ಚಿತ್ರದುರ್ಗದಲ್ಲಿ ರಾಜ್ಯಾಧ್ಯಕ್ಷ ಡಾ.ರಾಮ್‌ರಾಜ್ ಆರೋಪಕನ್ನಡಪ್ರಭ ವಾರ್ತೆ ಚಳ್ಳಕೆರೆ

ಪ್ರಸ್ತುತ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸರ್ಕಾರ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರವರು ರಚಿಸಿದ ಸಂವಿಧಾನಕ್ಕೆ ವಿರೋಧವಾಗಿ ವರ್ತನೆ ಮಾಡುತ್ತಿದ್ದಾರೆ. ಒಳ ಮೀಸಲಾತಿ ಜಾರಿಯೂ ಸೇರಿದಂತೆ ಎಲ್ಲಾ ಮೀಸಲಾತಿಯನ್ನು ಬದಿಗೊತ್ತಿದ್ದಾರೆ. ವಿಶೇಷವಾಗಿ ಎಸ್‌ಸಿ, ಎಸ್‌ಟಿ ಸಮುದಾಯದ ಮೀಸಲಾತಿ ಪ್ರಮಾಣವನ್ನು ಜಾರಿ ಗೊಳಿಸುವಲ್ಲಿ ಸರ್ಕಾರ ವಿಫಲವಾಗಿದ್ದು, ಬೇಡರ ಕಣ್ಣಪ್ಪ ವಾಲ್ಮೀಕಿ ಬುಡಕಟ್ಟು ಕ್ಷೇಮಾಭಿವೃದ್ಧಿ ಸಂಘ ಸರ್ಕಾರದ ಈ ನಿರ್ಧಾರವನ್ನು ಖಂಡಿಸಿದೆ ಎಂದು ರಾಜ್ಯಾಧ್ಯಕ್ಷ ಡಾ.ಬಿ.ರಾಮ್‌ರಾಜ್ ಆರೋಪಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆದಿವಾಸಿ ಬುಡಕಟ್ಟು, ಶೋಷಿತ, ದಲಿತ ಸಮುದಾಯಗಳ ಪ್ರತಿಬಿಂಬವಾಗಿರುವ ವಾಲ್ಮೀಕಿ ಸಮುದಾಯವೂ ಸಹ ಅನೇಕ ವರ್ಷಗಳಕಾಲ ಶೋಷಣೆಗೆ ಒಳಗಾಗಿತ್ತು. ಸಮುದಾಯದ ಹೋರಾಟದ ನಂತರ ಎಸ್ಸಿಗೆ ಶೇ.17, ಎಸ್‌ಟಿಗೆ ಶೇ.7ರ ಮೀಸಲಾತಿಯನ್ನು ನಿಗದಿಪಡಿಸಲಾಗಿತ್ತು. ಆದರೆ ಪ್ರಸ್ತುತ ಸರ್ಕಾರ ಎಸ್‌ಟಿ 7ರ ಮೀಸಲಾತಿಬದಲು ಶೇ.3ರ ಮೀಸಲಾತಿಯನ್ನು ನೇಮಕಾತಿಯಲ್ಲಿ ಅಳವಡಿಸುವ ಮೂಲಕ ನಮ್ಮ ಸಮಾಜದ ಬೆಳವಣಿಗೆಗೆ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿದರು.

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನೂತನತೆಗಳನ್ನು ಬಗೆಹರಿಸಿ ಎಸ್‌ಟಿ ಜನಾಂಗದ ಶೇ.7ರ ಮೀಸಲಾತಿ ಅನುಪಾತದ ಮೂಲಕ ಉದ್ಯೋಗ ನೇಮಕಾತಿ ಮಾಡಬೇಕೆಂದು ಆಗ್ರಹಿಸಿದರು. ವಿಫಲವಾದರೆ ಸರ್ಕಾರದ ವಿರುದ್ಧ ಬೀದಿ ಗಿಳಿದು ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.

ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಜೆ.ತಿಪ್ಪೇಸ್ವಾಮಿ ಮಾತನಾಡಿ, ವಾಲ್ಮೀಕಿ ನಿಗದ ಕೋಟ್ಯಂತರ ಹಣವನ್ನು ಸರ್ಕಾರ ದುರುಪಯೋಗ ಪಡಿಸಿಕೊಳ್ಳುವ ಮೂಲಕ ವಾಲ್ಮೀಕಿ ಸಮುದಾಯದ ಏಳಿಗೆಗೆ ಕೊಡಲಿ ಪೆಟ್ಟುನೀಡಿದೆ. ಪ್ರತಿಯೊಂದು ಹಂತದಲ್ಲೂ ವಾಲ್ಮೀಕಿ ಸಮಾಜಕ್ಕೆ ಸರ್ಕಾರ ಅಲಕ್ಷಿಸುತ್ತಾ ಬಂದಿದೆ. ಕಳೆದ ಎರಡು ವರ್ಷಗಳ ಹಿಂದೆ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಲು ರಾಜನಹಳ್ಳಿ ಸ್ವಾಮೀಜಿ ಪಾದಯಾತ್ರೆ ನಡೆಸಿ ಜನಾಂಗವನ್ನು ಜಾಗೃತಿಗೊಳಿಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಆದರೂ ಸರ್ಕಾರ ಸಮುದಾಯದೊಂದಿಗೆ ಚರ್ಚಿಸದೆ ಏಕಪಕ್ಷಿಯಾಗಿ ಶೇ.7ರ ಬದಲು 3ರ ಮೀಸಲಾತಿ ಜಾರಿಗೊಳಿಸಲು ಹೊರಟಿರುವುದು ನೋವಿನ ಸಂಗತಿ ಅಗತ್ಯವಿದ್ದರೆ ಸರ್ಕಾರದ ವಿರುದ್ದ ರಾಜ್ಯದ ಎಲ್ಲಾ ವಾಲ್ಮೀಕಿ ಸಮುದಾಯದ ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸುತ್ತೇವೆಂದರು.


ಪತ್ರಿಕಾಗೋಷ್ಠಿಯಲ್ಲಿ ಬಿ.ಎಂ.ಶ್ರೀನಿವಾಸ್, ಮೋಹನ್‌ಕುಮಾರ್, ಕೃಷ್ಣಮೂರ್ತಿ, ಚನ್ನಕೇಶವ, ಪ್ರಶಾಂತ್‌ ನಾಯಕ, ಜಿ.ಕೆ.ತಿಪ್ಪೇಶ್, ಈಶ್ವರನಾಯಕ, ಜಯಲಕ್ಷ್ಮಿ, ಮಲ್ಲೇಶ, ಕಾಟಯ್ಯ, ಮಂಜುನಾಥ ಮುಂತಾದವರು ಭಾಗವಹಿಸಿದ್ದರು.