರಂಜನೆ ಉಣ ಬಡಿಸಿದ್ದಾರೆ. ೧೪ ಭಾಷೆಗಳಲ್ಲಿ ೪೮ ಸಾವಿರ ಹಾಡುಗಳನ್ನು ಹಾಡಿರುವುದು ಹೆಮ್ಮೆಯ ಸಂಗತಿಯಾಗಿದೆ. ದಕ್ಷಿಣ ಭಾರತದಲ್ಲಿ ಎಸ್.ಜಾನಕಿ, ಎಸ್. ಪಿ. ಬಾಲಸುಬ್ರಹ್ಮಣ್ಯಂರವರು ಉತ್ತಮ ಸಾಧನೆ ಮಾಡಿದವರು. ಎಸ್. ಜಾನಕಿಯವರು ಆಂಧ್ರದಲ್ಲಿ ಹುಟ್ಟಿದರೂ ಕನ್ನಡ ಭಾಷೆಯಲ್ಲಿ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಅವರು ಕೊನೆಯ ದಿನಗಳನ್ನು ಮೈಸೂರಿನಲ್ಲೆ ಕಳೆದಿದ್ದು, ಅವರ ಕೊನೆಯ ಆಶಯದಂತೆ ಮೈಸೂರಿನಲ್ಲಿ ಅಂತ್ಯಸಂಸ್ಕಾರ ಮಾಡಿಸಿಕೊಂಡಿದ್ದು, ಭೌತಿಕವಾಗಿ ನಮ್ಮನ್ನಗಲಿದ್ದರೂ ಅವರ ಹಾಡುಗಳು ಎಂದಿಗೂ ಸದಾ ಜೀವಂತವಾಗಿರುತ್ತವೆ ಎಂದರು. ರೋಟರಿ ಕ್ಲಬ್ ಅಧ್ಯಕ್ಷ ಶಿವರಾಜ್ ಮಾತನಾಡಿ, ತಮ್ಮ ಸುಮಧುರ ಕಂಠದ ಮೂಲಕ ಕೋಟ್ಯಾಂತರ ಜನರ ಹೃದಯ ಗೆದ್ದ ಎಸ್.ಜಾನಕಿಯವರು ಸಂಗೀತ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ. ಎಸ್. ಜಾನಕಿಯವರ ನುಡಿ ನಮನ ಕಾರ್ಯಕ್ರಮವನ್ನು ರವಿ ನಾಕಲಗೂಡುರವರು ಜಿಲ್ಲೆಯಾದ್ಯಂತ ಆಚರಿಸುವ ಮೂಲಕ ಗೌರವ ಸಲ್ಲಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಪೊಲೀಸ್ ಇನ್ಸ್ಪೆಕ್ಟರ್ ರೇವಣ್ಣ ಮಾತನಾಡಿ, ಚಿಕ್ಕಂದಿನಲ್ಲಿ ನಾವು ಎಸ್.ಜಾನಕಿಯವರ ಹಾಡುಗಳನ್ನು ಕೇಳುತ್ತಲೇ ಬೆಳೆದವರು. ಅವರು ದಕ್ಷಿಣ ಭಾರತಕ್ಕೆ ಸಂಗೀತದ ಮೂಲಕ ಹೆಸರು ತಂದು ಕೊಟ್ಟು ತಮ್ಮ ಹಾಡಿನ ಮೂಲಕ ಸಂಗೀತ ಪ್ರೇಮಿಗಳ ಮನಸ್ಸು ಗೆದ್ದವರು. ಅವರು ನಮ್ಮನ್ನಗಲಿರುವುದು ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಹೇಳಿದರು.ಪುರಸಭೆ ಸದಸ್ಯೆ ಮೀನಾಕ್ಷಿ, ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಾನಂ ಲೋಕೇಶ್, ತಾಲೂಕು ಕಿರಣ್ ಕುಮಾರ್, ಡಾ. ಸಂತೋಷ್, ಸುಲೈಮಾನ್, ಸಿದ್ದೇಗೌಡ, ಧರ್ಮೇಗೌಡ, ಹಾಲಪ್ಪ, ಲಕ್ಷ್ಮಣ್, ಮಲ್ಲೇಶ್, ಅರುಣ್ ಕುಮಾರ್, ಹರೀಶ್, ಧನಂಜಯ ಸೇರಿದಂತೆ ಇತರರಿದ್ದರು.